ವಿಷಯಕ್ಕೆ ಹೋಗಿ

BA II: SEC HISTORY: ಹಿಂದೂ ದೇವಾಲಯಗಳ ವಾಸ್ತುಶೈಲಿ ಪ್ರಕಾರಗಳು

ಹಿಂದೂ ದೇವಾಲಯಗಳ ವಾಸ್ತುಶೈಲಿ ಪ್ರಕಾರಗಳು
ನಾಗರ ವಾಸ್ತುಶೈಲಿ - 
ಆಗಮ ಮತ್ತು ಶಿಲ್ಪಶಾಸ್ತ್ರಗಳ ಪ್ರಕಾರ ಭಾರತದ ವಾಸ್ತುಪದ್ಧತಿಯಲ್ಲಿ ಗುರುತಿಸಿರುವ ಮೂರು ಪ್ರಮುಖಶೈಲಿಗಳಲ್ಲಿ ಉತ್ತರ ಭಾರತದಲ್ಲಿ ರೂಢಿಯಾಗಿರುವ ಕಟ್ಟಡಶೈಲಿ. ಪ್ರಮುಖ ವಾಸ್ತು ಶಾಸ್ತ್ರ ಗ್ರಂಥಗಳ ಪ್ರಕಾರ, ಕಟ್ಟಡದ ಬುಡದಿಂದ ಶಿಖರಾಗ್ರದವರೆಗೂ ಚತುರಸ್ರ ಅಂದರೆ ಚಚ್ಚೌಕ ಅಥವಾ ಆಯಾಕಾರವಾಗಿರುವ ಕಟ್ಟಡಗಳು ಈ ಶೈಲಿಗೆ ಸೇರುತ್ತವೆ. ಗರ್ಭಗುಡಿಯ ಮೇಲಿನ ಗ್ರೀವ ಮತ್ತು ಇತರ ಭಾಗಗಳು ಚತುರ್ಮುಖವುಳ್ಳದ್ದಾಗಿರುತ್ತವೆ. ಹಿಮಾಲಯ ಮತ್ತು ವಿಂಧ್ಯಪರ್ವತಗಳ ನಡುವಣ ಪ್ರದೇಶ ಅಥವಾ ಪ್ರಾಚೀನ ಆರ್ಯಾವರ್ತದ ದೇವಾಲಯಗಳನ್ನು ಈ ಶೈಲಿಯವೆಂದು ಪರಿಗಣಿಸಬೇಕೆಂದು ಎಲ್ಲ ಪ್ರಮುಖ ವಾಸ್ತುಶಾಸ್ತ್ರಗ್ರಂಥಗಳು ಹೇಳುತ್ತಿದ್ದರೂ ವಿಂಧ್ಯಪರ್ವತಗಳ ದಕ್ಷಿಣಭಾಗದಲ್ಲೂ ಆ ಶೈಲಿಯ ಅನೇಕ  ದೇವಾಲಯಗಳು ಕಂಡು ಬರುತ್ತವೆ.

ನಾಗರಶೈಲಿಯ ದೇವಾಲಯಗಳಲ್ಲಿ ಶಿಲುಬೆ ಅಥವಾ ಆಯಾಕಾರದ ತಲ ವಿನ್ಯಾಸ ಮತ್ತು ವಿಮಾನದ ಮೇಲ್ಭಾಗ ಶಿಖರದ ಕೇಂದ್ರಬಿಂದುವಿನತ್ತ ಬಾಗಿದಂತಿರುವ ಚತುರಸ್ರವಾದ ಲಂಬವಿನ್ಯಾಸಗಳು ಇರುತ್ತವೆ. ಶಿಖರದ ತುದಿಯಲ್ಲಿ ಚಪ್ಪಟೆ ವೃತ್ತಾಕಾರದ ಮತ್ತು ಅಂಚುಗಳನ್ನು ಅರೆಗೊಳವಿಯಾಕಾರದಲ್ಲಿ ಕಡೆದ, ನೆಲ್ಲಿಕಾಯಿಯಂತೆ ಗಾಡಿಗಳುಳ್ಳ, ಆಮಲಕ ಶಿಲೆಯನ್ನು ಇಟ್ಟಿರುತ್ತಾರೆ. ಆಯಾಕಾರದ ತಲವಿನ್ಯಾಸದಲ್ಲಿ ಮುನ್‍ಚಾಚಿದ ಭಾಗಗಳಿರುವುದರಿಂದ ಕಟ್ಟಡ ಶಿಲುಬೆಯಾಕಾರದಲ್ಲಿರುತ್ತದೆಯಲ್ಲದೆ ಗೋಡೆಯ ಹೊರಮೈಯಲ್ಲಿ ಸಮಕೋನಗಳು ಏರ್ಪಟ್ಟಿರುತ್ತದೆ. ದೇವಘಡದಲ್ಲಿ ಕಲ್ಲಿನಲ್ಲಿ ಕಟ್ಟಿದ ಮತ್ತು ಭೀತರ್‍ಗಾಂವ್‍ನಲ್ಲಿ ಇಟ್ಟಿಗೆಯಲ್ಲಿ ನಿರ್ಮಿಸಿದ 5-6ನೆಯ ಶತಮಾನಗಳ ಗುಪ್ತವಂಶಕಾಲದ ವಿಷ್ಣು ದೇವಾಲಯಗಳು ಆದಿಕಾಲದ ನಾಗರಶೈಲಿಯ ನಿರ್ಮಾಣಗಳಿಗೆ ಉತ್ತಮ ನಿದರ್ಶನಗಳು. ದೇವಘಡದ ಗುಡಿಯಲ್ಲಿ ಪಾಶ್ರ್ವಗಳ ಗೋಡೆಗಳ ಮಧ್ಯಭಾಗದಲ್ಲಿದ್ದು ಮುಂಭಾಗದ ಬಾಗಿಲುವಾಡವನ್ನು ಹೋಲುವ ಚಿತ್ರಫಲಕಗಳು ಅರೆಗಂಬಗಳ ನಡುವೆ ಎದ್ದು ಕಾಣುವಂತಿದೆ. ಈ ಲಕ್ಷಣ ಅನಂತರ ಕಾಲದ ನಾಗರಶೈಲಿಯ ದೇವಾಲಯಗಳಲ್ಲಿ ಸತತವಾಗಿ ಕಂಡುಬರುತ್ತವೆ. ನೇರ ಅಂಚುಗಳುಳ್ಳ ಪಿರಮಿಡ್ಡಿನ ಆಕಾರದ ಶಿಖರ ಈ ಶೈಲಿಯ ಮತ್ತೊಂದು ಮುಖ್ಯ ಲಕ್ಷಣ. 7ನೆಯ ಶತಮಾನಕ್ಕೆ ಸೇರಿದ ಬುದ್ಧಗಯೆಯ ಮಹಾಬೋಧಿಮಂದಿರದ ಶಿಖರ ಇದಕ್ಕೆ ಒಳ್ಳೆಯ ನಿದರ್ಶನ. ಆದಿಕಾಲದ ದೇವಾಲಯಗಳಲ್ಲಿ ಗರ್ಭಗುಡಿಯ ಚಾವಣಿ ಮತ್ತು ಶಿಖರದ ಬುಡಗಳು ಸಂಧಿಸುವಲ್ಲಿ ಸ್ವಲ್ಪ ಒಳಸರಿದಂತಿರುವ ಚಿತ್ರಪಟ್ಟಿಕೆ ಇದೆ. ಕಾಲಾನುಕ್ರಮದಲ್ಲಿ ಈ ಚಿತ್ರಪಟ್ಟಿಕೆ ನಾಗರಶೈಲಿಯ ಶಿಖರದ ಪ್ರಗತಿಯಲ್ಲಿ ಒಂದು ಪ್ರಮುಖ ಅಂಶವಾಯಿತು.

ವಾಸ್ತು ಶಾಸ್ತ್ರಗಳ ಸಾಹಿತ್ಯಿಕ ಆಧಾರಗಳನ್ನು ಬಿಟ್ಟು, ವಿವಿಧ ನೆಲೆಗಳಲ್ಲಿ ಅಸ್ತಿತ್ವದಲ್ಲಿರುವ ದೇವಾಲಯಗಳ ಅಧ್ಯಯನದಿಂದ ನಾಗರಶೈಲಿಯ ಲಕ್ಷಣಗಳನ್ನು ಹೀಗೆ ಗುರ್ತಿಸಬಹುದು: 
1. ಚಾವಣಿಸೂರಿನ ಮೇಲಿರುವ ಇಡೀ ಕಟ್ಟಡದ ಭಾಗವನ್ನು ಶಿಖರವೆಂದು ಪರಿಗಣಿಸಲಾಗುತ್ತದೆ. 
2. ಗರ್ಭಗುಡಿಯನ್ನುಳಿದು ಇತರ ಭಾಗಗಳ ಚಾವಣಿಯ ಮೇಲಿರುವ ಸಣ್ಣ ಪ್ರಮಾಣದ ಶಿಖರಗಳು ಪ್ರಧಾನ ಶಿಖರವನ್ನು ಸುತ್ತುಗಟ್ಟಿರುತ್ತವೆ. 
3. ಮುಂಭಾಗದ ಮಂಟಪಗಳಲ್ಲಿ ಸುತ್ತಿನ ಗೋಡೆಗಳಿಲ್ಲದೆ ತೆರಪಾಗಿರುವುದರಿಂದ ಗರ್ಭಗುಡಿಯ ಸುತ್ತಲ ಪ್ರದೇಶ ಮಂಟಪದಂತಿರುತ್ತದೆ. 
4. ದೇವಾಲಯದ ಚಾವಣಿಭಾಗದ ಸಣ್ಣಶಿಖರಗಳ ಮೇಲೆ ವಿತಾನರೀತಿಯ ಅಲಂಕರಣ ಕೆತ್ತನೆಗಳಿರುತ್ತವೆ. 
5. ಗೋಪುರದ್ವಾರ ಇರಲೇಬೇಕೆಂಬ ನಿಯಮವಿಲ್ಲ; ಅದು ಇದ್ದಾಗ ದೇವಾಲಯದ ಮುಖ್ಯದ್ವಾರಕ್ಕೂ ಗೋಪುರದ್ವಾರಕ್ಕೂ ತಲವಿನ್ಯಾಸದಲ್ಲಿ ಹೊಂದಾಣಿಕೆ ಇರುವುದಿಲ್ಲ. 
6. ಅಂತರಾಲದ ಚಾವಣಿಯ ಮೇಲೆ ಸುಕನಾಸ ಶಿಖರಕ್ಕೆ ಕೂಡಿದಂತಿರುತ್ತದೆ. 
7. ಚಾವಣಿಯ ಮೇಲೆ ಪ್ರಧಾನ ಶಿಖರದ ಸುತ್ತಲೂ ಅನೇಕ ಸಣ್ಣ ಶಿಖರಗಳ ಸಮೂಹವಿರುತ್ತದೆ.
 8. ದೇವಾಲಯದ ಪ್ರವೇಶದ್ವಾರ ಅಥವಾ ಅದರ ಮುಂಭಾಗದಲ್ಲಿ ಸ್ವತಂತ್ರವಾದ ಅಲಂಕೃತ ತೋರಣಗಳು ಇರುತ್ತವೆ. 
9. ಗರ್ಭಗುಡಿಯ ಬಾಗಿಲುವಾಡವನ್ನು ಹೆಚ್ಚು ಅಲಂಕಾರ ಮಾಡಲಾಗಿರುತ್ತದೆ. 
10. ದ್ವಾರಬಂಧದ ಕಂಬಗಳ ಮೇಲೆ ಗಂಗೆಯಮುನೆಯರೊಂದಿಗೆ ದ್ವಾರಪಾಲಕರ ಶಿಲ್ಪಗಳನ್ನು ಸಣ್ಣ ಪ್ರಮಾಣದಲ್ಲಿ ಉಬ್ಬುಶಿಲ್ಪದ ರೀತಿಯಲ್ಲಿ ರೂಪಿಸಲಾಗಿರುತ್ತದೆ. 
11. ಪ್ರಧಾನ ಮಂದಿರದ ಸುತ್ತ ಶೈವ ದೇವಾಲಯಗಳಲ್ಲಿ ಪಂಚಾಯತನ ಮತ್ತು ವೈಷ್ಣವ ದೇವಾಲಯಗಳಲ್ಲಿ ವ್ಯೂಹಪದ್ಧತಿಯಲ್ಲಿ ಪರಿವಾರ ದೇವತೆಗಳ ಗುಡಿಗಳನ್ನು ನಿರ್ಮಿಸಲಾಗಿರುತ್ತದೆ. 
12. ದೇವೀಮಂದಿರಗಳು ಪ್ರತ್ಯೇಕವಾಗಿದ್ದು ಸ್ವತಂತ್ರ ಸ್ವಯಂಪ್ರಧಾನ ದೇವಮಂದಿರಗಳಾಗಿರುತ್ತವೆ.

ನಾಗರಶೈಲಿಯ ಮೂಲವನ್ನು ಗುಪ್ತವಂಶದ ಪ್ರಾರಂಭಿಕ ಹಂತದ ಕೆಲವು ದೇವಾಲಯಗಳಲ್ಲಿ ಗುರುತಿಸಬಹುದಾಗಿದೆ. ಭಾರತೀಯ ದೇವಾಲಯ ವಾಸ್ತು ಪದ್ಧತಿಗಳು ಗುಪ್ತರ ಕಾಲದ ಮೊದಲ ಹಂತದ ಸರಳ ದೇವಾಲಯಗಳಲ್ಲಿ ರೂಪಗೊಂಡು ಕ್ರಮೇಣ ಪ್ರತ್ಯೇಕ ಶೈಲಿಗಳಾಗಿ ಬೆಳೆದುಬಂದವು. ಭೂಮಾರಾ ದೇವಾಲಯವನ್ನು ಇಂಥ ಮೊದಲ ಹಂತದ ದೇವಾಲಯಗಳಿಗೆ ನಿದರ್ಶನವಾಗಿ ಉದಾಹರಿಸಬಹುದು. ನಾಚ್ನದ ಪಾರ್ವತೀಮಂದಿರ ಇದಕ್ಕೆ ಮತ್ತೊಂದು ಉತ್ತಮ ನಿದರ್ಶನ.

ದ್ರಾವಿಡ ವಾಸ್ತುಶೈಲಿ - 

ಭಾರತೀಯ ದೇವಾಲಯಗಳನ್ನು ಶಿಲ್ಷ ಮತ್ತು ಆಗಮಶಾಸ್ತ್ರಗಳ ಪ್ರಕಾರ ವಿಭಾಗಿಸಿರುವ ಮೂರು ಪ್ರಧಾನ ಶೈಲಿಗಳಲ್ಲಿ ಒಂದು. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ರೂಢಿಯಲ್ಲಿದೆ. ಉಳಿದ ನಾಗರ ಮತ್ತು ವೇಸರ ಶೈಲಿಗಳು ಅನುಕ್ರಮವಾಗಿ ಉತ್ತರ ಭಾರತ ಮತ್ತು ದಖನ್ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿವೆಯೆಂದು ಹೇಳಲಾಗಿದ್ದರೂ ದಕ್ಷಿಣ ಭಾರತದಲ್ಲೂ ಕೆಲವು ನಿದರ್ಶನಗಳು ಕಂಡುಬರುತ್ತವೆ. ಮಯ ಮತ, ಮಾನಸಾರ ಮುಂತಾದ ಶಿಲ್ಪಗ್ರಂಥಗಳಲ್ಲಿ ದೇವಾಲಯದ ವಿಮಾನ ಭಾಗ ಅಡಿಯಿಂದ ಶಿಖರಾಗ್ರದವರೆಗೂ ಆರು ಅಥವಾ ಎಂಟು ಮುಖ ಮತ್ತು ಕೋನಗಳುಳ್ಳದ್ದಾಗಿದ್ದರೆ ಅವನ್ನು ದ್ರಾವಿಡ ಶೈಲಿಯ ದೇವಾಲಯಗಳೆಂದು ಪರಿಗಣಿಸಲಾಗಿದೆ. ಕೆಲವು ನಿದರ್ಶನಗಳಲ್ಲಿ ಮುಂಭಾಗ ಆಯಾಕಾರವಾಗಿಯೂ ಗ್ರೀವದವರೆಗಿನ ಭಾಗ ಚಚ್ಚೌಕವಾಗಿಯೂ ಗ್ರೀವದ ಮೇಲಿನ ಭಾಗ ಷಟ್ಕೋನ ಅಥವಾ ಅಷ್ಟಕೋನಗಳುಳ್ಳದ್ದಾಗಿಯೂ ಇರುವುದುಂಟು. ಸಾಮಾನ್ಯವಾಗಿ ಕೃಷ್ಣಾನದಿಯಿಂದ ದಕ್ಷಿಣಕ್ಕೆ ಕನ್ಯಾಕುಮಾರಿಯವರೆಗೂ ಈ ಶೈಲಿಯ ದೇವಾಲಯಗಳು ಅಧಿಕವಾಗಿವೆ.

ದ್ರಾವಿಡ ಶೈಲಿಯ ದೇವಾಲಯಗಳ ಶಿಖರಗಳಲ್ಲಿ ಮೇಲಕ್ಕೆ ಹೋದಂತೆ ಕ್ರಮೇಣ ಸಣ್ಣದಾಗುವ ಅಂತಸ್ತುಗಳಿರುತ್ತವೆ. ಒಂದೊಂದು ಅಂತಸ್ತೂ ಗರ್ಭಗೃಹದ ಪ್ರತಿರೂಪವಾಗಿರುತ್ತದೆ. ಒಂದೊಂದು ಅಂತಸ್ತನ್ನೂ ವಿಭಾಗಿಸುವ ದುಂಡು ಕಪೋತಗಳು ಮತ್ತು ಮೇಲಂತಸ್ತುಗಳ ಸುತ್ತಲೂ ಇರುವ ಇಕ್ಕಟ್ಟಾದ ತೆರೆದ ಅಂಕಣಗಳು ಈ ಶೈಲಿಯ ಮುಖ್ಯ ಲಕ್ಷಣಗಳಲ್ಲಿ ಸೇರುತ್ತವೆ. ಶಿಖರದ ತುದಿಯಲ್ಲಿ ಸ್ತೂಪಿಯಲ್ಲಿರುತ್ತದೆ. ಕಾಲಾನುಕ್ರಮದಲ್ಲಿ ಈ ಸ್ತೂಪಿ ಪೂರ್ಣ ಕುಂಭದ ಆಕೃತಿಯನ್ನು ಪಡೆಯಿತು. ಕ್ರಮೇಣ ವಿವಿಧ ಅಂತಸ್ತುಗಳನ್ನು ಸಂಕುಚಿತಗೊಳಿಸಿ ಅಪಾರವಾದ ಅಲಂಕರಣ ಕೆತ್ತನೆಗಳಿಂದ ಶಿಖರದ ಅಂದವನ್ನು ಸಮೃದ್ಧಗೊಳಿಸಲಾಯಿತು.

ವಿಶಾಲವಾದ ಚಚ್ಚೌಕವಾದ ಹಜಾರದ ಮಧ್ಯಭಾಗದಲ್ಲಿ ಚಚ್ಚೌಕವಾದ ಸಣ್ಣ ಗರ್ಭಗುಡಿಯೂ ಅದರ ಸುತ್ತಲೂ ಪ್ರದಕ್ಷಿಣಾಪಥವೂ ಇರುವುದು ದ್ರಾವಿಡ ಶೈಲಿಯ ದೇವಾಲಯಗಳ ಪ್ರಮುಖ ಲಕ್ಷಣ. ಇಡೀ ಹಜಾರದ ಮೇಲೆ ಚಪ್ಪಟೆಯಾದ ಚಾವಣಿ ಇರುತ್ತದೆ. ಗೋಡೆಗಳ ಹೊರಮೈಯಲ್ಲಿರುವ ಮುನ್‍ಚಾಚಿದ ಅರೆಗಂಬಗಳೂ ಅವುಗಳ ನಡುವೆ ಹಿಂಸರಿದಂತಿರುವ ಗೂಡುಗಳೂ ಕಟ್ಟಡದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕಂಬಗಳಿಂದ ಕೂಡಿದ ವಿಶಾಲವಾದ ಮಂಟಪಗಳು, ಮೊಗಸಾಲೆಗಳು, ಮಹಾದ್ವಾರದ ಮೇಲಿನ ಬೃಹತ್ಪ್ರಮಾಣದ ಗೋಪುರುಗಳು ಮಧ್ಯಕಾಲೀನ ದ್ರಾವಿಡ ಶೈಲಿಯ ದೇವಲಾಯಗಳ ವಿಶಿಷ್ಟ ಲಕ್ಷಣಗಳು. ಅಂಥ ಕಟ್ಟಡಗಳ ಅಧ್ಯಯನದಿಂದ ದ್ರಾವಿಡ ಶೈಲಿಯ ದೇವಾಲಯಗಳ ಲಕ್ಷಣಗಳನ್ನು ಕೆಳಕಂಡಂತೆ ವಿವರಿಸಬಹುದು. 

1 ಗ್ರೀವ ಮತ್ತು ಸ್ತೂಪಿಗಳ ಮಧ್ಯಭಾಗವನ್ನು ಶಿಖರವೆಂದು ಕರೆಯಲಾಗುತ್ತದೆ. 

2 ಗರ್ಭಗುಡಿಯನ್ನುಳಿದು ಇತರ ಭಾಗಗಳ ಚಾವಣಿ ಚಪ್ಪಟೆಯಾಗಿಯೂ ಆಲಂಕಾರರಹಿತವಾಗಿಯೂ ಇರುತ್ತದೆ. 3 ಮುಂಭಾಗದಲ್ಲಿ ಚಾವಣಿಯವರೆಗೂ ಗೋಡೆಗಳನ್ನು ಕಟ್ಟಲಾಗಿದ್ದು ಗಾಳಿಬೆಳಕಿಗಾಗಿ ಕಿಟಕಿ ಅಥವಾ ಜಾಲಂಧ್ರವನ್ನು ಜೋಡಿಸಲಾಗಿರುತ್ತದೆ.

4 ಗರ್ಭಗುಡಿಯ ಎಡಗೋಡೆಯ ಮೂಲಕ ಅಭಿಷೇಕ ಜಲವನ್ನು ಹೊರಗೊಯ್ಯುವ ಪ್ರಣಾಲ ಅಥವಾ ಜಲಮಾರ್ಗವನ್ನು ನಿರ್ಮಿಸಲಾಗುತ್ತದೆ. 

5 ಗೋಪುರದ್ವಾರ ಅಥವಾ ಮಹಾದ್ವಾರ ದೇವಾಲಯದ ಮುಖ್ಯ ದ್ವಾರದ ಅಕ್ಷ ಮತ್ತು ಎಂಟು ದಿಕ್ಕುಗಳೊಂದಿಗೆ ಹೊಂದಾಣಿಕೆ ಪಡೆದಿರುತ್ತದೆ.

 6 ಪ್ರಾಂಗಣದಲ್ಲಿ ಮುಖಮಂಟಪದ ಮುಂಭಾಗದಲ್ಲಿ ಬಲಿಪೀಠದ ಬಳಿ ಧ್ವಜಸ್ತಂಭವಿರುತ್ತದೆ.

 7 ಗರ್ಭಗುಡಿಯ ಮೇಲೆ ಸಮತಟ್ಟಾದ ಅಂತಸ್ತುಗಳಿಂದ ಕೂಡಿದ ಶಿಖರವಿರುತ್ತದೆ. 

8 ದೇವಾಲಯದ ಸುತ್ತಲೂ ಪ್ರಾಕಾರ ಅವಶ್ಯವಾಗಿ ಇರುತ್ತದೆ. 

9 ಶೈವ ದೇವಾಲಯಗಳಲ್ಲಿ ನಂದಿ ಮತ್ತು ವೈಷ್ಣವ ದೇವಾಲಯಗಳಲ್ಲಿ ಗರುಡ ಶಿಲ್ಪಗಳು ಇದ್ದೇ ಇರುತ್ತವೆ. 

10 ಬಾಗಿಲುವಾಡದ ಮೇಲೆ ಮತ್ತು ಗೋಡೆಗಳ ಮೇಲ್ಭಾಗದಲ್ಲಿ ಉಬ್ಬು ಶಿಲ್ಪದ ತೋರಣಗಳನ್ನು ಅಲಂಕಾರ ಪೂರ್ಣವಾಗಿ ರೂಪಿಸಲಾಗಿರುತ್ತದೆ. 

11 ಗರ್ಭಗುಡಿಯ ಬಾಗಿಲುವಾಡ ಅಲಂಕಾರವಿಲ್ಲದೆ ಸರಳವಾಗಿರುತ್ತದೆ. 

12 ದೊಡ್ಡ ಗಾತ್ರದ ದ್ವಾರಪಾಲರ ಶಿಲ್ಪಗಳು ಅವಶ್ಯವಾಗಿ ಇರುತ್ತವೆ. 

13 ಪ್ರಧಾನ ಗುಡಿಯ ಸುತ್ತಲೂ 8,16,32ರ ಸಂಖ್ಯೆಯಲ್ಲಿ ಪರಿವಾರ ದೇವತೆಗಳ ಗುಡಿಗಳಿರುತ್ತವೆ. 

14 ಮೂಲವಿಗ್ರಹದೊಂದಿಗೆ ಉತ್ಸವಬೇರಗಳು ಅವಶ್ಯವಾಗಿ ಇರುತ್ತವೆ. 

15 ದೇವಾಲಯಕ್ಕೆ ಹೊಂದಿದಂತೆ ಪುಷ್ಕರಿಣಿ ಇರುತ್ತದೆ. ಮತ್ತು 

16 ಹನ್ನೊಂದನೆಯ ಶತಮಾನದ ಅನಂತರ ಪ್ರಾಕಾರದಲ್ಲಿ ಪ್ರಧಾನ ಮಂದಿರದ ಉಪಾಂಗವಾಗಿ ದೇವೀಗುಡಿಯಿರುತ್ತದೆ.

ದ್ರಾವಿಡ ಶೈಲಿಯ ಮೂಲವನ್ನು ಆದಿಕಾಲದ ಗುಪ್ತರ ಕೆಲವು ದೇವಾಲಯಗಳಲ್ಲಿ ಕಾಣಬಹುದು. ವಿಶಾಲವಾದ ಆಯಾಕಾರದ ಹಜಾರದ ಮಧ್ಯಭಾಗದಲ್ಲಿ ಚಚ್ಚೌಕನಾದ ಸಣ್ಣ ಗರ್ಭಗುಡಿ, ಅದರ ಸುತ್ತಲೂ ಪ್ರದಕ್ಷಿಣಾಮಾರ್ಗ, ಮತ್ತು ಚಪ್ಪಟೆಯಾದ ಚಾವಣಿ ಇವು ಅಂಥ ದೇವಾಲಯಗಳಲ್ಲಿರುತ್ತಿದ್ದವು. ಕೆಲವೊಮ್ಮೆ ಗರ್ಭಗುಡಿಯ ಮೇಲೆ ಸ್ವಲ್ಪ ಹಿಂದಕ್ಕೆ ಸರಿದಂತೆ ಕೆಳಗಿನದಕ್ಕಿಂತಲೂ ಸಣ್ಣದಾದ ಮತ್ತೊಂದು ಮೇಲಂತಸ್ತಿನ ಗರ್ಭಗುಡಿ ಇರುತ್ತಿತ್ತು. ಕ್ರಿಸ್ತಶಕದ ಪ್ರಾರಂಭ ಕಾಲಕ್ಕೆ ನಿರ್ದೇಶಿಸಬಹುದಾದ ಕೆಲವು ಔದುಂಬರ ನಾಣ್ಯಗಳ ಮೇಲೆ ಮತ್ತು ಅಮರಾವತಿ ಸ್ತೂಪದ ಮೇಲೆ ಕಾಣಬರುವ ಉಬ್ಬುಶಿಲ್ಪಗಳಲ್ಲಿ ಅಂಥ ಎರಡಂತಸ್ತಿನ ದೇವಾಲಯಗಳ ಮಾದರಿಯನ್ನು ತೋರಿಸಲಾಗಿದೆ. ಈ ಅಂತಸ್ತುಗಳಿಂದ ಕೂಡಿದ ಗುಡಿಗಳ ಮಾದರಿ ದ್ರಾವಿಡ ಶೈಲಿಯ ವಿಮಾನದ ಮೂಲವೆಂದು ಪರಿಗಣಿಸಬಹುದು. ಐಹೊಳೆಯ ಚಾಳುಕ್ಯಪೂರ್ವದ ಲಾಡ್‍ಖಾನ್ ಮತ್ತು 7ನೆಯ ಶತಮಾನದ ಮೇಗುತಿ ದೇವಲಾಯಗಳಲ್ಲಿ ಅರೆಗಂಬಗಳ ತೆಳುವಾದ ಕಲ್ಲುಚಪ್ಪಡಿಗಳನ್ನು ತೆರೆಗಳಂತೆ ಜೋಡಿಸಿ ರೂಪಿಸಿದ ಪ್ರದಕ್ಷಿಣಾ ಮಾರ್ಗದ ಸುತ್ತಲೂ ಹೊರಗೋಡೆಗಳಿವೆ. ಅಲ್ಲದೆ ಆ ದೇವಾಲಯಗಳಲ್ಲಿ ಮತ್ತೆ ಕಂಡುಬರುವ ಅಂದವಾದ ಚೈತ್ಯಾಕಾರದ ಕಮಾನು ಕೆತ್ತನೆಗಳುಳ್ಳ ದುಂಡು ಕಪೋತಗಳಿವೆ. ಇವೆರಡೂ ಅನಂತರ ಕಾಲದ ದ್ರಾವಿಡ ಶೈಲಿಯ ದೇವಾಲಯಗಳ ಲಕ್ಷಣಗಳು. ಆದುದರಿಂದ ಗುಪ್ತ ಸಂಸ್ಕøತಿ ಪ್ರಭಾವದ ಕಾಲಕ್ಕೆ ನಿರ್ದೇಶಿಸಬಹುದಾದ ಕೆಲವು ದೇವಾಲಯಗಳಲ್ಲಿ ದ್ರಾವಿಡ ಶೈಲಿಯ ಅನೇಕ ಲಕ್ಷಣಗಳ ಮೂಲವನ್ನು ಗುರ್ತಿಸಬಹುದಾಗಿದೆ. ದ್ರಾವಿಡ ಶೈಲಿಯ ಲಕ್ಷಣಗಳಿಗೆ ಮೂಲವಾದ ಈ ಆದಿಕಾಲದ ಕಟ್ಟಡಗಳೆಲ್ಲವೂ ಅನಂತರ ಕಾಲದಲ್ಲಿ ಆ ಶೈಲಿಯ ಕೇಂದ್ರವಾದ ದ್ರಾವಿಡ ದೇಶದ ಅಥವಾ ತಮಿಳುನಾಡಿನ ಹೊರಗಡೆ ಇರುವುದು ಗಮನಾರ್ಹ. ಈ ಗುಪ್ತಕಾಲೀನ ದೇವಾಲಯಗಳ ಲಕ್ಷಣಗಳಿಂದ ಕೂಡಿದ ಮತ್ತು ಅನಂತರ ಕಾಲದಲ್ಲಿ ಹಲವಾರು ಸ್ಥಳೀಯ ಅಂಶಗಳನ್ನು ಅಳವಡಿಸಿಕೊಂಡ ದೇವಾಲಯಗಳನ್ನು ದ್ರಾವಿಡ ವಾಸ್ತುಶೈಲಿಯ ನಿದರ್ಶನಗಳೆಂದು ಪರಿಗಣಿಸಲಾಗಿದೆ.

ವೇಸರ ಶೈಲಿ:

ವೆಸರ ಶೈಲಿಯು 'ನಾಗರ' (ಉತ್ತರ) ಮತ್ತು 'ದ್ರಾವಿಡ' (ದಕ್ಷಿಣ) ಶೈಲಿಯ ವಾಸ್ತುಶಿಲ್ಪ ಮತ್ತು ಅದರ ಗುಣಲಕ್ಷಣಗಳಲ್ಲಿ ಮೂಲವಾಗಿದೆ.

ಈ ಶೈಲಿಯ ವಾಸ್ತುಶಿಲ್ಪದ ಮುಖ್ಯ ಲಕ್ಷಣಗಳು ಶಿಖರಾ ಮತ್ತೆ ಮಂಟಪ. ದಿ ಶಿಖರಾ 'ನಾಗರ' ಶೈಲಿ ಮತ್ತು ಮಂಡಪ 'ದ್ರಾವಿಡ' ಶೈಲಿ, ಸೇರಿಕೊಂಡಿದೆ ಅಂತಾರಾಲ. ವಾಸ್ತುಶಿಲ್ಪಿಗಳು ಕಂಬಗಳು, ಬಾಗಿಲು ಚೌಕಟ್ಟುಗಳು ಮತ್ತು ಛಾವಣಿಗಳನ್ನು ಸಂಕೀರ್ಣವಾಗಿ ಕೆತ್ತಿದ್ದಾರೆ.

ಹೆಚ್ಚಿನ ದೇವಾಲಯಗಳಿಗೆ ವಿರುದ್ಧವಾಗಿ, ಈ ದೇವಾಲಯಗಳಲ್ಲಿ ವಿಗ್ರಹದ ಸುತ್ತಲೂ ನಡೆಯಲು ದಾರಿಗಳಿಲ್ಲ.

'ವೆಸರ' ಶೈಲಿಯ ದೇವಾಲಯಗಳ ಉದಾಹರಣೆಗಳೆಂದರೆ ದೊಡ್ಡಾ ಬಸ್ಸಾಪ ದೇವಸ್ಥಾನ, ಲಡ್ಖಾನ್ ದೇವಸ್ಥಾನ, ಮತ್ತು ದೇವಾಲಯಗಳು ಚಾಲುಕ್ಯನ್ ರಾಜಧಾನಿ ಬಾದಾಮಿ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಬಿ.ಎ. ಪ್ರಥಮ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳು

ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ಕರ್ನಾಟಕದ  ಸಾಂಸ್ಕೃತಿಕ ಇತಿಹಾಸ(OCE) BA Ist Semester Model question Paper Total Marks : 60.    Total time: 2 hours Section A *Q.1 ಬೇಕಾದ ಎರಡು ಪ್ರಶ್ನೆಗಳಿಗೆ ಟಿಪ್ಪಣಿ ಬರೆಯಿರಿ.   ೨×೫=೧೦* ೧. ಕರ್ನಾಟಕದ ಪ್ರಾಚೀನತೆ ೨. ಶಿಕ್ಷಣ ಪದ್ಧತಿ ಮತ್ತು ಅಗ್ರಹಾರ ೩. ದಸರಾ ಮತ್ತು ಮಹಾಮಸ್ತಕಾಭಿಷೇಕ ೪. ಪ್ರದರ್ಶನ ಕಲೆಗಳು Section B *Q. 2. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ. 2×10=20* ೧. ಪ್ರಾಚೀನ ಕರ್ನಾಟಕ ಅಧ್ಯಯನದ ಶಾಸನಗಳು ತಿಳಿಸಿರಿ‌. ೨. ಪ್ರಾಚೀನ ಕರ್ನಾಟಕದ ಕೃಷಿ ಪದ್ಧತಿ ಹಾಗೂ ನಿರಾವರಿ ವ್ಯವಸ್ಥೆಯನ್ನು ವಿವರಿಸಿ. ೩. ಭೂದತ್ತಿ ಎಂದರೇನು? ಪ್ರಕಾರಗಳನ್ನು ವಿವರಿಸಿರಿ. ೪. ಕರ್ನಾಟಕ ಹಿಂದೂ ಧರ್ಮದ ವಿವಿಧ ಪಂಥಗಳಾದ ಶೈವ, ವೈಷ್ಣವ, ಭಾಗವತ ಪಂಥಗಳ ಕುರಿತು ಬರೆಯಿರಿ. Section C *Q.3. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ. ನಕಾಶೆ ಪ್ರಶ್ನೆ ಕಡ್ಡಾಯ. 2×15=30* ೧. ೩ನೇ ಶತಮಾನದಿಂದ ೧೦ನೇ ಶತಮಾನದ ವರೆಗಿನ ಸಾಹಿತ್ಯದ ಬೆಳವಣಿಗೆಯನ್ನು ತಿಳಿಸಿರಿ. ೨. ಪ್ರಾಚೀನ ಕರ್ನಾಟಕದ ಸಾಮಾಜಿಕ ಜೀವನವನ್ನು ವಿವರಿಸಿರಿ. ೩. ಪ್ರಾಚೀನ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸಿರಿ. ೪. ಕರ್ನಾಟಕದ ಜೈನ ಮತ್ತು ಬೌದ್ಧ ಕೇಂದ್ರಗಳ ಕುರಿತು ಬರೆಯಿರಿ. ----------------------- DSC 1: ಕರ್ನಾಟಕ ರಾಜಕೀಯ ಇತ...