ವಿಷಯಕ್ಕೆ ಹೋಗಿ

ಕರ್ನಾಟಕದ ಪ್ರಾಚೀನತೆ: ಕನ್ನಡ ಲಿಪಿ, ಭಾಷೆಯ ಬೆಳವಣಿಗೆ

ಕರ್ನಾಟಕದ ಪ್ರಾಚೀನತೆ: ಕನ್ನಡ ಲಿಪಿ, ಭಾಷೆಯ ಬೆಳವಣಿಗೆ

ಕರ್ನಾಟಕ ಎಂಬ ಪದವು ಮೂಲತಃ ಸಂಸ್ಕೃತ ಭಾಷೆಯ ಪದವಾಗಿದೆ. ಕನ್ನಡ ಎಂಬ ಪದವು ಪ್ರಾಕೃತ ಭಾಷೆಯಲ್ಲಿದ್ದು, ಪ್ರಾಚೀನ ಮಹಾಕಾವ್ಯವಾದ ಮಹಾಭಾರತದಲ್ಲಿ ಕನ್ನಡ ನಾಡು ಅಥವಾ ಕರ್ನಾಟಕವನ್ನು ಕುಂತಳ ನಾಡು ಎಂದು ಕರೆಯುತ್ತಿದ್ದರು. ಕರ್ನಾಟಕ ಎಂಬ ಪದ ವಿಶಾಲ ಮತ್ತು ವಿಶಿಷ್ಟ ಅರ್ಥ ಹೊಂದಿದೆ. ಇದರಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಜನಪದಗಳೆಲ್ಲ ಅಡಗಿದೆ. ಕರ್ನಾಟಕದ ಪ್ರಾಚೀನತೆಯನ್ನು ಸುಮಾರು 2000 ವರ್ಷಗಳಿಗೂ ಹಳೆಯದಾದ ಮಹಾಭಾರತ ಕಾಲಕ್ಕೆ ಕೊಂಡೊಯ್ಯಬಹುದು. ಕರ್ನಾಟಕ ಎನ್ನುವ ಪದ ಮೊಟ್ಟಮೊದಲಿಗೆ ಬಳಕೆಯಾಗಿರುವುದು ಮಹಾಭಾರತದ ಸಭಾಪರ್ವ ಮತ್ತು ಭೀಷ್ರ್ಮ ಪರ್ವಗಳಲ್ಲಿ. ಕರ್ನಾಟಕದ ಕುರಿತು ಭೀಷ್ಮಪರ್ವದಲ್ಲಿಯ ಒಂದು ಶ್ಲೋಕದಲ್ಲಿ ಈ ರೀತಿ ಉಲ್ಲೇಖಿಸಲ್ಪಟ್ಟಿದೆ.

ಅಧಾಪರೇ ಜನಪದಃ ದಕ್ಷಿಣಾ ಭರತರ್ಷಭ|

ದ್ರಾವಿಡಃ ಕೇರಲಾಃ ಪ್ರಾಚ್ಯ ಮೂಷಿಕ ವನವಾಸಿಕಾ||
ಕರ್ನಾಟಕ ಮಹಿಷಕ ವಿಕಲ್ಪ ಮೂಷಕಸ್ತಥಾ|

ಝಿಲ್ಲಿಕಾ ಕುಂತಲಾಶ್ಬೆೃವಸೌಹೃದಾ ನಭ ಕಾನನಾಃ||

ಇದರಲ್ಲಿ ಕರ್ನಾಟಕ, ಮಹಿಷಕ ಮತ್ತು ಕುಂತಲಗಳು ಸ್ಪಷ್ಟವಾಗಿ ಕನ್ನಡ ನಾಡನ್ನು ಅಂದರೆ ಕರ್ನಾಟಕ ಪ್ರದೇಶವನ್ನು ಸೂಚಿಸುತ್ತವೆ.

ಪ್ರಾಚೀನ ಕಾಲದಲ್ಲಿ ಕರೆಯಲ್ಪಡುತ್ತಿದ್ದ ಕರ್ನಾಟಕದ ಹೆಸರುಗಳು: ಕರ್‌ನಾಡು, ಕಮ್ಮಿತ್ತುನಾಡು(ಕಪ್ಪು ಮಣ್ಣಿನ ನಾಡು), ಕರುನಾಡರು, ಕನ್ನಾಡು, ಕರ್ನಾಡು, ಕರುನುಡುಗರಂ, ಕರುನಾಟಕ, ಕಣ್‌ನೀರ್‌, ಕನ್ನಡ, ಕನ್ನಡನಾಡು, ಕನ್ನಾಟ, ಕುಂತಳನಾಡು, ಮಹಿಷ ಮಂಡಲ.
ಕನ್ನಡ ಲಿಪಿ ಬೆಳವಣಿಗೆ

ಸಿಂಧೂ ಕಣಿವೆಯ ಲಿಪಿ, ಬ್ರಾಹ್ಮೀ ಲಿಪಿ ಮತ್ತು ಖರೋಷ್ಠಿ ಲಿಪಿಗಳು ಪ್ರಾಚೀನ ಭಾರತದಲ್ಲಿ ಪ್ರಚಲಿತವಾಗಿದ್ದ ಮೂರು ಪ್ರಮುಖ ಲಿಪಿಗಳು. ಎಲ್ಲ ಆಧುನಿಕ ಭಾರತೀಯ ಭಾಷೆಗಳ ಲಿಪಿಗಳೂ ಕೂಡ, ಈ ಮೂರರಲ್ಲಿ ಒಂದಲ್ಲ ಒಂದು ಲಿಪಿಯಿಂದ ಒಡಮೂಡಿದ್ದು, ಶತಮಾನಗಳ ಬೆಳವಣಿಗೆಯ ನಂತರ, ಈಗ ಬಳಕೆಯಲ್ಲಿರುವ ರೂಪಗಳನ್ನು ಪಡೆದಿವೆ. ಕನ್ನಡ ಲಿಪಿಯು ಬ್ರಾಹ್ಮಿಯಿಂದ ಮೂಡಿಬಂದಿರುವ ಲಿಪಿಗಳಲ್ಲಿ ಒಂದು. ಬ್ರಾಹ್ಮೀ ಲಿಪಿ, (ಕ್ರಿಸ್ತಪೂರ್ವ ಮೂರನೆಯ ಶತಮಾನ) ಇನ್ನಷ್ಟು ಖಚಿತವಾಗಿ ಹೇಳುವುದಾದರೆ, ಅದರ ದಾಕ್ಷಿಣಾತ್ಯ ಪ್ರಭೇದವು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸಿಕ್ಕಿರುವ ಆಶೋಕನ ಶಾಸನಗಳಲ್ಲಿ ಬಳಕೆಯಾಗಿದೆ. ಸನ್ನತಿ, ಬ್ರಹ್ಮಗಿರಿ, ಚಂದ್ರವಳ್ಳಿ, ಕೊಪ್ಪಳದ ಗವಿ ಮಠ, ಸಿದ್ದಾಪುರ ಮತ್ತು ಮಸ್ಕಿಗಳು ಅಂತಹ ಸ್ಥಳಗಳಲ್ಲಿ ಕೆಲವು. ಇದು ಎಡದಿಂದ ಬಲಕ್ಕೆ ಬರೆಯಬೇಕಾದ ಲಿಪಿ. ಸಹಜವಾಗಿಯೇ, ಕನ್ನಡ ಕೂಡ ಅದೇ ಮಾದರಿಯನ್ನು ಅನುಸರಿಸಿದೆ. ಲಿಪಿಯು ವಿಕಾಸವಾಗುವ ರೀತಿಯು ಅನೇಕ ಸಂಗತಿಗಳನ್ನು ಅವಲಂಬಿಸಿರುತ್ತದೆ. ಲೇಖನ ಸಾಮಗ್ರಿ (ಕಲ್ಲು, ತಾಮ್ರ, ಓಲೆಗರಿ, ತಾಮ್ರ ಇತ್ಯಾದಿ) ಬರೆಯುವ ಸಲಕರಣೆಗಳು, (ಕಂಟ, ಬಳಪ, ಲೇಖನಿ, ಮುದ್ರಣ ಇತ್ಯಾದಿ) ಬರೆಯುವ ವಿಧಾನಗಳು, ಲಿಪಿಕಾರರ ಹಿನ್ನೆಲೆ ಮುಂತಾದವು ಇವುಗಳಲ್ಲಿ ಕೆಲವು. ತಂತ್ರಜ್ಞಾನದಲ್ಲಿ ಆಗುವ ಮುನ್ನಡೆಯ ಫಲವಾಗಿ ಉಂಟಾದ/ಉಂಟಾಗುವ ಕಾಗದದ ಅನ್ವೇಷಣೆ, ಮುದ್ರಣ, ಬೆರಳಚ್ಚು, ಕಂಪ್ಯೂಟರುಗಳು ಮುಂತಾದವು ಕಾಲಾನುಕ್ರಮದಲ್ಲಿ ತಮ್ಮದೇ ಆದ ಪ್ರಭಾವವನ್ನು ಬೀರಿವೆ. ಬ್ರಾಹ್ಮೀ ಲಿಪಿಯ ಉಗಮದ ಬಗ್ಗೆ, ಲಿಪಿಶಾಸ್ತ್ರಜ್ಞರಲ್ಲಿ ಬಿಸಿಬಿಸಿಯ ವಾಗ್ವಾದಗಳು ನಡೆದಿವೆ. ಕೆಲವರು ಅದು ಭಾರತಕ್ಕೆ ಹೊರಗಿನಿಂದ ಬಂತೆಂದು ಹೇಳಿದರೆ, ಬೇರೆ ಕೆಲವರು ಅದು ಇಲ್ಲಿಯೇ ಹುಟ್ಟಿತೆಂದು ವಾದಿಸಿದ್ದಾರೆ.    

    ಕನ್ನಡ ಲಿಪಿಯು, ಬ್ರಾಹ್ಮಿಯ ಮೂಲಮಾದರಿಯಿಂದ ಸಾಕಷ್ಟು ದೂರ ಪ್ರಯಾಣಮಾಡಿದೆ. ಶಾತವಾಹನರು, ಕದಂಬರು, ಗಂಗರು, ಚಾಳುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಮತ್ತು ಅವರ ಅನಂತರ ಬಂದ ರಾಜವಂಶಗಳ ಆಳ್ವಿಕೆಯಲ್ಲಿ, ಅದು ಅನೇಕ ಮಹತ್ವದ ಬದಲಾವಣೆಗಳನ್ನು ಪಡೆದುಕೊಂಡಿದೆ. ಬರವಣಿಗೆಯ ವಿಧಾನಗಳ ಪರಿಣಾಮವಾಗಿ ಕಾಣಿಸಿಕೊಂಡ ಪ್ರಾದೇಶಿಕ ವ್ಯತ್ಯಾಸಗಳನ್ನು ಕ್ರಮೇಣ ಒಪ್ಪಿಕೊಳ್ಳಲಾಯಿತು. ಇಡೀ ದೇಶಕ್ಕೆ ಅನ್ವಯವಾಗುವ ಒಂದು ಮಾದರಿಯು ಮೂಡಿಬರಲಿಲ್ಲ. ಬ್ರಾಹ್ಮೀಲಿಪಿಯ ಅನೇಕ ಅಕ್ಷರಗಳನ್ನು ಉತ್ತರ ಭಾರತದಲ್ಲಿ ಬರೆಯುವ ರೀತಿಗೂ ದಕ್ಷಿಣ ಭಾರತೀಯರು ಬರೆಯುವ ರೀತಿಗೂ ವ್ಯತ್ಯಾಸಗಳು ಕಾಣಿಸಿಕೊಂಡಿವೆ.

ಮೊದಲ ಹಂತದಲ್ಲಿ, ಚೌಕಾಕಾರದ, (squarelike) ಕೋನಗಳನ್ನು ಹೊಂದಿರುವ (angular) ಅಕ್ಷರಗಳ ಬದಲಾಗಿ, ಬಾಗುರೇಖೆಗಳು((curves)  ಮತ್ತು ಅಲಂಕರಿತ (decorative) ಅಕ್ಷರಗಳು ಕಾಣಿಸಿಕೊಂಡವು. ಆದರೆ, ಈ ಬದಲಾವಣೆಗಳು ಏಕಪ್ರಕಾರದವೂ ಏಕಮುಖವಾದವೂ ಆಗಿದ್ದವೆಂದು  ತಿಳಿಯುವ ಅಗತ್ಯವಿಲ್ಲ. ಉದಾಹರಣೆಗೆ ಬಹಳ ಮೃದುವಾದ ಬಳಪದಕಲ್ಲನ್ನು (ಸೋಪ್ ಸ್ಟೋನ್) ಬಳಸಿದ ಹೊಯ್ಸಳರ ಕಾಲದ ಲಿಪಿಯು ಬಹಳ ಅಲಂಕರಿತವಾಗಿತ್ತು. ಆದರೆ, ಅವರ ನಂತರ ಬಂದ ವಿಜಯನಗರದ ದೊರೆಗಳ ಕಾಲದಲ್ಲಿ ಬಹಳ ಬಿರುಸಾದ ಗ್ರಾನೈಟ್ ಕಲ್ಲಿನ ಬಳಕೆ ಹೆಚ್ಚು. ಪರಿಣಾಮವಾಗಿ ಅವರ ಕಾಳದ ಲಿಪಿಯು ಅಷ್ಟೇನೂ ಅಲಂಕರಿತವಲ್ಲ.

          ಕರ್ನಾಟಕದಲ್ಲಿ ಬ್ರಾಹ್ಮೀ ಲಿಪಿಯ ಬೆಳವಣಿಗೆಯ ಎರಡನೆಯ ಹಂತವನ್ನು, ಬನವಾಸಿ, ಮಳವಳ್ಳಿ ಮತ್ತು ಮ್ಯಾಕದೋಣಿಯ ಶಾಸನಗಳಲ್ಲಿ ನೋಡಬಹುದು. (ಕ್ರಿ.ಶ. 2-3 ಶತಮಾನಗಳು)

ಕದಂಬರ ಕಾಲದ ಶಾಸನಗಳಲ್ಲಿ ಬಳಸಿರುವ ಲಿಪಿಯನ್ನು ಕನ್ನಡ ಲಿಪಿಯ ಅತಿ ಪ್ರಾಚೀನ ಮಾದರಿಯೆಂದು ಗುರುತಿಸಲಾಗಿದೆ. ಎಂದರೆ, ಇದನ್ನು ಬ್ರಾಹ್ಮೀಲಿಪಿಗಿಂತ ಭಿನ್ನವೆಂದು ಗುರುತಿಸಲು ಸಾಧ್ಯ. ಆ ವೇಳೆಗಾಗಲೇ ಕನ್ನಡದಲ್ಲಿ ಮತ್ತು ಅದಕ್ಕೆ ಸಮಕಾಲಿಕವಾದ ಗುಪ್ತರ ಲಿಪಿಯಲ್ಲಿ ಚೌಕಾಕೃತಿಯ ತಲೆಕಟ್ಟುಗಳನ್ನು ಬಳಸುತ್ತಿದ್ದರು. ಈ ಅಕ್ಷರಗಳ ಎತ್ತರ ಕಡಿಮೆ ಮತ್ತು ಅವು ಈಗಾಗಲೇ ವರ್ತುಲಾಕಾರದ ಬಾಗುರೇಖೆಗಳನ್ನು ಒಳಗೊಂಡಿವೆ. ಮಯೂರಶರ್ಮನ ಚಂದ್ರವಳ್ಳಿ ಶಾಸನ, ಕಾಕುಸ್ಥವರ್ಮನ ಹಲ್ಮಿಡಿ ಶಾಸನ ಮತ್ತು ಅದೇ ಕಾಕುಸ್ಥವರ್ಮನ ತಾಳಗುಂದದ ಶಾಸನಗಳು ಈ ಕಾಲಕ್ಕೆ ಸೇರುತ್ತವೆ. ಮೃಗೇಶವರ್ಮನ ತಾಮ್ರಶಾಸನಗಳನ್ನೂ ಇದೇ ಗುಂಪಿಗೆ ಸೇರಿಸಬಹುದು.  

            ಕರ್ನಾಟಕದ ದಕ್ಷಿಣ ಭಾಗದಲ್ಲಿ ರಾಜ್ಯಭಾರ ಮಾಡಿದ ಗಂಗ ದೊರೆಗಳ ಶಾಸನಗಳಲ್ಲಿ, ಚೌಕಾಕೃತಿಯ ಅಥವಾ ತ್ರಿಕೋನಾಕಾರದ ತಲೆಕಟ್ಟುಗಳಿಲ್ಲ. ಈ ಅಕ್ಷರಗಳ ಕೆಳಭಾಗವು ಹೆಚ್ಚು ಅಗಲವಾಗಿಯೂ ಎತ್ತರವಾಗಿಯೂ ಇವೆ. ಗಂಗರ ಕಾಲದ ತಾಮ್ರಶಾಸನಗಳಲ್ಲಿ ಒಂದೇ ಅಕ್ಷರವನ್ನು ಒಂದಕ್ಕಿಂತ ಹೆಚ್ಚು ಬಗೆಗಳಲ್ಲಿ ಬರೆಯಲಾಗಿದೆ. ಗಂಗ ದೊರೆಗಳು ಅನೇಕ ಶತಮಾನಗಳ ಕಾಲ ರಾಜ್ಯಭಾರ ಮಾಡಿದುದರಿಂದ, ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿಲ್ಲಿಸಲಾದ ಅವರದೇ ಶಾಸನಗಳಲ್ಲಿ ಲಿಪಿವ್ಯತ್ಯಾಸಗಳಿವೆ.   

          ಬಾದಾಮಿ ಚಾಳುಕ್ಯರ ಶಾಸನಗಳನ್ನು ಮಂಗಳೀಶ, ಪುಲಿಕೇಶಿ ಮುಂತಾದ ದೊರೆಗಳು ಸ್ಥಾಪಿಸಿದ್ದಾರೆ. ಇಲ್ಲಿ, ತಲಕಟ್ಟು ಬಹುಮಟ್ಟಿಗೆ ಒಂದು ಸರಳರೇಖೆಯಂತೆ ನೇರವಾಗಿದೆ. ಏಳನೆಯ ಶತಮಾನದ ವೇಳೆಗಾಗಲೇ ಯ, ರ, ಸ, ಹ, ದ ಮುಂತಾದ ಅಕ್ಷರಗಳು ತಮ್ಮ ಅಂತಿಮ ರೂಪವನ್ನು ಪಡೆದು ಸ್ಥಿರವಾಗಿರುವಂತೆ ತೋರುತ್ತದೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ಮೊದಲಾದ ಸ್ಥಿರೀಕರಣದ ಕ್ರಿಯೆಯು, ರಾಷ್ಟ್ರಕೂಟರ ಆಳ್ವಿಕೆಯ ಮೂರು ಶತಮಾನಗಳಲ್ಲಿ ಇನ್ನಷ್ಟು ತೀವ್ರವಾಯಿತು. ಈ ಅವಧಿಯಲ್ಲಿ ಅ, ಆ, ಎ, ಕ ಮತ್ತು ಖ ಗಳು ತಮ್ಮ ಅಂತಿಮ ರೂಪವನ್ನು ಪಡೆದುಕೊಂಡಂತೆ ಕಾಣುತ್ತದೆ.   

          ಕಲ್ಯಾಣಿ ಚಾಳುಕ್ಯರ ಆಳ್ವಿಕೆಯ ಕಾಲದಲ್ಲಿ ಕೆಲವು ಮುಖ್ಯವಾದ ಬದಲಾವಣೆಗಳಿಗೆ ಪಕ್ಕಾಯಿತು. ಈ ಪ್ರಭೇದವನ್ನು, ಬ್ಹೂಲರ್, ಫ್ಲೀಟ್ ಮುಂತಾದ ಲಿಪಿಶಾಸ್ತ್ರಜ್ಞರು, ಹಳಗನ್ನಡ ಲಿಪಿಯೆಂದು ಕರೆದಿದ್ದಾರೆ. ಈ ಅವಧಿಯಲ್ಲಿ ಅಕ್ಷರಗಳು ಇನ್ನಷ್ಟು ವರ್ತುಲಾಕಾರವನ್ನು ಪಡೆದವು. ಇ, ಗ, ಘ, ಯ, ಲ ಮತ್ತು ವ ಅಕ್ಷರಗಳು ತಮ್ಮ ಅಂತಿಮ ರೂಪಕ್ಕೆ ಬಹಳ ಹತ್ತಿರವಾದವು. ಣ ಮತ್ತು ಭ ಗಳು ಹೊಸ ಆಕೃತಿಯನ್ನು ಪಡೆದುಕೊಂಡವು. ಅದುವರೆಗೆ ಕೇವಲ ನಾಮಕಾವಾಸ್ತೆಗೆ ಇರುತ್ತಿದ್ದ ತಲಕಟ್ಟು, ಈಗ ಖಚಿತವಾದ ಬಾಗುಗೆರೆಯ ಾಕಾರ ಪಡೆಯಿತು.

          ಹೊಯ್ಸಳರು, ಕಳಚುರಿಗಳು ಮತ್ತು ಸೇವುಣರ ಕಾಲದ ಲಿಪಿಗಳು, ಬಹುಮಟ್ಟಿಗೆ ಕಲ್ಯಾಣಿ ಚಾಳುಕ್ಯರ ಮಾದರಿಯನ್ನೇ ಅನುಸರಿಸಿದವು. ಹೆಚ್ಚೆಂದರೆ, ಲಿಪಿವಿನ್ಯಾಸಗಳು ಇನ್ನಷ್ಟು ಅಲಂಕರಿತವಾದವು. ಈಗಾಗಲೇ ಹೇಳಿದಂತೆ, ಮೃದುವಾದ ಸೋಪ್ ಸ್ಟೋನ್ ಅನ್ನು ಬಳಸಿದ ಹೊಯ್ಸಳರ ಶಾಸನಗಳಲ್ಲಿ, ಅಕ್ಷರಗಳು ಬಹಳ ಗುಂಡಗಿದ್ದು, ಅಲಂಕರಿತವಾಗಿವೆ.

           ಇದಕ್ಕೆ ವಿರುದ್ಧವಾಗಿ ಬಹಳ ಗಟ್ಟಿಯಾದ ಗ್ರಾನೈಟ್ ಕಲ್ಲನ್ನು ಲೇಖನಸಾಮಗ್ರಿಯಾಗಿ ಬಳಸಿದ ವಿಜಯನಗರದ ಅರಸುಗಳ ಕಾಲದಲ್ಲಿ, ಅಕ್ಷರಗಳು ಕಡಿಮೆ ಸುಂದರವಾದವು. ಅವು ಒರಟಾಗಿಯೂ ಅನಾಕರ್ಷಕವಾಗಿಯೂ ಕಂಡವು. ಮಹಾಪ್ರಾಣಾಕ್ಷರಗಳನ್ನು ಹೊಕ್ಕಳು ಸೀಳುವುದರ ಮೂಲಕ ಸೂಚಿಸುವ ಪದ್ಧತಿಯು ಈ ಕಾಲದಲ್ಲೇ   ಮೊದಲಾಯಿತು. (ಥ, ಧ, ಢ, ಫ)

            ಎಲ್ಲೋ ಕೆಲವು ಅಪವಾದಗಳನ್ನು ಬಿಟ್ಟರೆ, ಮೈಸೂರು ಒಡೆಯರ ಕಾಲದ ಶಾಸನಗಳ ಲಿಪಿಗೂ ಈಗ ನಾವು ಬಳಸುತ್ತಿರುವ ಲಿಪಿಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಆ ಕೆಲವು ಅಕ್ಷರಗಳು, ಅಲಂಕರಿತವಾಗಿಯೇ ಉಳಿದವು.ಅನುನಾಸಿಕ ವ್ಯಂಜನಗಳನ್ನು ಸೂಚಿಸಲು ಬಳಸುವ ಬಿಂದು ಅಥವಾ ಅನುಸ್ವಾರವನ್ನು (ಸೊನ್ನೆ) ಸಂಬಂಧಪಟ್ಟ ಅಕ್ಷರದ ಮುಂದೆ ಬರೆಯಲಾಗುತ್ತದೆ. ವ್ಯಂಜನ ಮತ್ತು ಸ್ವರಗಳ ಸಂಯೋಜನೆಯಾದ ಗುಣಿತಾಕ್ಷರಗಳು ಮತ್ತು ಸಂಯುಕ್ತಾಕ್ಷರಗಳನ್ನು ಕಾಲಕ್ರಮದಲ್ಲಿ ಬೆಳೆದುಬಂದಿರುವ ವಿಧಾನಗಳಲ್ಲಿ ಸೂಚಿಸಲಾಗುತ್ತದೆ.

          ತೆಲುಗು ಲಿಪಿಗೂ ಕನ್ನಡ ಲಿಪಿಗೂ ನಡುವೆ ಅನೇಕ ಹೋಲಿಕೆಗಳಿವೆ. ಯಾವುದೋ ಒಂದು ಹಂತದಲ್ಲಿ ಅವೆರಡೂ ಭಾಷೆಗಳಿಗೆ ಸಮಾನವಾದ ಲಿಪಿಯೇ ಇತ್ತೆಂದು ಭಾಷಾಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕನ್ನಡವು ತಾನು ಬಳಸುವ ಅಚ್ಚಗನ್ನಡ (ದ್ರಾವಿಡ) ಧ್ವನಿಗಳಿಗೆ, ಅಂತೆಯೇ ತನ್ನೊಳಗೆ ಬಳಕೆಗೆ ಬಂದಿರುವ ಸಂಸ್ಕೃತ ಧ್ವನಿಗಳಿಗೆ ಸೂಕ್ತವಾದ ಲಿಪಿಪ್ರತಿನಿಧಿಗಳನ್ನು ರೂಪಿಸಿಕೊಂಡಿದೆ. ಪರಿಣಾಮವಾಗಿ, ಕನ್ನಡಲಿಪಿಯ ಅಕ್ಷರಗಳಿಗೂ ಅವುಗಳನ್ನು ಉಚ್ಚರಿಸುವ ರೀತಿಗೂ ಸಾಕಷ್ಟು ಹೋಲಿಕೆಯಿದೆ.ಕನ್ನಡ ಲಿಪಿಯು ಬೇರೆ ಬೇರೆ ರಾಜವಂಶಗಳ ಅವಧಿಯಲ್ಲಿ ಪಡೆದುಕೊಂಡ ರೂಪಗಳನ್ನು, ಹಲವಾರು ಪಟ್ಟಿಕೆಗಳ ರೂಪದಲ್ಲಿ, ಈ ಟಿಪ್ಪಣಿಗೆ ಅನುಬಂಧವಾಗಿ ಕೊಡಲಾಗಿದೆ.

 

ಕನ್ನಡ ಭಾಷೆಯ ಪ್ರಾಚೀನತೆ

          ಕನ್ನಡದ ಪ್ರಾಚೀನತೆಯನ್ನು ತೀರ್ಮಾನಿಸಲು, ಬೇರೆ ಭಾಷೆಗಳ ಬರವಣಿಗೆಯ ದಾಖಲೆಗಳಲ್ಲಿ, ನಮ್ಮ ನಾಡು ಮತ್ತು ನುಡಿಗಳ ಬಗ್ಗೆ ಇರುವ ಉಲ್ಲೇಖಗಳನ್ನು ಹುಡುಕುವ ಅಭ್ಯಾಸವು ಮೊದಲಿನಿಂದಲೂ ರೂಢಿಯಲ್ಲಿದೆ. ಇದು ಅಷ್ಟೇನೂ ಸಮಾಧಾನಕರವಾದ ವಿಧಾನವಲ್ಲ. ಹಾಗೆಂದು ಅದಕ್ಕಿಂತ ಭಿನ್ನವಾದ ಹಾದಿಗಳನ್ನು ಸೂಚಿಸುವುದೂ ಕಷ್ಟಸಾಧ್ಯವೇ. ಎರಡನೆಯಯದಾಗಿ, ಇಂತಹ ಹುಡುಕಾಟಗಳು ಬರವಣಿಗೆಯಲ್ಲಿರುವ ದಾಖಲೆಗಳಿಗೆ ಅತಿಯಾದ ಮಹತ್ವವನ್ನು ಕೊಟ್ಟು, ಮೌಖಿಕ ಪರಂಪರೆಯಲ್ಲಿ ಅಡಗಿರಬಹುದಾದ ಮಾಹಿತಿಗಳನ್ನು ನಿರ್ಲಕ್ಷಿಸುತ್ತವೆ. ಹಾಗೆ ನೋಡಿದರೆ, ಒಂದು ಭಾಷೆಯ ಇರುವಿಕೆಯ ಬಗ್ಗೆ ಬರವಣಿಗೆಯ ಸಾಕ್ಷಿಗಳು ಇಲ್ಲವೆಂದ ಮಾತ್ರಕ್ಕೆ, ಒಂದಲ್ಲ ಒಂದು ರೀತಿಯಲ್ಲಿ  ಆ ಭಾಷೆಯ ಅಸ್ತಿತ್ವವನ್ನೇ ಅಲ್ಲಗಳೆಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಕರ್ನಾಟಕವೆಂಬ ಭೂಪ್ರದೇಶ ಮತ್ತು ಕನ್ನಡವೆಂಬ ಭಾಷೆಗಳ ನಡುವೆ ಒಂದು ಸಮೀಕರಣವನ್ನು ಮಾಡಲಾಗುತ್ತದೆ. ಇದು ಕೂಡ ನೂರಕ್ಕೆ ನೂರರಷ್ಟು ಸರಿಯಲ್ಲ. ಕರ್ನಾಟಕ’ ಹೆಸರು ಅಥವಾ ಅದರ ಪೂರ್ವರೂಪಗಳಲ್ಲಿ ಒಂದು, ಚಲಾವಣೆಯಲ್ಲಿ ಇರಲಿ, ಬಿಡಲಿ, ಈ ಪ್ರದೇಶಗಳ ಜನರು ಒಂದಲ್ಲ ಒಂದು ಭಾಷೆಯನ್ನು ಬಳಸುತ್ತಿದ್ದರು. ಅದು ಕನ್ನಡದ ಹಳೆಯ ರೂಪಗಳಲ್ಲಿ ಒಂದಾಗಿರುವುದು ಅನಿವಾರ್ಯ.

          ಮೂಲದ್ರಾವಿಡ ಭಾಷೆಯಿಂದ ಮೂಡಿಬಂದ ಪ್ರಮುಖ ನುಡಿಗಳಲ್ಲಿ ಕನ್ನಡವೂ ಒಂದು. ಅದನ್ನು ದಕ್ಷಿಣ ದ್ರಾವಿಡ ಭಾಷೆಗಳ ಗುಂಪಿಗೆ ಸೇರಿಸಲಾಗಿದೆ. ಯಾವುದೇ ಭಾಷೆಯು, ತನ್ನದೇ ಆದ ಸ್ವತಂತ್ರ ರೂಪವನ್ನು ಪಡೆದುಕೊಳ್ಳುವ ಕೆಲಸವು ನೂರಾರು ವರ್ಷಗಳ ಕಾಲ ನಡೆದಿರುತ್ತದೆ. ಈ ಕಾಲಾವಧಿಯಲ್ಲಿ ಸ್ಪಷ್ಟವಾಗಿ ಕನ್ನಡವು ಅಸ್ತಿತ್ವದಲ್ಲಿದೆ ಅಥವಾ ಇಲ್ಲ ಎಂದು ಹೇಳಲಾಗದ ಅವಧಿಯೂ ಸಾಕಷ್ಟು ಇರುತ್ತದೆ. ಭ. ಕೃಷ್ಣಮೂರ್ತಿಯವರು (2000) ಹೇಳುವಂತೆ, ಮೂಲದ್ರಾವಿಡದಿಂದ ಒಂದು ಕಡೆ ತುಳು-ಕೊರಗ, ಹಾಗೂ ಇನ್ನೊಂದು ಕಡೆ ಕನ್ನಡ, ಪ್ರತ್ಯೇಕವಾದ ಘಟನೆಯು ಕ್ರಿ.ಪೂ. ಐದನೆಯ ಶತಮಾನದಷ್ಟು ಹಿಂದೆಯೇ ನಡೆದಿರಬೇಕು. ಡಿ.ಎನ್. ಶಂಕರ ಭಟ್ ಅವರು ತಮ್ಮ ಕನ್ನಡ ಭಾಷೆಯ ಕಲ್ಪಿತ ಚರಿತ್ರೆ (1995) ಎಂಬ ಪುಸ್ತಕದಲ್ಲಿ, ಮೂಲದ್ರಾವಿಡದಿಂದ ಮೂಲ ಕನ್ನಡದ ಕಡೆಗೆ ನಡೆದ ಚಲನೆಯನ್ನು ವಿವರವಾಗಿ ತಿಳಿಸಿದ್ದಾರೆ. ಅವರು ಕನ್ನಡದಲ್ಲಿ ಉಳಿದುಕೊಂಡಿರುವ ಮೂಲದ್ರಾವಿಡ ಅಂಶಗಳನ್ನು ಹೇಳುವಂತೆಯೇ ಬದಲಾವಣೆಯಾಗಿರುವ ಸಂಗತಿಗಳನ್ನೂ ತಿಳಿಸಿದ್ದಾರೆ. ಮೊದಮೊದಲ ಹಂತಗಳಲ್ಲಿ ಕನ್ನಡ ಮತ್ತು ತಮಿಳುಗಳ ನಡುವೆ ಸಾಕಷ್ಟು ಹೋಲಿಕೆಗಳಿರಬೇಕು. ನಂತರದ ಶತಮಾನಗಳಲ್ಲಿ ಕನ್ನಡವು ಸಂಸ್ಕೃತದ ದಟ್ಟವಾದ ಪ್ರಭಾವಕ್ಕೆ ಗುರಿಯಾಯಿತು. ಈ ಪ್ರಭಾವವು ತಮಿಳಿನೊಂದಿಗೆ ಇದ್ದ ಸಂಬಂಧಗಳನ್ನು ಹಿನ್ನೆಲೆಗೆ ತಳ್ಳಿತು ಮತ್ತು ಮರೆಮಾಡಿತು. ಕೆ.ವಿ. ನಾರಾಯಣ ಅವರ ಪ್ರಕಾರ, ಈಗ ಕನ್ನಡದ ಉಪಭಾಷೆಗಳೆಂದು ಕರೆಸಿಕೊಳ್ಳುತ್ತಿರುವ ಅನೇಕ ಬುಡಕಟ್ಟುಗಳ ಭಾಷೆಗಳು, ಕನ್ನಡದ ಪ್ರಾಚೀನರೂಪಗಳಿಗೆ ಹತ್ತಿರವಾಗಿರಬಹುದು. ಕನ್ನಡದ ಪ್ರಾಚೀನತೆಯ ಬಗ್ಗೆ ಸಾಮಾನ್ಯವಾಗಿ. ಒದಗಿಸುವ ಸಾಕ್ಷಿಗಳನ್ನು, ಸಂಸ್ಕೃತ-ಪ್ರಾಕೃತ ಮೂಲಗಳು, ದ್ರಾವಿಡ-ತಮಿಳು ಮೂಲಗಳು ಮತ್ತು ನಮ್ಮ ದೇಶದ ಆಚೆಗೆ ಸಿಕ್ಕಿರುವ ಮಾಹಿತಿಗಳಿಂದ ಸಂಗ್ರಹಿಸಲಾಗಿದೆ. ಇನ್ನು ಮುಂದೆ, ಕನ್ನಡ ನಾಡು ಮತ್ತು ನುಡಿಗಳ ಪ್ರಾಚೀನತೆಯ ಬಗ್ಗೆ ಸಾಂಪ್ರದಾಯಿಕವಾಗಿ ಕೊಡಲಾಗುವ ಆಕರಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, ಈ ಮಾಹಿತಿಗಳನ್ನು ಈಗಾಗಲೇ ಮಂಡಿಸಿರುವ ವಾದದ ಹಿನ್ನೆಲೆಯಲ್ಲಿಯೇ ನೋಡಬೇಕು. 

  1. ಕೆಲವು ವಿದ್ವಾಂಸರು ಸಂಸ್ಕೃತದ ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಮಿಟಚಿ (ಮಿಡತೆ), ಚೆನ್ (ಚಂದ್ರ) ಮುಂತಾದ ಪದಗಳ ಆಧಾರದ ಮೇಲೆ, ಕನ್ನಡದ ಹಳಮೆಯನ್ನು ವೇದಗಳ ಕಾಲಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.
  2. ಪದ್ಮಪುರಾಣ ಮತ್ತು ಮಾರ್ಕಂಡೇಯ ಪುರಾಣಗಳಲ್ಲಿ  ಕರ್ನಾಟಕ ಎಂಬ ಪದವು ಕಾಣಿಸಿಕೊಂಡಿದೆ.
  3. ಸಂಸ್ಕೃತದ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಕರ್ನಾಟಕದ ಪ್ರಸ್ತಾಪವು ಅನೇಕ ಬಾರಿ ಬಂದಿದೆ.
  4. ಹಾಲರಾಜನು, ಕ್ರಿ.ಶ. 150 ರಲ್ಲಿ ಪ್ರಾಕೃತ ಭಾಷೆಯಲ್ಲಿ ಬರೆದಿರುವ ಗಾಥಾಸಪ್ತಶತಿ‘ ಎಂಬ ಕಾವ್ಯದಲ್ಲಿ ಬರುವ ತೀರ್,  ತುಪ್ಪ’,  ‘ಪೆಟ್ಟು,  ಪೊಟ್ಟು ಮುಂತಾದ ಪದಗಳು ಕನ್ನಡದವೆಂದು ತೋರುತ್ತದೆ.
  5. ತಮಿಳು ಭಾಷೆಯ ಬಹು ಹಳೆಯ ಕಾವ್ಯವಾದ, ಸಂಗಂ ಯುಗಕ್ಕೆ ಸೇರಿದ, ಸಿಲಪ್ಪದಿಕಾರಂ  ಈ ಪ್ರದೇಶದ ಜನರನ್ನು ಕರುನಾಡಗರ್ ಎಂದು ಕರೆದಿದೆ.
  6. 1904 ರಲ್ಲಿ ಪ್ರೊ. ಹುಲ್ಷ್ ಅವರುಕ್ರಿಸ್ತಪೂರ್ವ ಯುಗಕ್ಕೆ ಸೇರಿದ ಪೇಪಿರಸ್ ಫ್ರಂ ಆಕ್ಸಿರಿಂಕಸ್’’ ಎಂಬ ದಾಖಲೆಯನ್ನು ಹೆಸರಿಸಿದರು. ಈ ದಾಖಲೆಗಳು ಗ್ರೀಕ್ ಭಾಷೆಯಲ್ಲಿದ್ದವು. ಇವು ಗ್ರೇಟ್ ಬ್ರಿಟನ್ನಿನ ರಾಯಲ್ ಏಷಿಯಾಟಿಕ್ ಸೊಸೈಟಿಯ ಜರ್ನಲ್ಲಿನಲ್ಲಿ 1904 ರಲ್ಲಿಯ ಪ್ರಕಟವಾದವು.  ಇಲ್ಲಿ ಬರುವ ಅನೇಕ ಪದಗಳು ಮತ್ತು ಪದಗುಂಪುಗಳು ಕರಾವಳಿ ಪ್ರದೇಶದ ಕನ್ನಡಭಾಷೆಗೆ ಸೇರಿದವೆಂದು  ಹುಲ್ಷ್ ಅವರು ತೀರ್ಮಾನಿಸಿದರು. ಎಂ. ಗೋವಿಂದ ಪೈ ಅವರು ಈ ಅನಿಸಿಕೆಯನ್ನು ಸಮರ್ಥಿಸಿದರು. ಬೇರೆ ಕೆಲವು ವಿದ್ವಾಂಸರು ಅವು ತುಳು ಭಾಷೆಯ ಪದಗಳೆಂದು ವಾದಿಸಿದ್ದಾರೆ.
  7.  ಕ್ರಿಸ್ತಶಕ ಐದನೆಯ ಶತಮಾನದಷ್ಟು ಹಿಂದಿನ ಅನೇಕ ಕನ್ನಡ ಶಾಸನಗಳು ನಮಗೆ ದೊರೆತಿವೆ. ಸಹಜವಾಗಿಯೇ ಆಡುಮಾತಿನ ಕನ್ನಡವು ಆ ಕಾಲಕ್ಕಿಂತ ಹಿಂದೆಯೇ ಇತ್ತೆಂದು ತೀರ್ಮಾನಿಸಬಹುದು.  .
  8. ತಮಿಳಿನ ಪ್ರಸಿದ್ಧ ಶಾಸನಶಾಸ್ತಜ್ಞರಾದ ಡಾ. ಐರಾವತಂ ಮಹಾದೇವನ್ ಅವರು ಈ ವಿಷಯದಲ್ಲಿ ಒದಗಿಸಿರುವ ಮಾಹಿತಿಗಳು ಬಹಳ ಉಪಯುಕ್ತ ವಾಗಿವೆ. ಅವರು, ‘Early Tamil Epigraphy‘ ಎಂಬ ಗ್ರಂಥದಲ್ಲಿ ವಾದಿಸುವ ಪ್ರಕಾರ, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಲಿಖಿತ ದಾಖಲೆಗಳು ಬರುವುದಕ್ಕಿಂತ ಎಷ್ಟೋ ಹಿಂದಿನಿಂದ ಮೌಖಿಕ ಪರಂಪರೆಯು ಅಸ್ತಿತ್ವದಲ್ಲಿತ್ತು. ಅಶೋಕನ ಬಂಡೆ ಶಾಸನಗಳು ಪ್ರಾಕೃತದಲ್ಲಿದ್ದರೂ ಆ ಪ್ರದೇಶದ ಜನರ ಆಡು ಮಾತು ಕನ್ನಡವೇ ಆಗಿತ್ತೆಂದು ಅವರು ಹೇಳಿದ್ದಾರೆ. ಅವರ ಕೆಲವು ಅನಿಸಿಕೆಗಳನ್ನು ಇಲ್ಲಿ ಉದ್ಧರಿಸಲಾಗಿದೆ:ಆದಿ ಕಾಲದಿಂದಲೂ ಆ ಪ್ರದೇಶಗಳ ಜನರ ಮನೆಮಾತು ಕನ್ನಡವೇ ಆಗಿತ್ತು. ಈ ಮಾತಿಗೆ ಸಾಕ್ಷಿಗಳು ಅಗತ್ಯವೆನಿಸಿದರೆ, ದಕ್ಷಿಣ ಭಾರತದ ಮೇಲುಭಾಗಗಳಲ್ಲಿ ಸಿಕ್ಕಿರುವ ಕಲ್ಲಿನ ಮತ್ತು ತಾಮ್ರದ ಶಾಸನಗಳ ತುಂಬ ಇಡಿಕಿರಿದಿರುವ, ಕನ್ನಡ ಮತ್ತು ತೆಲುಗುಗಳ ಸ್ಥಳನಾಮಗಳು ಹಾಗೂ ವ್ಯಕ್ತಿನಾಮಗಳನ್ನು ಪರಿಶೀಲಿಸಿದರೆ ಸಾಕು.........ಚಾರಿತ್ರಿಕ ಯುಗದ ಮೊದಲ ಹಂತಗಳಲ್ಲಿಯೇ, ಕನ್ನಡ ಮತ್ತು ತೆಲುಗುಗಳು ಪ್ರತ್ಯೇಕ ಭಾಷೆಗಳಾಗಿ ಬೆಳೆದಿರಲಿಲ್ಲವೆಂದು ಹೇಳುವುದು ಕಷ್ಟ. ನಾವು ಈಗ ಚರ್ಚಿಸುತ್ತಿರುವ ಕಾಲಘಟ್ಟಕ್ಕಿಂತ ಎಷ್ಟೋ ಮೊದಲೇ ಈ ಭಾಷೆಗಳು ಸ್ವತಂತ್ರಭಾಷೆಗಳಾಗಿದ್ದವು ಎನ್ನುವುದನ್ನು ದ್ರಾವಿಡಭಾಷಾ ಅಧ್ಯಯನಗಳು ಖಚಿತಪಡಿಸಿವೆ. (ತೆಲುಗು ಮತ್ತು ಕನ್ನಡಗಳು ದ್ರಾವಿಡಭಾಷಾಕುಟುಂಬದ ಬೇರೆ ಬೇರೆ ಶಾಖೆಗಳಿಗೆ ಸೇರಿದವು.) ಈ ಬಾಷೆಗಳನ್ನು ಸಾಕಷ್ಟು ಜನನಿಬಿಡವೂ ಅಭಿವೃದ್ಧಿಹೊಂದಿದವೂ ಆದ ಸಮುದಾಯಗಳು ಬಳಸುತ್ತಿದ್ದವು. ಅ ಜನರು, ಶಾತವಾಹನರಂತಹ ಸುವ್ಯವಸ್ಥಿತವಾದ ರಾಜ್ಯವ್ಯವಸ್ಥೆಗಳಲ್ಲಿ  ಪ್ರಜೆಗಳಾಗಿದ್ದರು. ಆ ಕಾಲದ ಪ್ರಾಕೃತ ಶಾಸನಗಳು ಮತ್ತು ಸಾಹಿತ್ಯದಿಂದ, ಹಾಗೆಯೇ ಅಮರಾವತಿ, ನಾಗಾರ್ಜುನಕೊಂಡ ಮುಂತಾದ ಕಡೆ ದೊರಕಿರುವ ಶ್ರೇಷ್ಠವಾದ ವಾಸ್ತುಕೃತಿಗಳಿಂದ  ತಿಳಿದುಬರುವಂತೆ, ಅವರು ನಾಗರಿಕತೆಯ ಬಹು ಎತ್ತರದ ನೆಲೆಗಳನ್ನು ತಲುಪಿದ್ದರು. ಅದ್ದರಿಂದ, ಆಕ್ಷರ ಸಂಸ್ಕೃತಿಯು ಪ್ರಾರಂಭವಾಗುವುದಕ್ಕಿಂತ ಮುಂಚಿನ ಕಾಲದಲ್ಲಿ, ಕನ್ನಡ ತೆಲುಗುಗಳ ಮೌಖಿಕಪರಂಪರೆಯು, ತಮಿಳಿನದಕ್ಕಿಂತ ಕಡಿಮೆ ಶ್ರೀಮಂತವೂ ಅಭಿವ್ಯಕ್ತಿಶೀಲವೂ ಆಗಿತ್ತೆಂದು ನಂಬಲು ಯಾವುದೇ ಕಾರಣಗಳಿಲ್ಲ.       

         ವಾಸ್ತವವಾಗಿ, ಮಹಾದೇವನ್ ಅವರು ಈ ಪ್ರಾಕೃತ ಶಾಸನಗಳಲ್ಲಿ ಹಳಗನ್ನಡದ ಪ್ರಭಾವವನ್ನು ಗುರುತಿಸಿದ್ದಾರೆ.

            9.  ಡಾ.ಷ.ಶೆಟ್ಟರ್ ಅವರು ತಮ್ಮ ಸಂಶೋಧಣೆಗಳು ಮತ್ತು ತರ್ಕಗಳಿಂದ ಈ ವಾದವನ್ನು ಎರುಮಿಕವುಡಿ, ‘ಪೊಶಿಲ್’, ‘ತಾಯಿಯರ್ ಮುಂತಾದ ಪದಗಳಿಗೆ ಹತ್ತಿರವಾದ ತಮಿಳು ಪದಗಳು ದೊರೆಯದಿರುವುದರಿಂದ ಅವುಗಳು ಕನ್ನಡ ಮೂಲದವೇ ಇರಬೇಕೆಂದು ಈ ವಿದ್ವಾಂಸರ ನಿಲುವು. ಮಹಾದೇವನ್ ಅವರು ಕೊಟ್ಟಿರುವ ಪಟ್ಟಿಗೆ ಶೆಟ್ಟರ್ ಅವರು ನಾಡು ಮತ್ತು ಇಳಯರ್ ಎಂಬ ಪದಗಳನ್ನೂ ಸೇರಿಸುತ್ತಾರೆ.  ಈ ಶಾಸನಗಳಲ್ಲಿ ಕಂಡುಬರುವ ಕೆಲವು ವ್ಯಾಕರಣದ ಸಂಗತಿಗಳು ಕೂಡ ತಮಿಳಿಗಿಂತ ಕನ್ನಡಕ್ಕೆ ನಿಕಟವಾಗಿವೆಯೆಂದು ಮಹಾದೇಔನ್ ಅವರು ಅಭಿಪ್ರಾಯ ಪಡುತ್ತಾರೆ. ಈ ಪ್ರದೇಶದಲ್ಲಿ ನಡೆದ ಜೈನಧರ್ಮೀಯರ ಚಲನವಲನಗಳೇ ಇಂತಹ ಪ್ರಭಾವಕ್ಕೆ ಕಾರಣವಾಗಿವೆಯೆಂದು ಈ ಇಬ್ಬರು ವಿದ್ವಾಂಸರೂ ಅಭಿಪ್ರಾಯ ಪಟ್ಟಿದ್ದಾರೆ. ಈ ಎಲ್ಲ ಶಾಸನಗಳೂ ಕ್ರಿಸ್ತಪೂರ್ವ ಒಂದನೆಯ ಶತಮಾನದಿಂದ ಕ್ರಿಸ್ತಶಕ ನಾಲ್ಕನೆಯ ಶತಮಾನದವೆರೆಗಿನ ಅವಧಿಗೆ ಸೇರಿದವು. ಈ ಕ್ಷೇತ್ರದಲ್ಲಿ ಶೆಟ್ಟರ್ ಅವರು ಮಾಡಿರುವ ಕೆಲಸವನ್ನು ಸಂಗ್ರಹವಾಗಿ ಹೇಳಲೂ ಇಲ್ಲಿ ಸಾಧ್ಯವಾಗುವುದಿಲ್ಲ. ಅವರ ಮೂಲಕೃತಿಯನ್ನೇ ನೋಡುವುದು ಉಪಯುಕ್ತವಾಗುತ್ತದೆ.

            10.     ಕನ್ನಡ ಮತ್ತು ಕರ್ನಾಟಕದ ಪ್ರಾಚೀನತೆಯನ್ನು ಸಾಧಿಸುವ ಹಾದಿಯಲ್ಲಿ ಇಂತಹುದೇ ಮಹತ್ವದ ಕೆಲಸ ಮಾಡಿರುವ, ಕರ್ನಾಟಕದ ಮತ್ತೊಬ್ಬ ವಿದ್ವಾಂಸರು ಶಂ.ಬಾ. ಜೋಷಿಯವರು. ಇವರ ಕೆಲಸವು ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರಗಳ ಮೇಲೆ ಗಮನ ಹರಿಸಿದೆ. ಇವರ ಬರವಣಿಗೆಯು 1933 ರಷ್ಟು ಹಿಂದೆಯೇ ಪ್ರಕಟವಾಯಿತು. ಅವರು ವಿಪುಲ ಪ್ರಮಾಣದ ಜನಾಂಗಿಕ, ಚಾರಿತ್ರಿಕ ಮತ್ತು ಭಾಷಿಕ ಸಾಕ್ಷಿಗಳನ್ನು ಸಂಗ್ರಹಿಸಿದರು. ಅದೆಲ್ಲವನ್ನೂ ಬಳಸಿಕೊಂಡು ಕನ್ನಡ ಮಾತನಾಡುವ ಜನಸಮುದಾಯಗಳು ಗೋದಾವರಿ ನದಿಯ ಉತ್ತರದಲ್ಲಿಯೂ ಇದ್ದವೆಂದು ತೋರಿಸಿಕೊಡಲು ಪ್ರಯತ್ನಿಸಿದರು. ಅವರು ಕುರ್ಖ್, ಮಾಯೈರರು, ಗೋಲಾರಿ ಹೊಲಿಯರು ಮತ್ತು ಹಳಬರು ಎಂಬ ಸಮುದಾಯಗಳನ್ನು ಹೆಸರಿಸುತ್ತಾರೆ. ಆ ಸಮುದಾಯಗಳು ಮಾತನಾಡುವ ಭಾಷೆಗಳಲ್ಲಿ ಅನೇಕ ಕನ್ನಡ ಪದಗಳಿವೆಯೆಂದು ತೋರಿಸಿಕೊಡುತ್ತಾರೆ. ಜೋಶಿಯವರ ಪ್ರಕಾರ, ಅವುಗಳೆಲ್ಲವೂ ಅಲೆಮಾರಿಗಳಾದ ಗೊಲ್ಲರ ಮತ್ತು ಕುರುಬರ ಸಮುದಾಯಗಳು. ಈ ಸಂಗತಿಗಳನ್ನೂ ಆಧರಿಸಿ ಜೋಶಿಯವರು ಕೂಡ ಕನ್ನಡವು ಕ್ರಿಸ್ತ ಶಕದ ಪ್ರಾರಂಭಕಾಲದಿಂದಲೂ ಇತ್ತೆಂದು ವಾದಿಸುತ್ತಾರೆ.

  ಆಧಾರ: ವಿಜಯವಾಣಿ ಪತ್ರಿಕೆ, ಕನ್ನಡ ಶಾಸ್ತ್ರೀಯ ಆರ್ಗ್ ಅಂತರ್ಜಾಲ

ಕನ್ನಡ ಸಾಹಿತ್ಯದ ಬೆಳವಣಿಗೆ:

ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನ ದಲ್ಲಿ (ಸು. ಕ್ರಿ.ಶ೩೭೦ ರಿಂದ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ [[ಕವಿರಾಜಮಾರ್ಗ] ನೃಪತುಂಗನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯನ ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು.

ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖ ಈ ಪುಸ್ತಕದಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬-೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸ ಬಹುದು: ಹಳೆಗನ್ನಡನಡುಗನ್ನಡ ಹಾಗೂ ಆಧುನಿಕ ಕನ್ನಡ.

ಹಳೆಗನ್ನಡ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ (ಕ್ರಿ.ಶ. ೯೦೨-೯೭೫).

ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ.' ಮಾನವ ಕುಲ ತಾನೊಂದೇ ವಲಂ' ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.

ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣವನ್ನು ರಚಿಸಿದ ಪೊನ್ನ (೯೩೯-೯೬೬). ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ (೯೪೯-?). ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ.

ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ (ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ)

ನಡುಗನ್ನಡ

ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.

ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.

ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದಮಣಿದರ್ಪಣ.


ಕೃಪೆ: ವಿಜಯವಾಣಿ, ಶಾಸ್ತ್ರೀಯ ಕನ್ನಡ ಆರ್ಗ್.


ವಿಡಿಯೋ- ಆಡಿಯೋ

ಪ್ರಾಚೀನ ಕರ್ನಾಟಕದ ಶಿಕ್ಷಣ ಪದ್ಧತಿ ವಿಡಿಯೋ ಗಾಗಿ ಇಲ್ಲಿ ಕ್ಲಿಕ್ಕಿಸಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಬಿ.ಎ. ಪ್ರಥಮ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳು

ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ಕರ್ನಾಟಕದ  ಸಾಂಸ್ಕೃತಿಕ ಇತಿಹಾಸ(OCE) BA Ist Semester Model question Paper Total Marks : 60.    Total time: 2 hours Section A *Q.1 ಬೇಕಾದ ಎರಡು ಪ್ರಶ್ನೆಗಳಿಗೆ ಟಿಪ್ಪಣಿ ಬರೆಯಿರಿ.   ೨×೫=೧೦* ೧. ಕರ್ನಾಟಕದ ಪ್ರಾಚೀನತೆ ೨. ಶಿಕ್ಷಣ ಪದ್ಧತಿ ಮತ್ತು ಅಗ್ರಹಾರ ೩. ದಸರಾ ಮತ್ತು ಮಹಾಮಸ್ತಕಾಭಿಷೇಕ ೪. ಪ್ರದರ್ಶನ ಕಲೆಗಳು Section B *Q. 2. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ. 2×10=20* ೧. ಪ್ರಾಚೀನ ಕರ್ನಾಟಕ ಅಧ್ಯಯನದ ಶಾಸನಗಳು ತಿಳಿಸಿರಿ‌. ೨. ಪ್ರಾಚೀನ ಕರ್ನಾಟಕದ ಕೃಷಿ ಪದ್ಧತಿ ಹಾಗೂ ನಿರಾವರಿ ವ್ಯವಸ್ಥೆಯನ್ನು ವಿವರಿಸಿ. ೩. ಭೂದತ್ತಿ ಎಂದರೇನು? ಪ್ರಕಾರಗಳನ್ನು ವಿವರಿಸಿರಿ. ೪. ಕರ್ನಾಟಕ ಹಿಂದೂ ಧರ್ಮದ ವಿವಿಧ ಪಂಥಗಳಾದ ಶೈವ, ವೈಷ್ಣವ, ಭಾಗವತ ಪಂಥಗಳ ಕುರಿತು ಬರೆಯಿರಿ. Section C *Q.3. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ. ನಕಾಶೆ ಪ್ರಶ್ನೆ ಕಡ್ಡಾಯ. 2×15=30* ೧. ೩ನೇ ಶತಮಾನದಿಂದ ೧೦ನೇ ಶತಮಾನದ ವರೆಗಿನ ಸಾಹಿತ್ಯದ ಬೆಳವಣಿಗೆಯನ್ನು ತಿಳಿಸಿರಿ. ೨. ಪ್ರಾಚೀನ ಕರ್ನಾಟಕದ ಸಾಮಾಜಿಕ ಜೀವನವನ್ನು ವಿವರಿಸಿರಿ. ೩. ಪ್ರಾಚೀನ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸಿರಿ. ೪. ಕರ್ನಾಟಕದ ಜೈನ ಮತ್ತು ಬೌದ್ಧ ಕೇಂದ್ರಗಳ ಕುರಿತು ಬರೆಯಿರಿ. ----------------------- DSC 1: ಕರ್ನಾಟಕ ರಾಜಕೀಯ ಇತ...