ವಿಷಯಕ್ಕೆ ಹೋಗಿ

BA. 1 OEC ಕನ್ನಡ ಸಾಹಿತ್ಯದ ಬೆಳವಣಿಗೆ

ಕನ್ನಡ ಸಾಹಿತ್ಯ ಬೆಳವಣಿಗೆ
 ಶ್ರೀಮಂತವೂ ವೈವಿಧ್ಯಪೂರ್ಣವೂ ಆದ ಕನ್ನಡ ಸಾಹಿತ್ಯಕ್ಕೆ ೨ ಸಾವಿರ ವರ್ಷಗಳಿಗೂ ಮೇಲ್ಪಟ್ಟ ಸುದೀರ್ಘ ಇತಿಹಾಸವಿದೆ. ಅಧ್ಯಯನದ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಮತ ಪ್ರಾಬಲ್ಯ, ಭಾಷೆಯ ಅವಸ್ಥೆಗಳು, ಪ್ರಮುಖ ಕವಿಗಳು, ಸಾಹಿತ್ಯ ರೂಪಗಳು, ಆಯಾ ಯುಗಮನೋಧರ್ಮ, ಶತಮಾನಾನುಪೂರ್ವಿ - ಈ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅನೇಕ ವಿಧದಲ್ಲಿ ವಿಭಾಗಿಸಿ ವಿಶ್ಲೇಷಿಸುವ ಕಾರ್ಯ ಇದುವರೆಗೆ ಸಾಕಷ್ಟು ನಡೆದಿದೆ. ಮತೀಯ ದೃಷ್ಟಿಯನ್ನನುಸರಿಸಿ ಜೈನಯುಗ, ವೀರಶೈವಯುಗ, ಬ್ರಾಹ್ಮಣಯುಗವೆಂದೂ ಪ್ರಮುಖ ಕವಿಗಳನ್ನಾಧರಿಸಿ ಪಂಪಯುಗ, ಬಸವಯುಗ, ಹರಿಹರಯುಗ, ಕುಮಾರವ್ಯಾಸಯುಗವೆಂದೂ ಸಾಹಿತ್ಯ ರೂಪಗಳನ್ನಾಧರಿಸಿ ಚಂಪೂ, ವಚನ, ರಗಳೆ, ತ್ರಿಪದಿ, ಸಾಂಗತ್ಯ ಯುಗಗಳೆಂದೂ ಭಾಷಾವಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವದ ಹಳಗನ್ನಡಕಾಲ, ಹಳಗನ್ನಡಕಾಲ, ನಡುಗನ್ನಡಕಾಲ, ಹೊಸಗನ್ನಡಕಾಲವೆಂದೂ ಆಯಾ ಯುಗಮನೋಧರ್ಮ ಮತ್ತು ಕವಿಕರ್ಮಕ್ಕೆ ಸಿಕ್ಕ ಮೂಲ ಪ್ರಚೋದನೆಯನ್ನು ಮುಖ್ಯವಾಗಿ ಆಧರಿಸಿ ಕ್ಷಾತ್ರ ಯುಗ, ಧರ್ಮಪ್ರಚಾರಯುಗ, ಸಾರ್ವಜನಿಕಯುಗ, ಆಧುನಿಕಯುಗವೆಂದೂ ಶತಮಾನಾನು ಪೂರ್ವಿಯನ್ನನುಸರಿಸಿ 10ನೆಯ ಶತಮಾನದ ಸಾಹಿತ್ಯ, 11ನೆಯ ಶತಮಾನದ ಸಾಹಿತ್ಯ - ಇತ್ಯಾದಿಯಾಗಿಯೂ -ಹೀಗೆ ಒಬ್ಬೊಬ್ಬ ವಿದ್ವಾಂಸರು ಒಂದೊಂದು ಕ್ರಮವನ್ನನುಸರಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನತೆ, ಪಂಪಯುಗ, ವಚನಯುಗ, ಹರಿಹರಯುಗ, ಕುಮಾರವ್ಯಾಸಯುಗ, ಆಧುನಿಕಯುಗ ಎಂಬ ಶೀರ್ಷಿಕೆಗಳ ಅಡಿಯಲ್ಲಿ ಕನ್ನಡ ವಾಙ್ಮಯವನ್ನು ಸ್ಥೂಲವಾಗಿ ಸಮೀಕ್ಷಿಸಲಾಗಿದೆ.

ಕನ್ನಡ ಸಾಹಿತ್ಯದ ಪ್ರಾಚೀನತೆ : ಕನ್ನಡ ಸಾಹಿತ್ಯ ಕ್ರಿಸ್ತಶಕದಷ್ಟೇ ಪ್ರಾಚೀನ ವಾಗಿದ್ದಿರಬೇಕೆಂಬುದು ಹಲವು ವಿದ್ವಾಂಸರ ಅಬಿಮತ. ಬೌದ್ಧರು ಕನ್ನಡದ ಆದಿಕವಿಗಳೆಂದೂ ಬೌದ್ಧಧರ್ಮದ ನಾಶದೊಂದಿಗೇ ಬೌದ್ಧ ಗ್ರಂಥಗಳೂ ನಾಶವಾಗಿದ್ದಿರಬೇಕೆಂದೂ ವಿದ್ವಾಂಸರು ಊಹಿಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯದ ಗದ್ದುಗೆಯೇರಿ ಬರೆಹ ರೂಪದಲ್ಲಿ ಪ್ರಪ್ರಥಮವಾಗಿ ಕಾಣಿಸಿಕೊಂಡಿರುವುದು ಸದ್ಯಕ್ಕೆ ತಿಳಿದಿರುವಂತೆ ಹಲ್ಮಿಡಿಯ ಶಾಸನದಲ್ಲಿ. ಇದರ ಮಂಗಳ ಶ್ಲೋಕ ಸಂಸ್ಕೃತದಲ್ಲಿದ್ದು, ಉಳಿದುದೆಲ್ಲ ಕನ್ನಡ ಲಿಪಿಯಲ್ಲಿ ಗದ್ಯ ರೂಪದಲ್ಲಿದೆ. ಭಾಷಾ ಶೈಲಿ ಸಂಸ್ಕೃತ ಪ್ರಚುರವಾಗಿ ಪ್ರೌಢವಾಗಿದೆ. ಇದನ್ನು ನೋಡಿದರೆ, ಇದಕ್ಕೂ ಪೂರ್ವದಲ್ಲಿಯೇ ಕನ್ನಡ ಸಾಹಿತ್ಯ ಸಾಕಷ್ಟು ಬೆಳೆದಿರಬೇಕೆಂದೂ ಈ ಶಾಸನ ಹುಟ್ಟುವ ವೇಳೆಗೆ ಕನ್ನಡದ ಮೇಲೆ ಸಂಸ್ಕೃತದ ಪ್ರಭಾವ ಗಾಢವಾಗಿದ್ದಿರಬೇಕೆಂದೂ ಊಹಿಸಲು ಅವಕಾಶವಿದೆ. ಹಾಗೆಯೇ ಪ್ರಾಚೀನಕಾಲದ ಇತರ ಹಲವು ಶಾಸನಗಳೂ ಅತ್ಯಂತ ಕಾವ್ಯಮಯವಾಗಿವೆ.

ಸು.7ನೆಯ ಶತಮಾನದ ಬಾದಾಮಿಯ ಶಾಸನ ಕಪ್ಪೆ ಅರಭಟ್ಟ ಎಂಬ ಕಲಿಯ ಶಕ್ತಿ ಸಾಹಸಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಅಚ್ಚಕನ್ನಡ ಛಂದಸ್ಸಾದ ತ್ರಿಪದಿಯಲ್ಲಿರುವ ಈ ಶಾಸನ ಭಾವಭಾಷೆಗಳ ವಿದ್ಯುದಾಲಿಂಗನದಿಂದ ಉದಿಸಿದ ಸುಂದರ ಭಾವಗೀತೆ ಯಂತಿದೆ. ಸುಮಾರು ಇದೇ ಕಾಲದಲ್ಲಿಯೇ ಹುಟ್ಟಿದ ಶ್ರವಣಬೆಳಗೊಳದ ಶಾಸನವೊಂದು ನಂದಿಸೇನನೆಂಬ ಜೈನಮುನಿಯ ವೈರಾಗ್ಯವನ್ನು ಹೃದಯಂಗಮವಾಗಿ ವರ್ಣಿಸುತ್ತದೆ. ಕವಿಹೃದಯವುಳ್ಳ ಇಂಥ ಶಾಸನಕರ್ತೃಗಳು ಕಾವ್ಯಕರ್ತೃಗಳಾಗಿಯೂ ಇದ್ದಿರಬಹುದು.

ಈಗ ದೊರಕಿರುವ ಕೆಲವು ಕನ್ನಡ ಗ್ರಂಥಗಳಲ್ಲಿ ಹಲವು ಕನ್ನಡ ಕೃತಿಕಾರರ ಪ್ರಸ್ತಾಪ ದೊರಕುತ್ತದೆ. ಅಂಥ ಕೆಲವು ಕೃತಿಕಾರರನ್ನು 7, 8, 9ನೆಯ ಶತಮಾನದವರೆಂದು ತೀರ್ಮಾನಿಸಬಹುದು. ಆದರೆ ಅವರ ಗ್ರಂಥಗಳು ಯಾವುವೂ ದೊರಕಿಲ್ಲ. ಈ ಸಂದರ್ಭದಲ್ಲಿ ತುಂಬಲೂರಾಚಾರ್ಯರು ಬರೆದ ಚೂಡಾಮಣಿ ಎಂಬ ತತ್ತ್ವಾರ್ಥ ಮಹಾಶಾಸ್ತ್ರದ ಮೇಲಿನ ವ್ಯಾಖ್ಯಾನ ಗ್ರಂಥವೂ ಗುಣಗಾಂಕಿಯಂ ಎಂಬ ಛಂದಶ್ಶಾಸ್ತ್ರದ ಗ್ರಂಥವೂ ಉಲ್ಲೇಖಾರ್ಹವಾದುವು. ತುಂಬಲೂರಾಚಾರ್ಯರ ಗ್ರಂಥ ತೊಂಬತ್ತಾರು ಸಹಸ್ರ ಗ್ರಂಥ ಪರಿಮಿತಿಯುಳ್ಳದ್ದೆಂದು ಭಟ್ಟಾಕಳಂಕನಿಂದ ತಿಳಿದುಬರುತ್ತದೆ. ಇಂಥ ಬೃಹತ್ತಾದ ಶಾಸ್ತ್ರಗ್ರಂಥವೊಂದು ಹುಟ್ಟಬೇಕಾದರೆ ಅದಕ್ಕೂ ಪೂರ್ವದಲ್ಲಿ ಸಾಹಿತ್ಯ ಸಮೃದ್ಧವಾಗಿ ಬೆಳೆದು ಬಂದಿರಬಹುದು. ‘ಗುಣಗಾಂಕಿಯಂ’ ಕವಿರಾಜಮಾರ್ಗದ ಸಮಕಾಲೀನ ವಾದುದೆಂದೂ ನಾಗವರ್ಮನ ಛಂದೋಂಬುದಿsಗೆ ಮಾದರಿಯೆಂದೂ ತಿಳಿದುಬರುತ್ತದೆ. ಇದು ಶಾಸ್ತ್ರಗ್ರಂಥವಾದುದರಿಂದ ಇದಕ್ಕೂ ಪೂರ್ವದಲ್ಲಿ ಸಾಹಿತ್ಯ ಬೆಳೆದಿರಬೇಕು. ತುಂಬಲೂರಾಚಾರ್ಯನ ಸಮಕಾಲೀನನಾದ ಶ್ಯಾಮಕುಂದಾಚಾರ್ಯ ಕನ್ನಡದಲ್ಲಿ ಪ್ರಾಭೃತವನ್ನು ರಚಿಸಿದನೆಂದು ತಿಳಿದುಬಂದಿದೆ. ಗಂಗರಾಜನಾದ ಸೈಗೊಟ್ಟ ಶಿವಮಾರ (ಸು.788-812) ಗಜಾಷ್ಟಕವನ್ನು ಕನ್ನಡದಲ್ಲಿ ಬರೆದಿದ್ದನೆಂದೂ ಅದು ಓವನಿಗೆಯೂ ಒನಕೆವಾಡೂ ಆಗಿದ್ದು ಜನಪ್ರಿಯವಾಗಿತ್ತೆಂದೂ ತಿಳಿದುಬರುತ್ತದೆ. ಇದು ದಾಖಲೆಗೊಂಡಿರುವ ಮೊಟ್ಟಮೊದಲ ಕನ್ನಡ ಜನಪದ ಕಾವ್ಯ.

ಈಗ ನಮಗೆ ದೊರೆತಿರುವ ಕನ್ನಡ ಗ್ರಂಥಗಳಲ್ಲಿ ಕವಿರಾಜಮಾರ್ಗ ಮೊಟ್ಟಮೊದಲನೆಯದು. ನೃಪತುಂಗನ ಆಸ್ಥಾನಕವಿ ಶ್ರೀ ವಿಜಯ ಇದರ ಕರ್ತೃ. ಇದು ಕನ್ನಡ ಭಾಷೆ ವ್ಯಾಕರಣ ಅಲಂಕಾರಗಳನ್ನು ನಿರೂಪಿಸುವ ಬಹುಮುಖ್ಯವಾದ ಲಕ್ಷಣ ಗ್ರಂಥವಾಗಿದ್ದು ಕನ್ನಡಿಗರ ಕೈಪಿಡಿಯಂತಿದೆ. ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಗಳನ್ನು ಕುರಿತು ಇದರ ಕರ್ತೃ ಆಡಿರುವ ನುಡಿಗಳು ಅತ್ಯಮೂಲ್ಯವಾಗಿವೆ. ಕವಿರಾಜ ಮಾರ್ಗಕಾರ ಕೊಡುವ ಕೆಲವು ಉದಾಹರಣ ಪದ್ಯಗಳು ಕಾವ್ಯಮಯ ವಾಗಿವೆಯಾಗಿ ಶಾಸ್ತ್ರಗ್ರಂಥವೊಂದು ಆ ರೀತಿ ಇರಬೇಕಾದರೆ ಆ ವೇಳೆಗೆ ಸಾಹಿತ್ಯ ಸಾಕಷ್ಟು ಬೆಳೆದು, ಪಳಗಿ ಹದಗೊಂಡಿರ ಬೇಕೆಂಬುದು ಸ್ವಯಂವೇದ್ಯ ವಾಗುತ್ತದೆ. ಆದ್ದರಿಂದ ಕನ್ನಡ ಸಾಹಿತ್ಯ ಕವಿರಾಜಮಾರ್ಗ ಕ್ಕಿಂತಲೂ ನಾಲ್ಕೈದು ಶತಮಾನಗಳಷ್ಟಾದರೂ ಪ್ರಾಚೀನವಾಗಿರಬೇಕು. ಕವಿರಾಜಮಾರ್ಗಕಾರ ತನ್ನ ಗ್ರಂಥಗಳಲ್ಲಿ ತನಗಿಂತ ಹಿಂದಿನ ಅನೇಕ ಕವಿಗಳನ್ನು ಹೆಸರಿಸಿದ್ದಾನೆ. ವಿಮಳೋದಯ, ನಾಗಾರ್ಜುನ, ಜಯಬಂಧು, ದುರ್ವಿನೀತ ಮೊದಲಾದವರೂ ಗದ್ಯಕವಿಗಳೆಂದೂ ಪರಮ ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲ ಪದ್ಯಕವಿಗಳೆಂದೂ ಹೇಳಿದ್ದಾನೆ. ಇವನ ಮಾತಿನ ಧೋರಣೆಯನ್ನು ನೋಡಿದರೆ ಈತ ಹೆಸರಿಸಿರುವ ಕವಿಗಳೆಲ್ಲರೂ ಪ್ರಸಿದ್ಧ ಕವಿಗಳಾಗಿದ್ದಂತೆ ತೋರುತ್ತದೆ. ಆದರೆ ಅವರು ಬರೆದ ಕಾವ್ಯಗಳಾವುವೆಂಬುದನ್ನು ಈತ ಹೇಳಿಲ್ಲ; ಅವರ ಗ್ರಂಥಗಳಾವುವೂ ಈಗ ನಮಗೆ ಸಮಗ್ರವಾಗಿ ದೊರೆತಿಲ್ಲ. ಆದರೂ ಇವರಲ್ಲಿ ಕೆಲವರ ಹೆಸರು ನಮಗೆ ಪರಿಚಿತವಾಗಿದೆ. ಗದ್ಯಕವಿಗಳಲ್ಲಿ ಒಬ್ಬನಾದ ದುರ್ವಿನೀತ (ಸು.529-79) ಗಂಗವಂಶದ ದೊರೆಯೆಂದೂ ಈತ ಬಹುಶ್ರುತನೂಮೇಧಾವಿಯೂ ಆಗಿದ್ದನೆಂದೂ ಶಾಸನಗಳಿಂದ ತಿಳಿಯುತ್ತದೆ. ಕಿರಾತಾರ್ಜುನೀಯದ ಹದಿನೈದನೆಯ ಸರ್ಗಕ್ಕೆ ಇವನು ಕನ್ನಡ ಟೀಕನ್ನು ಬರೆದಿರುವಂತೆ ತಿಳಿದುಬರುತ್ತದೆ. ಪೈಶಾಚೀ ಭಾಷೆಯಲ್ಲಿದ್ದ ಬೃಹತ್ಕಥೆಯನ್ನು ವಡ್ಡಕಥಾ ಎಂಬ ಹೆಸರಿನಿಂದ ಈತ ಕನ್ನಡಕ್ಕೆ ತಂದಿದ್ದಾನೆಂದೂ ಊಹೆ. ಕವಿರಾಜಮಾರ್ಗದಲ್ಲಿ ಹೇಳಿರುವ ಪದ್ಯಕವಿಗಳಲ್ಲಿ ಚಂದ್ರನನ್ನು ಹಲವು ಕನ್ನಡ ಕವಿಗಳು ಸ್ತುತಿಸಿದ್ದಾರೆ. ಇಷ್ಟೇ ಅಲ್ಲ, ಕವಿರಾಜಮಾರ್ಗದಲ್ಲಿ ಉದಾಹರಿಸಿರುವ ಹಲವಾರು ಪದ್ಯಗಳು ಎಲ್ಲಿಂದ ಎತ್ತಿಕೊಂಡವುಗಳೆಂಬ ವಿಷಯ ಗೊತ್ತಾಗುವುದಿಲ್ಲ. ಇವುಗಳಲ್ಲಿ ಹತ್ತಾರು ಪದ್ಯಗಳು ರಾಮಾಯಣದ ಹಲವಾರು ಸನ್ನಿವೇಶಗಳನ್ನು ಸೂಚಿಸುವುದರಿಂದ, ಆ ಕಾಲಕ್ಕಾಗಲೇ ಒಂದು ರಾಮಾಯಣ ಕನ್ನಡದಲ್ಲಿ ಹುಟ್ಟಿದ್ದಿತೆಂದು ಊಹಿಸಲವಕಾಶವಿದೆ. ಇದೇ ಗ್ರಂಥದಲ್ಲಿ ಕನ್ನಡ ಕಾವ್ಯ ಪ್ರಕಾರಗಳಲ್ಲಿ ಉನ್ನತ ಗುಣವುಳ್ಳ ಗದ್ಯಪದ್ಯ ಸಮ್ಮಿಶ್ರಣದ ಪ್ರಕಾರವನ್ನು ‘ಗದ್ಯ ಕಥೆ’ ಎಂಬ ಹೆಸರಿನಿಂದ ಪ್ರಾಚೀನ ಆಚಾರ್ಯರು ರಚಿಸಿದ್ದಾರೆ ಎಂದು ಹೇಳಿದೆ. ಅಲ್ಲದೆ ಕನ್ನಡಕ್ಕೇ ವಿಶಿಷ್ಟವಾದ ಚತ್ತಾಣ ಮತ್ತು ಬೆದಂಡೆಗಳಂಥ ಪದ್ಯಕಾವ್ಯಪ್ರಕಾರಗಳಿದ್ದುವೆಂದೂ ಇದರಲ್ಲಿ ಪ್ರಾಚೀನರಾದ ಕವಿಗಳು ಕೃತಿರಚನೆ ಮಾಡಿದ್ದರೆಂದೂ ತಿಳಿಯುತ್ತದೆ.

ಕವಿರಾಜಮಾರ್ಗ ಹುಟ್ಟಿದ ಹಿಂಚುಮುಂಚಿನಲ್ಲಿಯೇ ಅಸಗ, ಗುಣನಂದಿ ಮತ್ತು ಗುಣವರ್ಮ ಎಂಬ ಮೂವರು ಕವಿಗಳು ಕಾಣಬರುತ್ತಾರೆ. ಅಸಗನ ವರ್ಧಮಾನ ಚರಿತಂ ಎಂಬ ಸಂಸ್ಕೃತ ಗ್ರಂಥದಿಂದ ಈತ ಸು.853ರಲ್ಲಿ ಇದ್ದನೆಂಬುದು ಮಾತ್ರವಲ್ಲದೆ ಶ್ರೀ ಅಸಗಭೂಪಕೃತೇ ಎಂಬ ಅಲ್ಲಿನ ಹೇಳಿಕೆಯಿಂದ ಈತ ರಾಜನೂ ಆಗಿದ್ದಿರಬೇಕೆಂದು ಭಾವಿಸುವುದಕ್ಕೂ ಅವಕಾಶವಿದೆ. ಕನ್ನಡದ ಹಲವಾರು ಕವಿಗಳು ಈತನನ್ನು ಸ್ತುತಿಸಿದ್ದಾರೆ. ಈತನ ‘ಕರ್ನಾಟ ಕುಮಾರಸಂಭವ’ ಕನ್ನಡ ಕಾವ್ಯವೆಂದು ಜಯಕೀರ್ತಿಯ ಗ್ರಂಥದಿಂದ ತಿಳಿಯುತ್ತದೆ. ಗುಣನಂದಿಯನ್ನು ಭಟ್ಟಾಕಳಂಕ ಬಹು ಭಕ್ತಿಯಿಂದ ಭಗವಾನ್ ಗುಣನಂದಿ ಎಂದು ಕರೆದು ಗೌರವಿಸಿದ್ದಾನೆ. ಈತನ ಕಾವ್ಯದ ತುಣುಕೊಂದು ಕೇಶಿರಾಜನ ವ್ಯಾಕರಣದಲ್ಲಿದೆ. ಅದನ್ನು ನೋಡಿದರೆ ಈತ ಉತ್ತಮ ಕವಿಯೆಂದು ಭಾಸವಾಗುತ್ತದೆ. ಈತನ ಗ್ರಂಥವಾವುದೂ ಸಿಕ್ಕಿಲ್ಲ. ಗುಣವರ್ಮನು ಹರಿವಂಶ, ಶೂದ್ರಕ ಎಂಬ ಎರಡು ಉದ್ಗ್ರಂಥಗಳ ಕರ್ತೃವೆಂದು ಹೇಳುವುದಕ್ಕೆ ಅವಕಾಶವಿದೆ. ನಾಗವರ್ಮ, ಕೇಶಿರಾಜರು ಈತನ ಕಾವ್ಯಗಳನ್ನು ಹೆಸರಿಸಿದ್ದಾರೆ. ಮಲ್ಲಿಕಾರ್ಜುನ ಕವಿಯ ಸೂಕ್ತಿ ಸುಧಾರ್ಣವದಲ್ಲಿ ಗುಣವರ್ಮನ ಶೂದ್ರಕ ಕಾವ್ಯದ ಭಾಗಗಳು ದೊರೆಯುತ್ತವೆ. ಮೇಲಿನ ವಿವರಣೆಯಿಂದ ಕನ್ನಡ ಸಾಹಿತ್ಯ ಬಹುಶಃ ಕ್ರಿಸ್ತಶಕದ ಆರಂಭದಲ್ಲಿ ಪ್ರಾರಂಭವಾಗಿ ಐದು ಆರು ಶತಮಾನಗಳ ವೇಳೆಗಾಗಲೇ ಸಮೃದ್ಧಿಯಾಗಿ ಬೆಳೆದುಕೊಂಡು ಬಂದಿರಬಹುದೆಂದು ಹೇಳಬಹುದಾಗಿದೆ.

ಪಂಪಯುಗ : ಸು.900-1150. ಕನ್ನಡ ಸಾಹಿತ್ಯದ ಪ್ರಥಮ ಘಟ್ಟ ಪಂಪ ಯುಗ. ಪಂಪನಿಂದ ಬಸವಣ್ಣನವರೆಗೆ ಈ ಯುಗದ ವ್ಯಾಪ್ತಿಯಿದೆ. ಕನ್ನಡ ಸಾಹಿತ್ಯ ವಿಚ್ಫಿತ್ತಿಯಿಲ್ಲದೆ ಹರಿದುಕೊಂಡು ಹೋಗಿರುವುದು 10ನೆಯ ಶತಮಾನದಿಂದ ಮುಂದೆ. ಈ ಯುಗದ ಪ್ರಮುಖ ಕೊಡುಗೆಯೆಂದರೆ ಚಂಪೂಕಾವ್ಯಗಳು. ಈ ಯುಗದಲ್ಲಿ ಪಂಪ, ರನ್ನ, ಪೊನ್ನ- ಈ ಮೂವರು ಮಹಾಕಾವ್ಯಗಳನ್ನು ರಚಿಸಿ ಮಹಾಕವಿಗಳು ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. 10ನೆಯ ಶತಮಾನದ ಪೂರ್ವಾರ್ಧದಲ್ಲಿದ್ದ ಪಂಪ ಕನ್ನಡದ ಆದಿಕವಿಯೆಂದು ಪ್ರಸಿದ್ಧನಾಗಿದ್ದಾನೆ. ಚಾಳುಕ್ಯ ಅರಿಕೇಸರಿಯ ಆಸ್ಥಾನದಲ್ಲಿ ಕವಿಯೂ ಕಲಿಯೂ ಆಗಿದ್ದ ಈತ ಕಾಲದ ದೃಷ್ಟಿಯಿಂದ ಮಾತ್ರವಲ್ಲ, ಯೋಗ್ಯತೆಯ ದೃಷ್ಟಿಯಿಂದಲೂ ಕನ್ನಡದ ಆದಿಕವಿ. ಚಂಪೂ ಸಾಹಿತ್ಯಕ್ಕೆ ಭದ್ರವಾದ ಬುನಾದಿಯನ್ನು ಹಾಕಿ ಅದು ಸು. 2-3 ಶತಮಾನಗಳ ಕಾಲ ಪ್ರಭಾವೀ ಸಾಹಿತ್ಯ ಮಾಧ್ಯಮವಾಗಿ ಬಳಕೆಯಾಗುವಂತೆ ಮಾಡಿದವನು ಈತ. ಚಂಪೂ ಪರಂಪರೆಯಲ್ಲಿ ಲೌಕಿಕ ಧಾರ್ಮಿಕ ಎಂಬ ಎರಡು ರೀತಿಯ ಕಾವ್ಯಮಾರ್ಗಗಳಿಗೆ ಪಂಪನೇ ಸದ್ಯಕ್ಕೆ ಮೊದಲಿಗನೆನ್ನಬಹುದು. ಈತನ ಎರಡು ಕಾವ್ಯಗಳಾದ ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣಗಳಿಗೆ ಕ್ರಮವಾಗಿ ವ್ಯಾಸರ ಮಹಾಭಾರತ ಮತ್ತು ಜಿನಸೇನಾಚಾರ್ಯರ ಪೂರ್ವಪುರಾಣ ಆಕರ ಗ್ರಂಥಗಳು. ವಿಕ್ರಮಾರ್ಜುನ ವಿಜಯದಲ್ಲಿ ತನ್ನ ಆಶ್ರಯದಾತ ಅರಿಕೇಸರಿಯನ್ನು ಮಹಾಭಾರತದ ಅರ್ಜುನನೊಂದಿಗೆ ಸಮೀಕರಿಸಿ ಪೌರಾಣಿಕ, ಐತಿಹಾಸಿಕ ಅಂಶಗಳನ್ನು ಸ್ವಾರಸ್ಯವಾಗಿ ಹೊಂದಿಸಿ ಮಹಾಭಾರತದ ಕಥೆಯನ್ನು ಮೆಯ್ಗಡಲೀಯದೆ ನಿರೂಪಿಸಿದ್ದಾನೆ. ಆದಿಪುರಾಣ ಪ್ರಥಮಜಿನನಾದ ವೃಷಭನಾಥನ ಕಥೆಯನ್ನೊಳಗೊಂಡ, ಕಾವ್ಯಧರ್ಮ ಹಾಗೂ ಧರ್ಮ ಎರಡೂ ಸಮರಸವಾಗಿ ಬೆರೆತಿರುವ ಧಾರ್ಮಿಕ ಕಾವ್ಯ. ವಸ್ತು, ಭಾಷೆ, ಭಾವ, ಶೈಲಿ ಈ ಎಲ್ಲ ರೀತಿಯಿಂದ ಪಂಪನ ಕಾವ್ಯಗಳು ಕನ್ನಡ ಭಾಷೆಗೆ ಕೊಟ್ಟ ಅದ್ವಿತೀಯ ಕೊಡುಗೆಗಳಾಗಿವೆ.

ಪಂಪ‌ ನಂತರದ ಯುಗ

ಪಂಪನಿಂದ ಮುಂದೆ ಸು. 2 ಶತಮಾನಗಳಷ್ಟು ಕಾಲ ಕಾವ್ಯಕರ್ಮಕ್ಕೆ ಕೈಹಾಕಿದವರೆಲ್ಲರೂ ವಸ್ತು ರೀತಿಗಳಲ್ಲಿ, ಭಾವ ಭಾಷೆಗಳಲ್ಲಿ ಪಂಪನನ್ನೇ ಅನುಕರಿಸಿದ್ದಾರೆ; ಅನುಸರಿಸಿದ್ದಾರೆ. ಆದ್ದರಿಂದ ಈ ಕಾಲಮಾನವನ್ನು ಪಂಪಯುಗವೆಂದೇ ಕರೆಯುತ್ತಾರೆ. ಈ ಕಾಲದ ಸಾಹಿತ್ಯ ಅತ್ಯಂತ ಪ್ರೌಢವಾಗಿ, ಸತ್ತ್ವಯುಕ್ತವಾಗಿ, ರಸವತ್ತಾಗಿ ಇರುವುದರಿಂದ ಇದನ್ನು ಕನ್ನಡ ಸಾಹಿತ್ಯದ ಸುವರ್ಣಯುಗ ಎಂದೂ ಕರೆಯುವುದುಂಟು. ಈ ಯುಗದಲ್ಲಿ ಚಂಪೂಕಾವ್ಯಗಳು ಪ್ರಚುರವಾಗಿರುವುದರಿಂದ ಚಂಪೂಯುಗವೆಂದೂ ಈ ಕಾವ್ಯಗಳಲ್ಲಿ ಸಾಮಾನ್ಯವಾಗಿ ವೀರರಸ ನೊರೆಗಟ್ಟಿ ಹರಿಯುತ್ತಿರುವುದರಿಂದ ವೀರಯುಗವೆಂದೂ ಹೆಸರಿಸುವ ವಾಡಿಕೆಯಿದೆ. ಈ ಯುಗದ ಕವಿಗಳೆಲ್ಲರೂ ಬಹುಮಟ್ಟಿಗೆ ರಾಜಾಶ್ರಿತರು. ಪಂಪನಂತೆಯೇ ಜೈನಧರ್ಮಾನುಯಾಯಿಗಳಾದ ಮತ್ತಿಬ್ಬರು ಕವಿಗಳು ಪೊನ್ನ ಮತ್ತು ರನ್ನ. ಇಬ್ಬರೂ ರಾಜಪೂಜಿತರಾದ ಆಸ್ಥಾನಕವಿಗಳು. ಪಂಪನಂತೆಯೇ ತಮ್ಮ ಕಾವ್ಯಗಳಲ್ಲಿ ಒಂದನ್ನು ಧರ್ಮಕ್ಕೂ ಮತ್ತೊಂದನ್ನು ಲೌಕಿಕಕ್ಕೂ ಮೀಸಲು ಮಾಡಿದ್ದಾರೆ. ಲೌಕಿಕ ಕಾವ್ಯಗಳಲ್ಲಿ ಆಯಾ ಕವಿಗಳ ಪೋಷಕರು ಪುರಾಣಪುರುಷರ ವೇಷವನ್ನು ಧರಿಸಿ, ಆಯಾ ಕಾವ್ಯಗಳ ನಾಯಕರಾಗಿ ಮೆರೆದಿದ್ದಾರೆ. ರಾಷ್ಟ್ರಕೂಟ ಚಕ್ರವರ್ತಿ ಮುಮ್ಮಡಿ ಕೃಷ್ಣನ ಆಸ್ಥಾನಕವಿಯಾಗಿದ್ದ, ಕವಿಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ಪೊನ್ನನ ಶಾಂತಿಪುರಾಣ ಜೈನ ಧಾರ್ಮಿಕ ಗ್ರಂಥ. ಈತನ ‘ಭುವನೈಕರಾಮಾಭ್ಯುದಯ’ ಈಗ ಉಪಲಬ್ಧವಿಲ್ಲ. ಇದು ರಾಮಾಯಣದ ಕಥೆಯನ್ನು ಆಧರಿಸಿ ರಚಿತವಾದ ಲೌಕಿಕ ಕಾವ್ಯವೆಂದು ಊಹಿಸಲು ಅವಕಾಶವಿದೆ.

ರನ್ನನೂ ಪಂಪನ ಮೇಲ್ಪಂಕ್ತಿಯಲ್ಲಿ ಕಾವ್ಯರಚನೆ ಮಾಡಿದವನಾದರೂ ತನ್ನ ಸ್ವಂತಿಕೆಯನ್ನು ಮೆರೆದಿದ್ದಾನೆ. ಈತನ ಸಾಹಸಬಿsೕಮವಿಜಯಕ್ಕೆ (ಗದಾಯುದ್ಧ) ಪಂಪನ ಕೃತಿಯೇ ಪ್ರಮುಖ ಆಕರವಾದರೂ ರನ್ನನ ವ್ಯಕ್ತಿತ್ವದ ಅಚ್ಚು ಈ ಕಾವ್ಯದಲ್ಲಿ ಮೂಡಿಬಂದಿದೆ. ಕಥಾವಸ್ತು ಬಿsೕಮ-ದುರ್ಯೋಧನರ ಗದಾಯುದ್ಧವಾದರೂ ಇಡೀ ಭಾರತದ ಕಥೆಯೇ ಸಿಂಹಾವಲೋಕನಕ್ರಮದಿಂದ ಇಲ್ಲಿ ದಿಗ್ದರ್ಶಿತವಾಗಿದೆ. ಇದಕ್ಕೆ ವಾಹಕವಾಗಿರುವ ನಾಟಕೀಯ ಶೈಲಿ ರನ್ನ ಕನ್ನಡಕ್ಕಿತ್ತಿರುವ ಕಾಣಿಕೆ. ಈತನ ಅಜಿತಪುರಾಣಕ್ಕೆ ಜೈನಧಾರ್ಮಿಕ ಕಾವ್ಯಗಳಲ್ಲಿ ಪಂಪನ ಆದಿಪುರಾಣವನ್ನು ಬಿಟ್ಟರೆ ಉನ್ನತಸ್ಥಾನ ದೊರಕಿದೆ.

ವಡ್ಡಾರಾಧನೆ ಇದೇ ಕಾಲದಲ್ಲಿ ರಚಿತವಾದ ಒಂದು ವಿಶಿಷ್ಟ ಕೃತಿ. ಶಿವಕೋಟ್ಯಾಚಾರ್ಯ (ಸು.920) ಇದರ ಕರ್ತೃ. ಗದ್ಯದಲ್ಲಿರುವ ಈ ಕೃತಿ ಈಗ್ಗೆ ಸಹಸ್ರ ವರ್ಷಗಳ ಹಿಂದಿನ ಭಾಷಾಸ್ವರೂಪಕ್ಕೂ ಜನಜೀವನಕ್ಕೂ ಕನ್ನಡಿ ಹಿಡಿಯುತ್ತದೆ. ಸರಳ ಸುಂದರ ಶೈಲಿ, ಪ್ರಾಸಾದಿಕ ಗುಣ, ಕಥನಕಲೆ- ಇವು ಈ ಕೃತಿಯ ವೈಶಿಷ್ಟ್ಯಗಳು. ಕನ್ನಡ ಗದ್ಯ ಇತಿಹಾಸದಲ್ಲಿ ವಡ್ಡಾರಾಧನೆ ಒಂದು ಮೈಲಿಗಲ್ಲು.

ಈ ಯುಗದ ಮತ್ತೊಬ್ಬ ಹಿರಿಯ ಕವಿ ಒಂದನೆಯ ನಾಗವರ್ಮ. ಕರ್ನಾಟಕ ಕಾದಂಬರಿ, ಛಂದೋಂಬುದಿಗಳು ಈತನ ಗ್ರಂಥಗಳು. ಈತನೂ ಪಂಪನಂತೆಯೇ ತನ್ನ ಸ್ವಾಮಿ ಚಂದ್ರರಾಜನನ್ನು ಕಾವ್ಯದ ಕಥಾನಾಯಕನೊಡನೆ ಸಮೀಕರಿಸಿ, ತನ್ನ ಕರ್ನಾಟಕ ಕಾದಂಬರಿಯನ್ನು ರಚಿಸಿದನೆಂದು ತೋರುತ್ತದೆ. ಆದರೆ ಇದನ್ನು ಸ್ಪಷ್ಟಪಡಿಸುವಷ್ಟು ಸಾಧನಗಳಿಲ್ಲ. ಈತನ ಛಂದೋಂಬುದಿs ಕನ್ನಡದ ಮೊಟ್ಟ ಮೊದಲ ಛಂದೋಗ್ರಂಥ. ಕರ್ನಾಟಕ ಕಾದಂಬರಿ ಬಾಣಭಟ್ಟನ ಸಂಸ್ಕೃತ ಕಾದಂಬರಿಯ ಅನುವಾದ. ಮೂಲವನ್ನು ಕವಿ ಕನ್ನಡ ಚಂಪೂರೂಪಕ್ಕೆ ತಿರುಗಿಸಿದ್ದಾನೆ. ಮೂಲದ ಪದಗಳು ಕನ್ನಡ ರೂಪಾಂತರದಲ್ಲಿ ಕಂಡುಬರುವುವಾದರೂ ನಾಗವರ್ಮ ಬರಿಯ ಭಾಷಾಂತರಕಾರನಲ್ಲ. ಸಂಸ್ಕೃತದ ಉತ್ತಮ ಕಾವ್ಯವೊಂದನ್ನು ಸ್ವತಂತ್ರ ಕೃತಿಯೆಂಬಂತೆ ಕನ್ನಡದಲ್ಲಿ ರಚಿಸಿ, ಅದೊಂದು ಸಂಪ್ರದಾಯವನ್ನು ಬೆಳೆಸಿದವರಲ್ಲಿ ಈತ ಮೊದಲಿಗ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ