ವಿಷಯಕ್ಕೆ ಹೋಗಿ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ ಡಾ. ವ್ಹಾಯ್. ಎಂ.ಯಾಕೋಳ್ಳಿ

ಇಂದು ಸಂಜೆಗೊಂದು*ಗಜಲ್...* ಓದಿನೊಂದಿಗೆ,

-
ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ 
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ
-
ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ 
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ 
-
ಮೊಳೆತ ಬೆಳೆಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ
-
ವಸುಂಧರೆಯ ಹೊಕ್ಕುಳ ಬೇರು ಇದ್ದಿಲು ಗಣಿಗಾರಿಕೆಯಲಿ ಬೂದಿಯಾಗಿದೆ 
ರಾಜ ವ್ಯಾಪಾರಿಯಾಗಿ ಮಣ್ಣಿನ ಧ್ಯಾನ ಮಾಡುವ ಮಕ್ಕಳು ಭಿಕಾರಿಯಾಗಿದ್ದಾರೆ
-
ಅಳಿದುಳಿದವರು ಉಟ್ಟ ಬಟ್ಟೆಯಲಿ ಉರಿವ ಧರೆ ಮೇಲೆ ನೆತ್ತರದ ಹಾದಿ ಮಾಡುತ್ತಿದ್ದಾರೆ
ತಟ್ಟೆ ತುಂಬಿಸಿ ಹೊಟ್ಟೆ ಇಂಬಾಗಿಸಿದವರು ರೈತರ ನೋವಿನ ಧ್ವನಿಗೆ ಕಿವುಡಾಗಿದ್ದಾರೆ
-
ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು  ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ
-
ಸಹದೇವ ಯರಗೊಪ್ಪ, ಗದಗ
:::::::::::::::::::::::::::::::::::::::::::::::::::::::::::::::::::::::::::::::::::
ಗಜಲ್ ವಿವರಣೆ: ಡಾ. ವಾಯ್.ಎಂ.ಯಾಕೊಳ್ಳಿ

ನಮ್ಮ ನಡುವಿನ ಶ್ರೇಷ್ಠ ಗಜಲ್ ಕಾರರಲ್ಲಿ ಸಹದೇವ  ಯರಗೊಪ್ಪ ಅವರು ಒಬ್ಬರು . ಹಾಗೆ  ನೋಡಿದರೆ ಸಹದೇವ ಅವರು ಸಾಹಿತ್ಯಯಾನ  ತುಂಬ ಅಚ್ಚರಿಯನ್ನು ಹುಟ್ಟಿಸುವಂತಿದೆ.ಏಕೆಂದರೆ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದು ಅಂದರೆ ಬರಹ ಕ್ಷೇತ್ರ ಪ್ರವೇಶಿಸಿದ್ದು ತೀರಾ ಇತ್ತೀಚೆಗೆ.  ನಾಲ್ಕಾರು ವರ್ಷಗಳ ಹಿಂದೆ ಅವರ ಕವನ ಸಂಕಲನ,ಗಜಲ್ ಸಂಕ ಲನ ಬಂದವು. ಕೃಷಿ ಅಧಿಕಾರಿಗಳಾಗಿ ಅವರ ಇಲಾಖೆಯ  ಸಾಹಿತ್ಯ ಕುರಿತು ಕೆಲವು ಕೃತಿಗಳನ್ನು ಬರೆದಿದ್ದರು.ಆದರೆ ಅವರ ಸಾಹಿತ್ಯದ  ಅಧ್ಯಯನ  ಹವ್ಯಾಸವಾಗಿ ಆರಂಭವಾದದ್ದು ಬಹಳ ಹಿಂದೆಯೇ. ಅವರು ಕೃಷಿ  ವಿಜ್ಞಾನದ  ಸ್ನಾತಕೋತ್ತರ  ಪದವಿಧರರಾದ ರೂ  ಸಾಹಿತ್ಯವನ್ನು ಓದುವ ಹವ್ಯಾಸ ಬಾಲ್ಯದಿಂದಲೇ ಬಂದದ್ದು .ಕವಿತೆ ಅವರ ಆಳದಲ್ಲಿ ಹುದುಗಿದ್ದ ಅಮೂಲ್ಯ ಶಕ್ತಿ ಎನ್ನಿಸುವದು ಅವರ ಕವಿತೆಗಳನ್ನು ಓದಿದಾಗ ಸಹಜವಾಗಿ ಅನ್ನಿಸದಿರದು. ಕೆಲವೇ ವರ್ಷಗಳಲ್ಲಿ ಅವರ ಎರಡು ಗಜಲ್ ಸಂಕಲನ ಬಂದಿವೆ.

ಸಾಮಾನ್ಯವಾಗಿ ಗಜಲ್, ಒಲವಿನ ವಿರಹದ, ಆರ್ದ್ರ ನಿವೇದನೆ ಯಾಗಿರುವದು ಸಹಜ. ಆದರೆ ಇತ್ತೀಚೆಗೆ ಗಜಲ್ ಕಾವ್ಯ ಕೂಡ  ಬದುಕಿನ ಬೇರೆ ಬೇರೆ ಆಯಾಮಗಳನ್ನು ವಸ್ತುವಾಗಿ ಬಳಸಿ ಕೊಳ್ಳುತ್ತಿರುವದನ್ನು ಕಾಣುತ್ತೇವೆ.

ರೈತನ ಬದುಕು ,ಅವನ ದಾರುಣ ಬಡತನ, ಉಳ್ಳವರು ಮಾಡುವ ಶೋಷಣೆ ಇವೆಲ್ಲ ಗಜಲ್ ಕವಿತೆಯಲ್ಲಿ ಸಹದೇವರ ಕವಿತೆಗಳಲ್ಲಿ ತುಂಬ ಸಶಕ್ತವಾಗಿ ಬಂದಿವೆ .ಮೇಲಿನ ಗಜಲ್ ಕೂಡ ಇದಕ್ಕೆ ಒಂದು ಸಾಕ್ಷಿಯಂತಿದೆ.
ಆರಂಭದಲ್ಲಿಯೇ ಉಳ್ಳವರು  ರೈತನನ್ನು ,ಅವನ  ದುಡಿಮೆಯನ್ನು ಹೇಗೆ ಅಪಹರಿಸಿದ್ದಾರೆ ಎನ್ನುವುದನ್ನು  ಚಿತ್ರಿಸುತ್ತಾರೆ.ಮೊದಲ ಸ್ಟಾಂಜಾ-

ಮೇಳಿ ಹಾಲು ಕುಡಿದ ಅಂಗೈ ಎದೆಗೆ ಮೊಳೆ ಹೊಡೆದು ಶಿಲುಬೆಗೇರಿಸಿದ್ದಾರೆ 
ಬೆವರ ಹೊನ್ನಿರಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳನು ನೇಣಿಗೇರಿಸಿದ್ದಾರೆ

ಮೊದಲ ಸಾಲುಗಳಲ್ಲೇ ರೈತನಿಗೆ ,ಕ್ರಿಸ್ತನನ್ನು ಶಿಲುಬೆಗೆರಿಸಿದ ಹಾಗೆ ಮೊಳೆ ಹೊಡೆದಿರುವದನ್ನು ಚಿತ್ರಿಸಿದೆ.ಆದರೆ ಇಲ್ಲಿ ಮೊಳೆ ಹೊಡೆದಿರುವದು  ಅವನ ದುಡಿಯುವ ಕೈಗೆ. ಶಿಲುಬೆಗೆ ರಿದವರು ಬೆವರ ಹೊನ್ನಿನಲಿ ಅನ್ನ ಬೇಯಿಸಿದ ಮಣ್ಣಿನ ಕುಡಿಗಳು ಎನ್ನುವದು ರೈತ ಎದುರಿಸುತ್ತಿರುವ  ನಿಜವಾದ ದುರಂತ ಚಿತ್ರವಾಗಿದೆ. ರೈತನಿಗೆ ಉಪಕಾರ  ಮಾಡುವ ನೆವದಲ್ಲಿ  ಕೆಲವು ಅಳುವ ಕೈಗಳು ಅವನಿಗೆ ಸಹಾಯ ಮಾಡುವ ನಾಟಕ ಮಾಡಿವೆ. ಆದರೆ ಅದು ನಿಜವಾದ ಪ್ರೀತಿ ತುಂಬಿದ ಸಹಾಯವಾಗದೆ  ಕುಶಲ ಮಾತುಗಳು ಆಟವಾಗಿದೆ .ಅಂತಹ ಖಾಲಿ ಮಾತುಗಳು ಅವನ ಒಡಲಾಗ್ನಿ ನಂದಿಸುವದಿಲ್ಲ. ಹಾಗಾಗಿ ಒಮ್ಮೊಮ್ಮೆ ರೈತ ತನ್ನ ಸಂಘಟನೆ ಕಟ್ಟಿಕೊಂಡು ಅಂಥವರ ವಿರುದ್ಧ  ಪ್ರತಿಭಟನೆಗಿಳಿದಿದ್ದಾನೆ. ಆದರೆ ಅವನ ಪ್ರತಿಭಟನೆಯನ್ನು ವ್ಯವಸ್ಥಿತ ವರ್ಗ ಚದುರಿಸುವ ಹುನ್ನಾರ ಮಾಡಿದೆ.ಇದನ್ನು ಈ ಕೆಳಗಿನ ಸಾಲುಗಳು ಚಿತ್ರಿಸಿದೆ.

ಸೊಂಟ ಬಿದ್ದ ಮುಳ್ಳು ನಾಲಿಗೆಯ ಕುಶಾಲಿ ಮಾತುಗಳು ಒಡಲಾಗ್ನಿ ನಂದಿಸಲಿಲ್ಲ 
ಹೆಗಲ ಮೇಲಿನ ಹಸಿರು ಗಿಣಿಗಳನು ಗದರಿಸಿ ಚದುರಿಸುವ ಹುನ್ನಾರ ನಡೆಸಿದ್ದಾರೆ 

 ಈಗ ರೈತನಿಗೆ ಬೇರೆ ದಾರಿಯೇ ಇಲ್ಲ. ಆತ  ಹೊತ್ತೆಗನ್ನವನರಸಿ ಗುಳೆ ಹೋಗುವುದು ಅನಿವಾರ್ಯವಾಗಿದೆ. ಅವನ ಹೊಲದಲ್ಲಿ ಇಳುವರಿ  ಬಂದದ್ಧು ಬೆಳೆಯದಾಗಿರದೇ ಬೆಳೆ ಸಾಲದ್ದು. ಬೆಳೆದ ಬೆಳೆಗೆ ಬೆಲೆ ಸಿಗದೆ ಸಾಲದ ಸುಳಿಗೆ ಸಿಕ್ಕು ತನ್ನ ಗಳೆ ಸಾಮಾನುಗಳೊಂದೀಗೆ ಗುಳೆ ಹೊರಟಿದ್ದಾನೆ. ಮೊಳೆತದ್ದು ಬೇಳೆಸಾಲವೆ  ಹೊರತು ಬೇಳೆಯಲ್ಲ.ಇಡೀ ನೇಗಿಲ ಕುಲದ ನೆತ್ತಿಗೆ ಹಸಿವಿನ ಬುತ್ತಿ ಹೊರುವ ಸ್ಥಿತಿ ಬಂದಿದೆ .ಈ ದಾರುಣ ಚಿತ್ರ ಕೆಳಗಿನ ಸಾಲುಗಳಲ್ಲಿದೆ.

ಮೊಳೆತ ಬೆಳೆ ಸಾಲದ ಇಳುವರಿಗೆ ಹೆದರಿ ಗಳೆ ಸಾಮಾನುಗಳು ಗುಳೆ ಹೊರಟಿವೆ
ಬಿಗಿದ ನೆಲದ ಬೆತ್ತಲ ನೆತ್ತಿ ಚೂರಿದ ನೇಗಿಲ ಕುಲಕ್ಕೆ ಹಸಿವಿನ ಬುತ್ತಿ ಹೊರೆಸಿದ್ದಾರೆ 

ಭೂಮಿಯ ಹೊಕ್ಕುಳಿನ ಮಕ್ಕಳು ಭಿಕಾರಿಯಾಗಿ ಅನ್ನ ಕೊಡುವ  ನೆಲವೆಲ್ಲ  ಗಣಿಗಾರಿಕೆಯ ಜನರ ಕೈಯಲ್ಲಿ ಸಿಲುಕಿದೆ.ರಕ್ಸಿಸಬೇಕಾದ ರಾಜನೇ ವ್ಯಾಪಾರಿಯಾಗಿದ್ದಾನೆ. ಮುಂದೆ ರಕ್ಷಿಸುವವರು ಯಾರು? ಮಣ್ಣಿನ ಧ್ಯಾನ ಮಾಡುವ    ಮಕ್ಕಳು ಭಿಕಾರಿಯಾದರೆ ಬೇರೆ ಮಾರ್ಗವೆಲ್ಲಿದೆ? ನಿಜಕ್ಕೂ ಕವಿತೆ ಎದೆ ಒಡೆಯುವ ಚಿತ್ರಗಳನ್ನು ನಿರುಮ್ಮಳ ಶೈಲಿಯಲ್ಲಿ ಚಿತ್ರಿ ಸಿದೆ. ಅಳಿದುಳಿದವರಿಗೆ ಉಳಿದಿರುವುದು ನೆತ್ತರದ ಹಾದಿಯಲ್ಲದೆ ಇನ್ನೇನು? ಅಂತೆಯೇ ಕವಿ ಕೊನೆ ಸಾಲುಗಳಲ್ಲಿ

ಮಣ್ಣಿನ ಮೂರ್ತಿಗೆ 'ಸಾಚಿ' ನಿತ್ಯ ತಿಳಿನೀರು ಬಸಿದರೂ ಅರೆಹೊಟ್ಟೆ ತುಂಬುತ್ತಿಲ್ಲ
ಕಳ್ಳರು ಉಳುವ ಯೋಗಿಯನು  ಉಳ್ಳವರೆದುರಿಗೆ ನೊಗ ಹೊರಿಸಿ ನಿಲ್ಲಿಸಿದ್ದಾರೆ

ರೈತನನ್ನು ಊಳುವ ಯೋಗಿಯಂದದ್ದು ಸಾರ್ಥಕ ಪ್ರತಿಮೆ.ನಿತ್ಯ ದುಡಿದರು ಹೊಟ್ಟೆ ತುಂಬುವಷ್ಟು ಅನ್ನ ಸಿಗದ ರೈತರಲ್ಲವರೆದುರಿಗೆ ನೋಗ ಹೊತ್ತು ನಿಂತಿರುವ ದಾರುಣ ಚಿತ್ರದೊಂದಿಗೆ ಕವಿತೆ ಮುಕ್ತಾಯವಾಗಿದೆ.
ನಿಜಕ್ಕೂ ಒಂದು ಅಪರೂಪದ ಗಜಲ್ ನೀಡಿದ ಸಹದೇವ ಯರಗೊಪ್ಪ ಅವರನ್ನು ಅಭಿನಂದಿಸುವದೂ ಒಂದು ರೀತಿಯಲ್ಲಿ ಹೆಮ್ಮೆಯ ಮಾತಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ರಾಷ್ಟ್ರೀಯ ಹಬ್ಬಗಳು

ಭಾರತದ ರಾಷ್ಟ್ರೀಯ ಹಬ್ಬಗಳು.Indian National Festivals ಭಾರತದ ರಾಷ್ಟ್ರೀಯ ಹಬ್ಬಗಳು ನಮ್ಮ ಭಾರತ ದೇಶವು ಜಾತ್ಯತೀತ ದೇಶವಾಗಿದೆ, ಇಲ್ಲಿ ಎಲ್ಲಾ ಜಾತಿ ಧರ್ಮದ ಜನರು ಎಲ್ಲಾ ಟೀಜ್ ಹಬ್ಬವನ್ನು ಬಹಳ ಆಡಂಬರದಿಂದ ಆಚರಿಸುತ್ತಾರೆ. ರಾಖಿ, ದೀಪಾವಳಿ, ದಸರಾ, ಈದ್, ಕ್ರಿಸ್‌ಮಸ್ ಮತ್ತು ಅನೇಕ ಜನರು ಒಟ್ಟಾಗಿ ಹಬ್ಬವನ್ನು ಆಚರಿಸುತ್ತಾರೆ. ಭಾರತದ ದೇಶದಲ್ಲಿ ಹಬ್ಬಗಳಿಗೆ ಕೊರತೆಯಿಲ್ಲ, ಧರ್ಮದ ಪ್ರಕಾರ ವಿಭಿನ್ನ ಹಬ್ಬಗಳಿವೆ. ಆದರೆ ಅಂತಹ ಕೆಲವು ಹಬ್ಬಗಳಿವೆ, ಅವು ಯಾವುದೇ ಜಾತಿಯವರಲ್ಲ, ಆದರೆ ನಮ್ಮ ರಾಷ್ಟ್ರವನ್ನು ನಾವು ರಾಷ್ಟ್ರೀಯ ಹಬ್ಬ ಎಂದು ಕರೆಯುತ್ತೇವೆ. ಭಾರತದ ರಾಷ್ಟ್ರೀಯ ಹಬ್ಬ. (Indian national festivals in Kannada ). 1947 ರಿಂದ ದೇಶದ ಸ್ವಾತಂತ್ರ್ಯದ ನಂತರ, ಈ ರಾಷ್ಟ್ರೀಯ ಹಬ್ಬಗಳು ನಮ್ಮ ಜೀವನದ ಭಾಗವಾದವು, ಅಂದಿನಿಂದ ನಾವು ಅವರನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ. ಈ ಹಬ್ಬವು ನಮ್ಮ ರಾಷ್ಟ್ರೀಯ ಏಕತೆಯನ್ನು ತೋರಿಸುತ್ತದೆ. ಭಾರತದ ಪ್ರಮುಖ ರಾಷ್ಟ್ರೀಯ ಹಬ್ಬಗಳು – 1. ಸ್ವಾತಂತ್ರ್ಯ ದಿನ15 ಆಗಸ್ಟ್ 2. ಗಣರಾಜ್ಯೋತ್ಸವ 26 ಜನವರಿ 3. ಗಾಂಧಿ ಜಯಂತಿ 2 ಅಕ್ಟೋಬರ್ ಇದು ರಾಷ್ಟ್ರೀಯ ಹಬ್ಬ, ಇದು ರಾಷ್ಟ್ರೀಯ ರಜಾದಿನವೂ ಆಗಿದೆ. ಇದಲ್ಲದೆ, ಶಿಕ್ಷಕರ ದಿನ, ಮಕ್ಕಳ ದಿನವೂ ರಾಷ್ಟ್ರೀಯ ರಜಾದಿನವಾಗಿದೆ, ಇವುಗಳನ್ನು ನಮ್ಮ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಆಚರಿಸಲಾಗುತ್ತದೆ. ಇದಲ

ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture)

1.1 ಭಾರತೀಯ ಸಂಸ್ಕೃತಿಯ ಲಕ್ಷಣಗಳು (Characteristics of Indian Culture) ಭಾರತದ ಸಾಂಸ್ಕೃತಿಕ ಪರಂಪರೆಯು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಮಾನವನ ಉಗಮದೊಂದಿಗೆ ಉಗಮವಾಗಿ ಬೆಳೆದು ಸಾಗಿ ಬಂದ ಪರಂಪರೆಯು ಅವನ ಜೀವನ ಮೌಲ್ಯಗಳು, ವಸತಿ ರಕ್ಷಣೆ, ಆಹಾರ, ವಿಹಾರ, ಉಡುಗೆ-ತೊಡುಗೆ, ಮನರಂಜನೆ, ವ್ಯಾಪಾರ, ವಾಣಿಜ್ಯ, ಸಂಗೀತ, ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಶಿಕ್ಷಣ, ಧರ್ಮಗಳು, ರೂಢಿ-ಸಂಪ್ರದಾಯಗಳು, ಭಾಷೆ, ನಟನೆ, ನಂಬಿಕೆ, ನೃತ್ಯ, ಆಚರಣೆ, ಹವ್ಯಾಸ, ಸಾಹಿತ್ಯ, ವಿಧಿ-ವಿಧಾನಗಳನ್ನು ಒಳಗೊಂಡಿದೆ. ಈ ಅಂಶಗಳಲ್ಲಿ ಕೆಲವು ಕಾಲಕ್ಕೆ ತಕ್ಕಂತೆ ಮತ್ತು ಪ್ರಾದೇಶಿಕವಾಗಿ ಭಿನ್ನತೆ ಹಾಗೂ ಬದಲಾವಣೆಗೊಂಡಿದ್ದರೂ ನಿರಂತರವಾಗಿ ಸಾಗಿ ಬಂದಿವೆ. ಅವುಗಳ ಗುಣ ಲಕ್ಷಣಗಳು ಈ ಕೆಳಗಿನಂತಿವೆ: 1. ಸಾಂಪ್ರದಾಯಕ ಜೀವನ ವಿಧಾನ: ಭಾರತೀಯರ ಜೀವನ ವಿಧಾನ ಪಾರಂಪರಗತವಾಗಿ ಪೂರ್ವಜರಿಂದ ಸಾಗಿ ಬಂದಿದೆ. ಪಾರಂಪರಗತವಾಗಿ ಭಾರತೀಯರದು ಕೃಷಿ ಪ್ರಧಾನವಾದ ಜೀವನ ವಿಧಾನವಾಗಿದ್ದು, ಭೂಮಿಯನ್ನು 'ಭೂದೇವಿ' ಎಂದು ಆರಾಧಿಸುತ್ತಾರೆ. ಭೂಮಿಯನ್ನು ಹಸನಗೊಳಿಸಿ, ಹದ ಮಾಡಿ, ಉತ್ತಿ-ಬಿತ್ತುವ ಪೂರ್ವದಲ್ಲಿ ಭೂದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಕಾಯಕವನ್ನು ಪ್ರಾರಂಭಿಸುತ್ತಾರೆ. ಕಾಲಕಾಲಕ್ಕೆ ಮಳೆಯಾಗಿ, ಸಮೃದ್ಧವಾದ ಬೆಳೆಯನ್ನು ಕೊಡುವ ಮೂಲಕ ನಿನ್ನ ಮಕ್ಕಳನ್ನು ಸಲಹು ತಾಯಿ ಎಂದು ಬೇಡಿಕೊಳ್ಳುತ್ತಾರೆ. ಕೃಷಿ ಸಲಕರಣಗಳಲ್ಲಿ, ಬಿತ್ತುವ ಬೀಜಗಳಲ್

DSC-2 ಭಾರತದ ಸಾಂಸ್ಕೃತಿಕ ಪರಂಪರೆ::ಪೌರಾಣಿಕ ಐತಿಹ್ಯಗಳು: ಮಹಾಭಾರತ ಮತ್ತು ರಾಮಾಯಣ, ಪಂಚತಂತ್ರ

ಐತಿಹ್ಯ ಗಳು: ಇಂಗ್ಲೀಷಿನ Legend ಎಂಬ ಪದಕ್ಕೆ ಸಮನಾಗಿ ಇಂದು ನಾವು ‘ಐತಿಹ್ಯ’ ಎಂಬುದನ್ನು ಪ್ರಯೋಗಿಸುತ್ತಿದ್ದೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುವುದಕ್ಕಿಂತ ಹಿಂದಿನಿಂದಲೇ ‘ಐತಿಹ್ಯ’ ಎಂಬ ಶಬ್ದಪ್ರಯೋಗ ನಮ್ಮಲ್ಲಿ ತಕ್ಕಷ್ಟು ರೂಢವಾಗಿದೆ. ಸಾಮಾನ್ಯರು ಇತಿಹಾಸವೆಂದು ನಂಬಿಕೊಂಡು ಬಂದ ಘಟನೆ ಅಥವಾ ಕಥನವೆಂಬ ಅರ್ಥದಲ್ಲಿ ಅದು ಪ್ರಯೋಗಗೊಳ್ಳುತ್ತಿದ್ದುದನ್ನು ನಾವು ಆಗೀಗ ಕಾಣುತ್ತೇವೆ. ಜಾನಪದ ಶಾಸ್ತ್ರವಾಗಿ ಬೆಳೆಯುತ್ತ ಬಂದದ್ದರಿಂದ ಅದೊಂದು ನಿಶ್ಚಿತ ಪರಿಕಲ್ಪನೆಯಾಯಿತೆಂದು ಹೇಳಬೇಕಾಗುತ್ತದೆ. ಐತಿಹ್ಯದ ಮೂಲವಾದ `Legend’ ಎಂಬ ಪದ ಮಧ್ಯಕಾಲೀನ ಲ್ಯಾಟಿನ್ನಿನ ಲೆಜಂಡಾ (Legenda) ಎಂಬ ರೂಪದಿಂದ ನಿಷ್ಪನ್ನವಾದುದು. ಇದರರ್ಥ ಪಠಿಸಬಹುದಾದದ್ದು, ಎಂದು”.ಇದಕ್ಕೆ ಯುರೋಪಿನಲ್ಲಿ ಸಾಧುಸಂತರ ಕಥೆಗಳು ಎಂಬಂಥ ಅರ್ಥಗಳು ಮೊದಲಲ್ಲಿ ಪ್ರಚಲಿತವಿದ್ದುದಾಗಿ ತಿಳಿದು ಬರುತ್ತದೆ.“ಲೆಜೆಂಡಾ” ಅಥವಾ “ಐತಿಹ್ಯ” ವೆಂಬುದು ಈ ಅರ್ಥಗಳಿಂದ ಸಾಕಷ್ಟು ದೂರ ಸರಿದಿದೆಯೆಂದು ಬೇರೆ ಹೇಳಬೇಕಾಗಿಲ್ಲ. ಐತಿಹ್ಯವೆಂದರೆ ಈಗ ವ್ಯಕ್ತಿ, ಸ್ಥಳ ಅಥವಾ ಘಟನೆಯೊಂದರ ಸುತ್ತ ಸಾಂಪ್ರದಾಯಿಕವಾಗಿ ಮತ್ತು ಯಾವುಯಾವುವೋ ಮೂಲ ಸಂಗತಿಗಳ ಮೇಲೆ ಆಧರಿತವಾಗಿ ಬಂದ ಕಥನ ಎಂದು ಸಾಮಾನ್ಯವಾದ ಅರ್ಥ ಪಡೆದುಕೊಂಡಿದೆ. “ಐತಿಹ್ಯ” ಕೆಲವು ವೇಳೆ ಸತ್ಯ ಘಟನೆಯೊಂದರಿಂದಲೇ ಹುಟ್ಟಿಕೊಂಡಿರಬಹುದು; ಎಂದರೆ, ಅದು ನಿಜವಾದ ಚರಿತ್ರೆಯನ್ನೊಳಗೊಂಡಿರಬಹುದು. ಆದರೆ ಯಾವತ್ತೂ ಅದರಲ್ಲಿ ಚರಿತ್ರೆಯೇ ಇರುತ