ಕರ್ನಾಟಕ (ವ್ಯುತ್ಪತ್ತಿ): ಕರ್ಣಾಟಕ, ಕರ್ಣಾಟ ಮತ್ತು ಕನ್ನಡ ಶಬ್ದಗಳು, ದೇಶ, ಭಾಷೆ, ಜನ ಮತ್ತು ಕುಲಗಳನ್ನು ನಿರ್ದೇಶಿಸುತ್ತವೆ. ಕವಿರಾಜಮಾರ್ಗದಲ್ಲಿಯೂ ಆಂಡಯ್ಯನ ಕಬ್ಬಿಗರ ಕಾವದಲ್ಲಿಯೂ ಕನ್ನಡ ದೇಶವಾಚಕವಾಗಿದೆ. ಚೆನ್ನಬಸವೇಶ್ವರ, ನಿಜಗುಣ ಶಿವಯೋಗಿಗಳ ಉಲ್ಲೇಖನಗಳಲ್ಲಿ ಅದು ಕುಲವಾಚಕವಾಗಿ ಬಂದಿರುವಂತೆ ತೋರುತ್ತದೆ. ಮುಖ್ಯವಾಗಿ ಆ ಶಬ್ದಗಳು ದೇಶ ಮತ್ತು ಭಾಷಾ ವಾಚಕಗಳಾಗಿಯೇ ಪ್ರಯೋಗವಾಗುತ್ತವೆ. ಈ ಲೇಖನದಲ್ಲಿ ಕರ್ಣಾಟಕ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥವ್ಯಾಪ್ತಿಯನ್ನು ಕುರಿತು ವಿವೇಚಿಸಲಾಗಿದೆ. ಕರ್ಣಾಟ ಶಬ್ದದ ಪೂರ್ವಪ್ರಯೋಗಗಳು ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ. ಸಂಸ್ಕೃತ ಮಹಾಭಾರತದಲ್ಲಿ (ಪ್ರ.ಶ. 320-200?) ಜನಪದಗಳನ್ನು ಕುರಿತು ಹೇಳುವಾಗ ಸಭಾಪರ್ವದಲ್ಲಿ ಕರ್ಣಾಟಾಃ ಎಂದೂ (78-98), ಭೀಷ್ಮಪರ್ವದಲ್ಲಿ ಕರ್ಣಾಟಿಕಾಃ ಎಂದೂ (9-59) ಎರಡು ಮಾತುಗಳು ಬಂದಿವೆ. ಶೂದ್ರಕ ಕವಿಯ (ಪ್ರ.ಶ.ಸು. 400) ಮೃಚ್ಛಕಟಿಕ ನಾಟಕದ ಒಂದು ಸಂವಾದದಲ್ಲಿ, ವರಾಹಮಿಹಿರನ (ಪ್ರ.ಶ.ಸು. 6ನೆಯ ಶತಮಾನದ ಆದಿಭಾಗ) ಬೃಹತ್ಸಂಹಿತೆಯಲ್ಲಿ, ಮಾರ್ಕಂಡೇಯ ಪುರಾಣ (ಪ್ರ.ಶ.ಸು 8ನೆಯ ಶ.?) ಮತ್ತು ಸೋಮದೇವನ ಕಥಾಸರಿತ್ಸಾಗರಗಳಲ್ಲಿ ಕರ್ಣಾಟ ಶಬ್ದವನ್ನು ಕಾಣಬಹುದೆಂದು ವಿದ್ವಾಂಸರು ತಿಳಿಸಿದ್ದಾರೆ. ಗುಣಾಢ್ಯನ ಬೃಹತ್ಕಥೆಯಿಂದ ಆ ಪದವನ್ನು ಸೋಮದೇವ ಎತ್ತಿಕೊಂಡಿದ್ದ ಪಕ್ಷಕ್ಕೆ ಆ ಶಬ್ದದ ಬಳಕೆ ಪ್ರ.ಶ. 1-2 ನೆಯ ಶತಮಾನದಷ್ಟು ಹಿಂದ...
ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಂಶೋಧನಾ ವೇದಿಕೆ. ಶಂಕರ ನಿಂಗನೂರ