ವಿಷಯಕ್ಕೆ ಹೋಗಿ

ಕವಯತ್ರಿ ಭಾರತಿ ಮಧಬಾವಿಯವರ ಕವಿತೆ 'ಸರಳ ರೇಖೆ' ಮತ್ತು ಸುರೇಶ ಮುದ್ದಾರ ಅವರ ವಿಮರ್ಶೆ


ಕವಿತೆ: ಸರಳ ರೇಖೆ
ನೀನು
ಗಣಿತದ ಸರಳರೇಖೆ
ನಾನೇನು ಸುಲಭವೇ?
ನಿನ್ನ ಹಾಗೆ ನಾನೂ ಸರಳರೇಖೆ

ಅತ್ತಿತ್ತ ನೋಡದೇ
ಭಾವನೆಗಳಿಗೆ ಬೆಲೆ ಕೊಡದೇ
ನೇರ ನಿನ್ನ ಪಯಣ
ಅಡ್ಡಿಯಾಗಿಲ್ಲ ಎಡರು ತೊಡರುಗಳು
ನಿನ್ನ ಪಥಕೆ
ನನಗೆ ಹಾಗಲ್ಲಾ
ಬಿದ್ದಿವೆ ಬೆಟ್ಟದಷ್ಟು
ಅಡ್ಡಿಗಳು ಅಡ್ಡಡ್ಡ ಬಂದರೂ
ಸಾಗುವೆ ನೇರ ನಿನ್ನಂತೆ
ನೀ ನನಗೆ ಮಾದರಿ
ಹೇಳೆನು ನಾ ಬೀಗದೇ
ಸಾಗು ಮುಂದೆಲ್ಲ ನಿನ್ನದೇ ದಾರಿ
ಜೊತೆಯಲ್ಲಿ ಸಾಗುವೆ
ಕಿಂಚಿತ್ತೂ ನಿನ್ನನ್ನು ನೋಡದೇ
ನಿನಗಿಂತ ವೇಗವಾಗಿ

ಮನಸುಗಳನ್ನು ಸಾಯಿಸಿ
ದಾರಿ ಸವೆಸಿದರೇನು ಬಂತು?
ಬೀಗಿದರೇನು ಬಂತು
ಪ್ರತಿಷ್ಠೆಯ ಜೀವನ ಯಾರಿಗೆ ಬೇಕು
ಭಾವಗಳ ಜೊತೆ ಏಳುತ್ತ ಬೀಳುತ್ತ
ನಲಿಯುತ್ತ ಕಮರುತ್ತ
ಕಡಿದಷ್ಟು ಚಿಗುರುವ
ಮರದ ಹಾಗೆ ಚಿಗಿಯುವ
ಬದುಕು ನನಗೆ ಬೇಕು
ತೊಡರುಗಾಲು ಹಾಕಿ
ಬೀಳಿಸುವವರಿಗೆ ಬೀಳದೇ
ಕಣ್ಣ ಮುಂದಿರುವ ಬಿಂದುವಿನತ್ತ
ಸಾಗುವೆ ನಿನ್ನ ಹಾಗೆ

ನೀನು ಸರಳ ರೇಖೆ
ನಾನೂ ಸರಳ ರೇಖೆ
ಅಳೆಯಲಾರದ ಹಾದಿ ಸವೆಸಿದರೇನು
ಎಂದಿಗೂ ಎದುರಾಗೆವು ನಾವು 

ಭಾರತಿ ಮದಭಾವಿ, ಗೋಕಾಕ

********************************************
ಕವಿತೆಯ ವಿಮರ್ಶೆ: ಪ್ರೊ. ಸುರೇಶ ಮುದ್ದಾರ

            ಗಣಿತದ ಸರಳರೇಖೆಯನ್ನು ಸಾಂಕೇತಿಕವಾಗಿ ಪುರುಷತ್ವಕ್ಕೆ ಹೋಲಿಸಿ ಜೀವನದ  ಸ್ವಾರಸ್ಯವಿರುವುದು ಕೇವಲ ಪುರುಷ ಪ್ರಾಧಾನ್ಯತೆಯ ಜೀವನಕ್ಕಲ್ಲ, ಜೀವನ ಪರಿಪೂರ್ಣವೆನಿಸಿಕೊಳ್ಳಬೇಕೆಂದರೆ,ಸ್ತ್ರೀತ್ವವೂ ಅತ್ಯಂತ ಅವಶ್ಯಕ ಎನ್ನುವ ಸ್ತ್ರೀ ಪರ ಸಂವೇದನೆಯುಳ್ಳ ಕವಿತೆಯೆ ಶ್ರೀಮತಿ  ಭಾರತಿ ಮದಭಾವಿಯವರ "ಸರಳರೇಖೆ"ಯಾಗಿದೆ. 
           ಈ ಸೃಷ್ಟಿ ರಚನೆಯಾಗಿದ್ದು ಮತ್ತು ಅದರ ಅಗಾಧವಾದ ಚಲನಶೀಲತೆಗೆ ಪುರುಷ ಮತ್ತು ಪ್ರಕೃತಿಗಳೆ ಕಾರಣ ಎಂಬುದು ಸರ್ವವಿದಿತ. ಹಾಗೆಯೇ ಪ್ರಸ್ತುತ ಕವಿತೆಯಲ್ಲಿ ನಮ್ಮ ಸಾಮಾಜ ಚಲನಶೀಲತೆಯನ್ನು ಹೊಂದಬೇಕೆಂದರೆ, ಪುರುಷ ಮತ್ತು ಮಹಿಳೆ ಇಬ್ಬರೂ ಮುಖ್ಯ ಎಂಬುದನ್ನು ಪುರುಷ ಪ್ರಧಾನ ಸಮಾಜ ಅರ್ಥಮಾಡಿಕೊಳ್ಳುಬೇಕೆಂಬ ಆಗ್ರಹ ಕವಿತೆಯಲ್ಲಿದೆ.  
          ನೀನು
.         ಗಣಿತದ ಸರಳರೇಖೆ
.         ನಾನೇನು ಸುಲಭವೆ?
.         ನಿನ್ನ ಹಾಗೆ
.         ನಾನೂ ಸರಳರೇಖೆ
ಎಂಬ ಎದೆಗಾರಿಕೆಯ ಮಾತುಗಳಿಂದ ಪ್ರಾರಂಭವಾಗುವ ಕವಿತೆಯ ಸಾಲುಗಳು, ಮುಂದೆ ಸಾಗುತ್ತ ಪುರುಷ ಸಮಾಜಕ್ಕೆ ಸವಾಲಷ್ಟೆ ಅಲ್ಲ ಸ್ತ್ರೀ ಭಾವಗಳಿಗೆ ಮನ್ನಣೆ ಕೊಡದ ಸಮಾಜವು ಅಂತರಂಗದಲ್ಲಿ ಬರಡಾಗಿರುತ್ತದೆ  ಎಂಬುದನ್ನು ನಿರೂಪಿಸುತ್ತ ಪುರುಷ ಪ್ರಧಾನ ಸಮಾಜದ ದೃಷ್ಟಿಹೀನತೆಯನ್ದು ಸೂಕ್ಷ್ಮವಾಗಿ ವಿಡಂಬಿಸುವುದರ ಜೊತೆಗೆ ಕವಿತೆ ಮೌನವಾಗಿ ತನ್ನ ಬಂಡಾಯವನ್ದು ಧ್ವನಿಸುತ್ತದೆ.  
          ಅಡ್ಡಿಯಾಗಿಲ್ಲ.......
          ಎಡರು ತೊಡಕುಗಳು
.         ನಿನ್ನ ಪಥಕೆ.......
          ನನಗೆ ಹಾಗಲ್ಲ.  ಬಿದ್ದವೆ,
.         ಬೆಟ್ಟದಷ್ಟು ಕಡ್ಡಿಗಳು
.         ಅಡ್ಡಡ್ಡ ಬಂದರೂ 
.         ಸಾಗುವೆ ನೇರ ನಿನ್ನಂತೆ......
ಈ ಸಾಲುಗಳು ಪುರುಷ ಸಮಾಜದಲ್ಲಿ, ಪುರುಷನದು ಸುಗಮ ದಾರಿ, ಮಹಿಳೆಯದೋ ದುರ್ಗಮ. ಆದರೂ ಅವನ ಸರಿ ಸಮಾನವಾಗಿ ನಿಲ್ಲಬಲ್ಲ ನಡೆಯಬಲ್ಲ ಸಾಮರ್ಥ್ಯ ಆಧುನಿಕ  ಮಹಿಳೆಯರಲ್ಲಿದೆ ಎಂಬುದನ್ನು ಕವಿತೆ ಸ್ಥೈರ್ಯದಿಂದ ಹೇಳುತ್ತದೆ.  
         ಮನಸುಗಳನ್ನು ಸಾಯಿಸಿ
.        ದಾರಿ ಸವೆಸಿದರೇನು ಬಂತು?
. ಪ್ರತಿಷ್ಠೆಯ ಜೀವನ ಯಾರಿಗೆ ಬೇಕು?
.        ಎಂಬ ಸಾಲುಗಳು ಪುರುಷತ್ವಕ್ಕೆ ಪ್ರಶ್ನೆಯನ್ನು ಹಾಕುತ್ತ ಅಂತರ್ದೃಷ್ಟಿಯಿಲ್ಲದ ಜೀವನ ಅರ್ಥವಿಲ್ಲದ್ದು ಎಂಬ ಧೋರಣೆಯೊಂದಿಗೆ,
.            ಕಡಿದಷ್ಟು ಚಿಗುರುವುದು
.            ಮರದ ಹಾಗೆ ಚಿಗಿಯುವ
.            ಬದುಕು ನನಗೆ ಬೇಕು
ಎಂಬ ಆಶಾಭಾವದ ಜೀವನವನ್ನು ಮಹಿಳೆ ಬಯಸುತ್ತಾಳೆ. ಜೀವನೋತ್ಸಾಹವಿಲ್ಲದ ಬದುಕು ಬದುಕೆ ಅಲ್ಲ. ಪುರುಷರಿಗೆ ಜೀವನೋತ್ಸಾಹ ತುಂಬುವವಳೆ ಸ್ತ್ರೀ  ಎಂಬುದನ್ನು ಪುರುಷರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂಬ ಸಲಹೆಯನ್ನು ನೀಡುತ್ತ , " ನಾ ನಡೆವ ದಾರಿಯಲ್ಲಿ ಕಲ್ಲು ಮುಳ್ಳುಗಳು ಏನೆ ಇರಲಿ , ನನ್ನ ದೃಷ್ಟಿ ನನ್ನ ಗುರಿಯ ಕಡೆಗೆ" ಎನ್ನುವ ನಿಶ್ಚಲತೆ ನನ್ನಲ್ಲಿದೆ. ಎಂಬ ಮಹಿಳಾ ಸಮಾಜದ ದಿಟ್ಟ ನಿಲುವನ್ನು ಕವಿತೆ ಧ್ವನಿಸುತ್ತ ,
.   " ಅಳೆಯಲಾರದ ಹಾದಿ ಸವೆಸಿದರೇನು?  ಎಂದಿಗೂ ಎದುರಾಗೆವು ನಾವು" ಎಂಬ ಸಾಲುಗಳು ನಿನ್ನ ಸಮಾಜದಲ್ಲಿ ನಾನು ನಿನ್ನ ಜೊತೆ ಹೆಜ್ಜೆ ಹಾಕಿದರೂ ನೀನು ನನಗೆ ಮಾದರಿಯಲ್ಲ. ಏಕೆಂದರೆ ನಾನು ನನ್ನದೆ ದಾರಿ ಕಂಡುಕೊಂಡಿದ್ದೇನೆ.  ಅದು ನಿನ್ನ ಸೋಲಿಸಲೂ ಅಲ್ಲ, ತಿರಸ್ಕರಿಸಲೂ ಅಲ್ಲ ನಾನಿಲ್ಲದೆ ನಿನ್ನ ಬದುಕಿಗೆ ಅರ್ಥವಿಲ್ಲವೆಂಬ ಸತ್ಯವನ್ನು ನಿನಗೆ ಅರುಹಲು. ನಿನ್ನಂತೆ ನಾನೂ ಒಂದು ಸರಳರೇಖೆ ಎಂಬುದನ್ನು ತಿಳಿಸಲು. ಅದು ನಿನ್ನ ಹಿಂಬಾಲಿಸುತ್ತ ಅಲ್ಲ  ನಿನ್ನ ಜೊತೆಯಾಗಿ ಹೆಜ್ಜೆ ಹಾಕುತ್ತ. 
          ಒಟ್ಟಾರೆಯಾಗಿ "ಸರಳರೇಖೆ " ಕವಿತೆ ಪುರುಷ ವಿರೋಧಿಯಂತಿರದೆ , ಸ್ತ್ರೀ ಪರ ನಿಲುವಿನ ಉತ್ಕಟಾಸೆಯನ್ನು ಹೊಂದಿದ್ದು , ಜೀವನವೆಂದರೆ - "ಸ್ತ್ರೀ ಪುರುಷರ ನಡುವಿನ ಸಾಮರಸ್ಯ" ಎಂಬ ಹೊಸ ಪರಿಕಲ್ಪನೆಯೊಂದಿಗೆ ಕವಿತೆ ಓದುಗರನ್ನು ಆಲೊಚನೆಗೆ ಹಚ್ಚುತ್ತದೆ

ಪ್ರೊ. ಸುರೇಶ ಮುದ್ದಾರ, ಬರಹಗಾರರು, ಕಥೆಗಾರರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund

ನರಗುಂದ ಬಾಬಾಸಾಹೇಬರ ಇತಿಹಾಸ||History of Babasaheb Nargund ಕರ್ನಾಟಕದ ನರಗುಂದದ(ಗದಗ ಜಿಲ್ಲೆಯಲ್ಲಿರುವ) ದೊರೆಗಳು 1700ರಲ್ಲಿ ಮೊಘಲರ ದುರಾಕ್ರಮಣ ದ ವಿರುದ್ಧ ಹೋರಾಡುತ್ತ ನರಗುಂದ ಮತ್ತು ರಾಮದುರ್ಗಗಳನ್ನು ಯುದ್ಧದಲ್ಲಿ ಗೆದ್ದು ಸ್ವರಾಜ್ಯ ಸ್ಥಾಪಿಸಿದ್ದರು. ಮುಂದೆ ಅದೇ ವಂಶದ ದೊರೆಗಳು ಟಿಪ್ಪು ಸುಲ್ತಾನ್ ವಿರುದ್ಧವೂ ಯುದ್ದ ನಡೆಸಿ ಗೆಲುವು ಸಾಧಿಸಿ ತಮ್ಮ ಸಂಸ್ಥಾನದ ಸ್ವರಾಜ್ಯವನ್ನು ಉಳಿಸಿಕೊಂಡಿದ್ದರು. ದಾದಾಜಿ ರಾವ್ ಎಂಬ ನರಗುಂದದ ರಾಜನ ಮಗನಾದ ಭಾಸ್ಕರ್ ರಾವ್ ಭಾವೆ ತನ್ನ 28ನೇ ವಯಸ್ಸಿನಲ್ಲಿ ಅಂದರೆ 1842 ನೇ ಇಸವಿಯಲ್ಲಿ ನರಗುಂದದ ರಾಜನಾದ. ಬಾಬಾ ಸಾಹೇಬ್ ಎಂದು ಜನಪ್ರಿಯರಾಗಿದ್ದ ಈತ ಪರಾಕ್ರಮಿ, ಉದಾರಿ ಆಗಿದ್ದ. ವಿದೇಶಿಯರಿಂದಲೂ ಮೆಚ್ಚುಗೆ ಪಡೆದಿದ್ದ ವ್ಯಕ್ತಿತ್ವ ಆತನದು. ಜರ್ಮನಿಯಿಂದ ಬಂದಿದ್ದರು ಎಂಬ ವಿದ್ವಾಂಸ ಬಾಬಾ ಸಾಹೇಬನ ಕುರಿತು ‘ಅವರು ಸದ್ಗುಣ ಮತ್ತು ಕೀರ್ತಿ ವಂತರು. ಚಿಕ್ಕಮಕ್ಕಳಿಗೆ ಪಾಲಕನಾಗಿಯೂ ವಿದ್ಯಾವಂತರಿಗೆ ಆಶ್ರಯದಾತನೂ, ಬಡವರಿಗೆ ಉದಾರಿಯೂ ಆಗಿದ್ದವರು’ ಎಂದು ಅಭಿಪ್ರಾಯಪಟ್ಟಿದ್ದರು. ಬಾಬಾ ಸಾಹೇಬನ ಏಕೈಕ ಪುತ್ರ ಅಕಾಲಿಕ ಮರಣ ಹೊಂದಿದಾಗ ದತ್ತು ಪುತ್ರನನ್ನು ಪಡೆಯಲು ಬ್ರಿಟಿಷ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ. ಸತತ ಐದು ವರ್ಷಗಳ ಕಾಲ ಬ್ರಿಟಿಷರ ಜೊತೆ ಅನುಸಂಧಾನ ಮಾಡಿದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಗಲಿಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿದ್ದ ಬಾಬಾಸಾಹೇಬರ ಹಿ...