ವಿಷಯಕ್ಕೆ ಹೋಗಿ

ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ ರ‍್ಯಾಂಗ್ಲರ್ ಡಾ.ಡಿ.ಸಿ.ಪಾವಟೆ

ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ ರ‍್ಯಾಂಗ್ಲರ್ ಡಾ.ಡಿ.ಸಿ.ಪಾವಟೆ

ಒಂದು ಕ್ಷೇತ್ರದಲ್ಲಿ ಸಾಧಿಸಬೇಕಾದುದೆಲ್ಲವನ್ನೂ ಸಾಧಿಸಿ, ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವಲ್ಲಿ ದಕ್ಷತೆಯನ್ನು ತೋರಿ, ಯಶಸ್ಸುಗಳಿಸಿದ ಕೆಲವೇ ಮಹತ್ವದ ವ್ಯಕ್ತಿಗಳಲ್ಲಿ ಪದ್ಮಭೂಷಣ ಡಾ.ಡಿ.ಸಿಪಾವಟೆ ಅವರು ಒಬ್ಬರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರ ಎಂಬ ಗ್ರಾಮದಲ್ಲಿ ಅಗಸ್ಟ ೨, ೧೮೯೯ ರಂದು ಚಿಂತಪ್ಪ ಮತ್ತು ಶಾಂತವೀರಮ್ಮ ಎಂಬ ಆದರ್ಶ ದಂಪತಿಗಳ ಉದರದಲ್ಲಿ ಜನಿಸಿದ ಡಾ.ಡಿ.ಸಿ.ಪಾವಟೆ ಅವರು ಒಂದುವರೆ ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ತಂದೆಯ ಪಾಲನೆ-ಪೋಷಣೆಯಲ್ಲಿಯೇ ಬೆಳೆದು ದೊಡ್ಡವರಾದರು. ಮಮದಾಪುರ, ಗೋಕಾಕ ಮತ್ತು ರಬಕವಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು, ್ಲ ಧಾರವಾಡದ ಕರ್ನಾಟಕ ಕಾಲೇಜನ್ನು ಸೇರಿ ಉಚ್ಛ ಶಿಕ್ಷಣವನ್ನುಪೂರೈಸಿದರು. ಮುಂದೆ ೧೯೨೪-೨೫ ರ ಅವಧಿಯಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಕೈಗೊಂಡು, ಗಣಿತಶಾಸ್ತçದಲ್ಲಿನ ಸಾಧನೆಗಾಗಿ ರ‍್ಯಾಂಗ್ಲರ್ ಪದವಿ ಪಡೆದು ನಾಡಿಗೆ ಕೀರ್ತಿ ತಂದರು. ಸತತ ಪ್ರಯತ್ನ, ಶ್ರದ್ಧೆ ಮತ್ತು ಜಾಣ್ಮೆಯಿಂದ ಅಧ್ಯಯನ ಮಾಡಿದರೆ ಎಂಥ ಪದವಿಯನ್ನಾದರೂ ಪಡೆಯಬಹುದು ಎಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಡಾ.ಪಾವಟೆ ಅವರು ಅನೇಕ ಮಿತ್ರರನ್ನು ಸಂಪಾದಿಸಿಕೊಂಡರಲ್ಲದೆ, ಛಲಬಿಡದ ವಿಕ್ರಮನಂತೆ ಫ್ರಾನ್ಸ್ ದೇಶಕ್ಕೆ ಹೋಗಿ ಫ್ರೆಂಚ್ ಭಾಷೆಯನ್ನು ಕಲಿತು ತಮ್ಮ ಜ್ಞಾನ ಪರಿಧಿಯನ್ನು ವಿಸ್ತರಿಸಿಕೊಂಡರು.
ರ‍್ಯಾಂಗ್ಲರ್ ಪದವಿ ಪಡೆದು ಸ್ವದೇಶಕ್ಕೆ ಮರಳಿದ ಮೇಲೆ ೧೫ನೇ ಜುಲೈ ೧೯೨೮ರಂದು ಬನಾರಸ್ ಹಿಂದು ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಪ್ರೊಫೆಸರಾಗಿ ಸೇವೆ ಪ್ರಾರಂಭಿಸಿ, ಅಲ್ಲಿದ್ದ ಒಂದುವರೆ ವರ್ಷದ ಅವಧಿಯಲ್ಲಿಯೇ ‘ವ್ಯವಹಾರ ಜ್ಞಾನವುಳ್ಳ ಗಣಿತ ಪ್ರಾಧ್ಯಾಪಕ ಪಾವಟೆ’ ಎಂಬ ಖ್ಯಾತಿ ಪಡೆದರು. ಮುಂದೆ ಶಿಕ್ಷಣಾಧಿಕಾರಿಯಾಗಿ, ಡೆಪ್ಯೂಟಿ ಡೈರೆಕ್ಟರಾಗಿ, ಮುಂಬೈ ಪ್ರಾಂತದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಿರ್ದೇಶಕರಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆಸಲ್ಲಿಸಿದರು. ಈ ಅವಧಿಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿ ಅನೇಕ ಯೋಜನೆಗಳನ್ನು ಕೈಕೊಂಡು ಅವು ಕಾರ್ಯರೂಪಕ್ಕೆ ಬರುವಲ್ಲಿ ಹಗಲಿರುಳು ಶ್ರಮಿಸಿದರು. ಹಿಂದುಳಿದ ಪ್ರದೇಶ ಮತ್ತು ಜನಾಂಗಗಳ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ ಡಾ.ಪಾವಟೆಯವರು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡುವುದನ್ನು ಜಾರಿಯಲ್ಲಿ ತಂದು, ಉತ್ತಮ ಚಟುವಟಿಕೆಗಳಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿಸಲು ಕಾರಣರಾದರು. ಕಾಲೇಜು ಶಿಕ್ಷಣದಲ್ಲಿ ಅಧ್ಯಯನ ಅಧ್ಯಾಪನದೊಂದಿಗೆ ಸಂಶೋಧನೆಗೂ ಮಹತ್ವ ಕಲ್ಪಿಸಿದರು. ಶಿಕ್ಷಕರಿಗೆ ಬಡ್ತಿ ನೀಡುವಾಗ ಕೇವಲ ಅವರ ಸೇವೆಯನ್ನಷ್ಟೇ ಪರಿಗಣಿಸದೆ, ಅವರ ಕಾರ್ಯಚಟುವಟಿಕೆ, ಗ್ರಂಥ ರಚನೆ, ಸಂಶೋಧನ ಬರಹ, ಲೇಖನಗಳನ್ನು ಗಮನಿಸಬೇಕೆಂದು ಸಲಹೆ ನೀಡಿದರು. ಎಂದಿಗೂ ಯಾರೊಂದಿಗೂ ರಾಜಿಮಾಡಿಕೊಳ್ಳದ ಸ್ವಭಾವದವರಾಗಿದ್ದ ಡಾ.ಪಾವಟೆ ಅವರು ‘ಮನುಷ್ಯನಿಗೆ ಅನುಕೂಲತೆಗಿಂತ ಆತ್ಮಗೌರವ ಹೆಚ್ಚೆಂದು’ ಪರಿಭಾವಿಸಿದ್ದರು.
೧೮ನೇ ಅಗಸ್ಟ ೧೯೫೪ ರಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವನ್ನು ಅಲಂಕರಿಸಿ, ೧೯೬೭ರ ವರೆಗೆ ಅಂದರೆ ಸುಮಾರು ಹದಿಮೂರು ವರ್ಷ ವಿಶ್ವವಿದ್ಯಾಲಯವನ್ನು ಮುನ್ನಡೆಸಿದರು. ತಮ್ಮ ದೂರದೃಷ್ಟಿ, ಪರಿಶ್ರಮ, ಸಮರ್ಥ ಆಡಳಿತ ನಿರ್ವಹಣೆ ಇವೆಲ್ಲ ಗುಣಗಳಿಂದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭವ್ಯವಾದ, ವಿಶಾಲವಾದ, ಸುಂದರವಾದ ಕಟ್ಟಡವನ್ನು ನಿರ್ಮಿಸಿದರು. ಜೊತೆಗೆ ನಾಡಿನ ಶ್ರೇಷ್ಠ ಶಿಕ್ಷಣ ತಜ್ಞರನ್ನು, ವಿಜ್ಞಾನಿಗಳನ್ನು ಕವಿ ಸಾಹಿತಿಗಳನ್ನು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಆಯ್ಕೆ ಮಾಡುವುದರ ಮೂಲಕ ಶೈಕ್ಷಣಿಕ ದೃಢತೆಯನ್ನು ತಂದುಕೊಟ್ಟರು.
ಡಾ.ಪಾವಟೆ ಅವರಿಗೆ ೬೦ ವರ್ಷ ತುಂಬಿದಾಗ, ಅವರ ಹುಟ್ಟು ಹಬ್ಬ ಆಚರಿಸಲು ನಾಡಿನ ವಿವಿಧ ಪ್ರದೇಶಗಳಿಂದ ಜನರು ಆಗಮಿಸಿ ಶುಭಕೋರಿದರಲ್ಲದೆ, ರಾಷ್ಟ್ರಿಯ -ಅಂತರಾಷ್ಟ್ರಗಳಿಂದ ಅಭಿನಂದನೆಯ ಮಹಾಪೂರ ಹರಿದು ಬಂತು. ಕುಲಪತಿಗಳ ಅವಧಿ ಇನ್ನೂ ಎರಡು ವರ್ಷ ಇರುವಾಗಲೇ ೧೬೬೭ರಲ್ಲಿ ಪಂಜಾಬ ರಾಜ್ಯಪಾಲರಾಗಲು ಆಹ್ವಾನಬಂತು. ಬಂದ ಆಹ್ವಾನವನ್ನು ಬೇಗ ಒಪ್ಪಿಕೊಳ್ಳದೆ, ಪೂರ್ವಾಪರಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಂಡು ಅಧಿಕಾರ ಸ್ವೀಕರಿಸಿ ರಾಜ್ಯದ ಆಡಳಿತವನ್ನು ಅನೇಕ ಸಮಸ್ಯೆಗಳ ನಡುವೆಯೂ ಸುಸೂತ್ರವಾಗಿ ನಡೆಯಿಸಿಕೊಂಡು ಹೋದರು. ಮುಂದೆ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಅನೇಕ ಸಮಿತಿಗಳಲ್ಲಿ ಸೇವೆ ಸಲ್ಲಿಸಿ, ಅನೇಕ ರಾಷ್ಟ್ರಿಯ ಮಟ್ಟದ ಸಂಸ್ಥೆಗಳಲ್ಲಿ ಸಹ ಶ್ರದ್ಧೆಯಿಂದ ದುಡಿದರು. ತಮ್ಮ ಇಡೀ ಬದುಕಿನ ಅನುಭವದ ಸಾರವನ್ನೆಲ್ಲ ಎರಡು ಪ್ರತ್ಯೇಕ ಸಂಪುಟಗಳಲ್ಲಿ ಹೊರತಂದರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶ ವಿದೇಶಗಳಲ್ಲಿ ಅನೇಕ ಉಪನ್ಯಾಸ ನೀಡಿ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದರು. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನದ ಬಗ್ಗೆ ಧ್ವನಿ ಎತ್ತಿದರು.
ಮಾನವೀಯ ಸ್ವಭಾವದ ಡಾ.ಪಾವಟೆಯವರು ‘ಕರ್ನಾಟಕ ವಿಶ್ವವಿದ್ಯಾಲಯದ ಶಿಲ್ಪಿ’ ಎಂದೇ ಹೆಸರಾಗಿ, ಈ ಸಂಸ್ಥೆಯ ಉನ್ನತಿಗಾಗಿ ಅವಿರತವಾಗಿ ಶ್ರಮಿಸಿ ದೇಶದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ಪಡೆಯಲು ಕಾರಣರಾದರು. ಈ ಮೂಲಕ ಕರ್ನಾಟಕ ವಿಶ್ವವಿದ್ಯಾಲಯದ ಹೆಸರಿನ ಜೊತೆಗೆ ಡಾ.ಪಾವಟೆಯವರ ಹೆಸರು ಚಿರಸ್ಥಾಯಿ. ರಾಷ್ಟ್ರಿಯ ಹಾಗೂ ಅಂತರಾಷ್ಟ್ರಿಯ ಸನ್ಮಾನಗಳನ್ನು ಪಡೆದು, ಶ್ರೇಷ್ಠ ಶಿಕ್ಷಣ ತಜ್ಞರೆಂದು ಕರೆಯಿಸಿಕೊಂಡು ಖ್ಯಾತನಾಮರಾದರು. ಇವರ ಅಪೂರ್ವ ಸಾಧನೆಯನ್ನು ಮನ್ನಿಸಿ ಭಾರತ ಸರ್ಕಾರ ೧೯೬೭ರಲ್ಲಿ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

ವಿದ್ವತ್ತು ಹಾಗೂ ಶ್ರೇಷ್ಠ ಗುಣಗಳ ಸಂಗಮವೆನಿಸಿದ್ದ ಡಾ.ಪಾವಟೆ ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ಕೀರ್ತಿ, ನೆನಪು, ಆದರ್ಶಗಳು ನಮ್ಮೆದುರಿವೆ. ಅವುಗಳನ್ನು ಸ್ಮರಿಸಿ ಅವರು ತೋರಿದ ದಾರಿಯಲ್ಲಿ ಮುನ್ನಡೆಯುವುದೇ ಅವರಿಗೆ ತೋರುವ ಗೌರವವಾಗಿದೆ.

ಲೇಖಕರು:ಡಾ.ಚಂದ್ರಶೇಖರ ರೊಟ್ಟಿಗವಾಡ
ನಿರ್ದೇಶಕರು (ಪ್ರಭಾರ) ಪ್ರಸಾರಾಂಗ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ