ವಿಷಯಕ್ಕೆ ಹೋಗಿ

ಕವಿ ಶ್ರೀಧರ ಬನವಾಸಿ ಅವರ ಕವಿತೆ "ಅಶೋಕವನದ ಸೀತೆ": ಪ್ರೊ. ಸುರೇಶ ಮುದ್ದಾರ ಅವರ ವಿಮರ್ಶೆ

ಅಶೋಕವನದ ಸೀತೆ
ಕಾನನದ ಝರಿಯೊಂದು ಸಂಗಾತಿಯ 
ಅರಸುತ್ತಾ ಹೊರಟಿತ್ತು
ಸುತ್ತಮುತ್ತಲಿನ ಕಾಡು ಬೆಟ್ಟಗಳ ಸಾಂಗತ್ಯವು
ನಡುವೆ ಒಲವಿನ ಗೆಳತಿಯ ಅರಸುತ್ತಾ
ಸಾಗುತಿಹಳು ಈ ಪುಣ್ಯಗಂಗೆಯು
ತನುಮನದೊಂದಿಗೆ ಬೆರೆತು ಅಂತರಂಗವ ಬಯಸಿ
ಸಖಿಯ ಹುಡುಕುವ ಮೋಹದ ಪರಿಯು
ಮೌನ ಪಯಣದಲಿ ಪ್ರೀತಿ-ವಿರಹದ ನೋವಿರಲು
ಗಂಗೆ ಪಾವನಳಾದರೂ ಅವಳ ಬಯಕೆಯ ಹುಡುಕಾಟ
ಬೇರೆಯೇನೋ ಆಗಿರಲು...
ಸುತ್ತ ಅಸುರ ಲೋಕದ ಸಂತಾನವು
ಲಕ್ಷ ಕಣ್ಣುಗಳ ಕಣ್ಗಾವಲು ಸೀತೆಯ ಸುತ್ತುವರೆದಿರಲು
ಬಣ್ಣನೆಗೆ ಸಿಗದ ಆಶೋಕವನವು ಸಾಕ್ಷಾತ್ ದೇವಲೋಕವು
ರಾವಣನ ಸಾಮ್ರಾಜ್ಯದಲಿ ಈ ಸ್ವಪ್ನ ಸೌಂದರ್ಯವೇ 
ಸಾಕ್ಷಿಯಾಗಿರಲು
ಅಪಹರಿಸಿ ತಂದ ಜಗನ್ಮಾತೆಯು ಇಲ್ಲಿ ನೆಲೆಸಿರಲು
ರಘುವರನಿಲ್ಲದ ಕ್ಷಣಗಳನು ಎದುರಿಸುತಿಹಳು
ರಾಮನಾಮದಲಿ ಮುಳುಗುತ್ತಾ
ಸುಡುವ ಏಕಾಂತದಲ್ಲಿ ತನ್ನವರಿಗಾಗಿ ಕಾಯುತ್ತಾ
ಕಾನನದ ಝರಿಗೆ ನೋವಿಲ್ಲ; ನಲಿವಿಲ್ಲ
ಸುರಿವ ಮಳೆಯ ಜಾಡು
ಹರಿವ ಓಘಕ್ಕೆ ಸೇರುತ್ತಾ
ದೂರದಲ್ಲಿರುವ ಅಶೋಕವನವು
ಕಂಡ ಆಶಾಗೋಪುರದ ಸದಾಶೆಯು
ಹರಿವ ಗಂಗೆಯ ನೋವಿಗೆ 
ಕೊನೆಗೂ ಸಿಕ್ಕಳು ಸೀತೆ ಎಂಬ ಶರಧಿಯು
ಅಶೋಕವನದ ಏಕಾಂತವು ರಾಮನಿಲ್ಲದ ಸ್ವರ್ಗವು
ಬಂಧನದ ಸೀತೆಗೆ ಅವಳ ಪಾತಿವ್ರತ್ಯವೇ ಶ್ರೀರಕ್ಷೆಯು
ಹನುಮನ ಕಾಣುವ ಸರಧಿ  
ಅಸುರರ ಸಂಹಾರವಾಗುವ ಮುನ್ನ
ಸೀತೆಯ ಸಾಂಗತ್ಯಕ್ಕೆ ಒಲಿದ ಭಾಗ್ಯವು
ದೂರ ತೀರದಿಂದ ಅರಸಿ ಬಂದ ಝರಿಗೆ
ಸಿಕ್ಕವಳು ಜಾನಕಿಯು
ಗಂಗೆ ಹರಿದಳು ಅಶೋಕವನಕೆ
ಸುರಿವ ಹಾಲಿನ ಅಮೃತ ಕಳಶದಂತೆ
ಇಬ್ಬರು ಸಖಿಯರು ಸೇರಿದ್ದಾರೆ
ಸೀತೆಯ ಕಣ್ಣೀರಿನಲಿ ಗಂಗೆಯು 
ಇನ್ನಷ್ಟು ಪಾವನವಾಗಿರಲು

.     ಶ್ರೀಧರ ಬನವಾಸಿ
.     ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ                    ಪುರಸ್ಕೃತ ಸಾಹಿತಿ.
                          *****************

"ಅಶೋಕವನದ ಸೀತೆ" ಗೆ ನನ್ನ ಮಾತುಗಳು........
        
          ರಾಮಾಯಣ ಮಹಾಕಾವ್ಯದಲ್ಲಿ ಸೀತಾದೇವಿಯ ಪಾತ್ರ ಅತ್ಯಂತ ಶ್ರೇಷ್ಠವಾದುದು. ಅದು ವಾಲ್ಮೀಖಿಯಿಂದ, ಹಳೆಗನ್ನಡ, ನಡುಗನ್ನಡ ಕಾಲಘಟ್ಟ ಮತ್ತು ಅಲ್ಲಿಂದ ಇಂದಿನವರೆಗಿನ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸೀತಾಮಾತೆ ಭಾರತೀಯ ಮಹಿಳೆಯರ ಪಾತಿವ್ರತ್ಯದ ಮೇರು ಪ್ರತಿನಿಧಿಯಾಗಿ ನಿಲ್ಲುತ್ತಾಳೆ. ಆ ಹಿನ್ನಲೆಯಲ್ಲಿ ಸ್ನೇಹಿತರಾದ ಶ್ರೀಧರ ಬನವಾಸಿಯವರ ಹೊಸ ಕವಿತೆ "ಅಶೋಕವನದ ಸೀತೆ " ಐತಿಹಾಸಿಕ,ಪೌರಾಣಿಕ ಚೌಕಟ್ಟಿನಲ್ಲಿ ವಿಶಿಷ್ಟ ಕಲ್ಪನೆಗಳಿಂದೊಡಗೂಡಿದ ಭಾವ ಸಂದಿಗ್ಧತೆಯ ರಸಾತ್ಮಕ ಕವಿತೆಯಾಗಿದೆ. 

"ಕಾನನದ ಝರಿಯೊಂದು ಸಂಗಾತಿಯ 
ಅರಸುತ್ತ ಹೊರಟಿತು
ಸುತ್ತ ಮುತ್ತಲಿನ ಕಾಡು ಬೆಟ್ಟಗಳ
ಸಾಂಗತ್ಯವು 
ನಡುವೆ ಒಲವಿನ ಗೆಳತಿಯ ಅರಸುತ್ತ"

ಎಂಬ ಪಂಕ್ತಿಗಳಿಂತ ಆರಂಭವಾಗುವ ಕವಿತೆಯು ಸೀತೆಯಿಲ್ಲದೆ ನಿಸ್ತೇಜಗೊಂಡ ರಘುಕುಲೋದ್ಭವನ ವಿರಹ ವೇದನೆಗಿಂತಲೂ ಕಾನನದ ಸುರಗಂಗೆ ಝರಿಯ ರೂಪದಿ ಧುಮುಕುತ್ತ ಕಾಡು ಬೆಟ್ಟಗಳ ಸಾಂಗತ್ಯದ ಪರಿವೆಯಿಲ್ಲದೆ ಒಲವ ಗೆಳತಿಯ(ಸೀತೆ) ಅರಸುತ್ತ ಮೌನದಲಿ ವಿರಹದುರಿಯ ತುಂಬಿಕೊಂಡು ಕೊರಗುತಿಹಳು. ಇಲ್ಲಿ ಸೀತೆಯ ವಿರಹದಿಂದ ಶ್ರೀರಾಮನಿಗೆ ನೋವಾಗುವುದು ಸಹಜ. ಆದರೆ ಇಡಿ ಪ್ರಕೃತಿ,ಕಾಡು ಬೆಟ್ಟ,ನದಿ ಝರಿ ಮುಂತಾದವುಗಳು ಅವನಿಸುತೆಯ ಒಲವ ವಿರಹದಿಂದ ಸಂಕಟಪಡುತ್ತ ಅವಳ ಹುಡುಕಾಟದಲ್ಲಿ ಮೌನಿಯಾಗಿದ್ದವು. 
            ಪ್ರಸ್ತುತ ಕವಿತೆಯು ಲಕ್ಷ್ಮೀಷ ಕವಿಯ ಜೈಮಿನಿ ಭಾರತದಲ್ಲಿನ "ಸೀತಾ ಪರಿತ್ಯಾಗ" ದ ಕತೆಯನ್ನು ನೆನಪಿಗೆ ತರುತ್ತದೆ. 

ಏಕೆ ನಿಂದಿಹೆ ಪೋಗು ಸೌಮಿತ್ರಿ ಕೋಪಿಸನೆ
ಕಾಕುತ್ಸ್ಥನಿಲ್ಲಿ ತಳುಹಿದೊಡೆ ನೆರವುಂಟು ತನಗೀ
ಕಾಡೊಳುಂಗ್ರಜಂತುಗಳುಂಟು

   ಎನ್ನುವ ಸೀತೆಯ ಮಾತುಗಳು ಎಂಥವರನ್ನು ಒಂದು ಕ್ಷಣ ದಿಗ್ಭ್ರಾಂತರನ್ನಾಗಿಸುತ್ತದೆ. ಹಾಗೆಯೇ ಸೀತೆಯನ್ನು ಲಕ್ಷ್ಮಣ ಕಾಡಿನಲ್ಲಿ ಬಿಟ್ಟುಬರುವಾಗ ಕಾಡಿನಲ್ಲಿರುವ ಪಶುಪಕ್ಷಿಯಾದಿಯಾಗಿ ತರುಲತೆ ವೃಕ್ಷಗಳಿಗೆ , ನದಿ ಹಳ್ಳಗಳಿಗೆ, ಕಲ್ಲುಗಳಿಗೆ ಸೀತಾಮಾತೆಯನ್ನು ಇನ್ನು ಮುಂದೆ ನೀವೆ ಸಲುಹಬೆಕೆಂದು ಲಕ್ಷ್ಮಣ ಭಿನ್ನವಿಸಿಕೊಂಡಾಗ....   ಆ ಕಾಡಿನಲ್ಲಿನ ಸೀತೆಮಾತೆಯ ಅಭಿಮಾನಿಗಳು ,

" ಅರಸ ಕೇಳಿಲಿರ್ದ ಪಕ್ಷಿ ಮೃಗ ಜಂತುಗಳ್ಧರಣಿಸುತೆಯ ಬಳಸಿ
ನಿಂದು ಮೈಯುಡಿಗಿ ಜೋಲ್ದಿರದೆ
ಕಂಬನಿಗರೆದು ನಿಜವೈರಮಂ ಮರೆದು
ಪುಲ್ಮೆವುಗಳನೆ ತೊರೆದು ಕೊರಗುತಿರ್ದವು
ಕೂಡೆ ವೃಕ್ಷಲತೆಗಳ್ಬಾಡಿ ಸೋರಗುತಿರ್ದವು
ಶೋಕಭಾರದಿಂ ಕಲ್ಲುಗಳುಂ
ಕರಗುತಿರ್ತವು ಜಗದೋಳುತ್ತಮರ
ಹಾನಿಯ ಕಂಡು ಸೈರಿಸುವರುಂಟೆ"
         ಹೀಗೆ ಸೀತೆಯ ದುಃಖ ತಮ್ಮದೂ ಎಂದು ಇಡಿ ವಿಪನವೆ ಶೋಕದಲ್ಲಿ ಮುಳುಗಿತ್ತು. ಅದೆ ತೆರನಾದ ಸನ್ನಿವೇಶವನ್ನು ಪ್ರಸ್ತುತ ಕವಿತೆ ಕಟ್ಟಿಕೊಟ್ಟಿದೆ. ರಾವಣನಿಂದ ಅಪಹೃತಳಾದ ಸೀತಾಮಾತೆಯ ಅಗಲಿಕೆ ರಾಮನಿಗಷ್ಟೆ ಅಲ್ಲ ಇಡಿ ಇಕ್ಷ್ವಾಕು ಸಾಮ್ರಾಜ್ಯದ ಕಾನನದ ಝರಿ ತೊರೆಗಳು ಗಂಗೆಯಾಗಿ ಮರುಗುತ್ತ , ಕೊರಗುತ್ತ ತನ್ನೊಲವ ಗೆಳತಿಯ ಅರಸುತ್ತ  ಹರಿಯುತಿಹಳು ಗಂಗೆ ಶೋಕಭಾರದಿ. 
        ಇತ್ತ ಸೀತಾಮಾತೆಯ ಪಾದಸ್ಪರ್ಷದಿಂದ ಅಸುರಲೋಕದ ಅಶೊಕವನ ದೇವಲೋಕದಂತೆ ಕಂಗೋಳಿಸುತ್ತಿದೆ. ಆದರೆ ಲಕ್ಷ ಚಕ್ಷುಗಳ ಕಾವಲಿನಲ್ಲಿ ಧರಣಿಸುತೆ ರಾಘವೇಶ್ವರನ ಸುಂದರ ಸೊಪ್ನದಲ್ಲಿ ಮುಳುಗಿರಲು ಅವಳ ಏಕಾಂತವೆ ಒಡಲವಿರಹದುರಿಯಾಗಿ ತನ್ನವರಿಗಾಗಿ ಕಾಯುತ್ತ ವೇದನೆ ಪಡುತ್ತಿತ್ತು. 
         ಸೀತಾಮಾತೆಯ ಒಡಲವಿರಹದುರಿಗೆ ತಂಪೆರೆಯಲೋ ಎಂಬಂತೆ ಕಾರ್ಮುಗಿಲೆ ತನ್ನೊಡಲ ಬಸಿದು ಮಳೆಯಾಗಿ ಸುರಿಯುತ್ತ ಕಾನನದ ಝರಿಯಾಗಿ ರಭಸದಿಂದ್ಹರಿಯುತ್ತ ಅಸುರಲೋಕದ ಅಶೋಕವನ ಕಂಡೊಡನೆ ಗಂಗೆಯ ಒಡಲಿನ ವಿರಹ ವೇದನೆ, ' ರಭಸದಿಂದ್ಸುರಿವ ವರ್ಷಧಾರೆಗೆ ಕಾಡ್ಗಿಚ್ಚು ತಣ್ಣಗಾದಂತೆ'  ಗಂಗೆಯ ದುಃಖ ಮಾಯವಾಗಿ ಸೀತೆ ಎಂಬ ಶರಧಿಯಲ್ಲಿ ಲೀನವಾಯಿತು. 
         ಮಿಥಿಲಾಪುರದ ರಾಜಕುಮಾರಿ ಅಯೋಧ್ಯಾಪುರದ ಮಹಾರಾಣಿ ರಾಮನಿಲ್ಲದ ವಿರಹದೆಕಾಂತವನ್ನು ಅಶೋಕವನದಲ್ಲಿ ಅನುಭವಿಸುತಿಹಳು.  ಅವಳಿಗೆ ಪಾತಿವ್ರತ್ಯವೆ ಶ್ರೀರಕ್ಷೆಯಾಗಿ ಶ್ರೀರಾಮ ನಾಮದಲಿ ಒಂದಾಗಿಹಳು. ಹನುಮನನ್ನು ಕಾಣುತ್ತ ಸಂತಸಗೊಳ್ಳುವ ಸೀತೆಯ ಮೊಗದಲ್ಲಿ ನಗು ಮೂಡಿದರೂ ಅಂತರಂಗದಲ್ಲಿ ಹೇಳಲಾರದ ನೋವು. ಆ ನೋವು ನಲಿವುಗಳೆಂಬ ಬದುಕಿನ ದೂರ ತೀರದಿಂದ ಅರಸಿ ಬಂದವಳಿಗೆ ಜಾನಕಿ ಸಿಕ್ಕಳು. ಅಶೋಕವನಕೆ ಗಂಗೆ  ನಲಿಯುತ್ತ ಹರಿದಳು ಅಮೃತವಾರಿಧಿಯಂತೆ. ನೋವು ನಲಿವುಗಳ ಸಾಮರಸ್ಯದ ಕೆಳದಿಯರು ಒಂದಾದ ಸಂತಸದಿ ಸೀತೆಯ ಕಣ್ಣಲ್ಲಿ ಗಂಗೆ ಧಾರೆಧಾರೆಯಾಗಿ ಹರಿದು  ಮಡುಗಟ್ಟಿದ ದುಃಖ ಕರಗಿಹೋಗಿ  ಎಲ್ಲರ ಪವಿತ್ರಗೊಳಿಸುವ ಗಂಗೆಯೆ ಪಾವನಗೊಳ್ಳುವ ದೃಷ್ಟಾಂತವನ್ನು  ಕವಿತೆಯಲ್ಲಿ ತಂದಿರುವುದು ಕವಿತೆಯ ವೈಶಿಷ್ಟ್ಯವಾಗಿದೆ. 
      ಒಟ್ಟಾರೆಯಾಗಿ "ಅಶೋಕವನ ಸೀತೆ" ಇತಿಹಾಸ , ಪುರಾಣ ಮತ್ತು ಇಂದಿನ ಆಧುನಿಕ  ಸಂದರ್ಭದಲ್ಲೂ ತನ್ನ ಪ್ರಸ್ತುತತೆಯನ್ದು ಪಡೆದುಕೊಳ್ಳುವುದರ ಜೊತೆಗೆ ಭಾರತೀಯ ನಾರಿ ಎಂಥಹ ಸಂದಿಗ್ಧ ಪರಿಸ್ಥಿತಿಯಲ್ಲೂ ತನ್ನ ಪಾತಿವ್ರತ್ಯಕ್ಕೆ ಘನವಾದ ಮಹತ್ವವನ್ನು ಕೊಡುತ್ತಾಳೆ ಮತ್ತು ಅಂತಹ ಪಾತಿವ್ರತ್ಯದ ಸ್ತ್ರೀಗೆ ಸಂಕಷ್ಟ ಬಂದೊದಗಿದಾಗ ಗಂಗೆಯಂತಹ ಮಾತೃಹೃದಯಿ ಜೊತೆಯಾಗುವುದು ಮತ್ತು ಇಡಿ ಭರತ ಭೂಮಿಯೆ ಅಂಥವರ ದುಃಖದಲ್ಲಿ ಭಾಗಿಯಾಗಿ ಅವರ ದುಃಖವನ್ನು ಪರಿಹರಿಸುವಲ್ಲಿನ ಶಮರ್ಪಣಾ ಭಾವ ಕವಿತೆಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತದೆ. 
        ಕವಿಮಿತ್ರ ಶ್ರೀಧರ ಅವರು ತುಂಬಾ ಸಹಜವಾದ ಪ್ರಾಕಲ್ಪನೆಗಳೊಂದಿಗೆ ಇತಿಹಾಸ ಮತ್ತು ಪುರಾಣಗಳೆರಡನ್ನು ಸಮೀಕರಿಸಿ ಹದವಾದ ಭಾಷೆಯಲ್ಲಿ ಕವಿತೆಗೆ ಸುಂದರ ಚೌಕಟ್ಟನ್ನು ನಿರ್ಮಿಸಿ ತಮ್ಮ ಕವಿತ್ವದ ಪ್ರತಿಭಾ ಶಕ್ತಿಯನ್ನು ಪ್ರಸ್ತುತ ಕವಿತೆಯ ಮೂಲಕ ತೋರಿಸಿದ್ದಾರೆ. 
                 
- ಸುರೇಶ ಮುದ್ದಾರ 
     

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನೊಳಂಬರ ಇತಿಹಾಸ

ನೊಳಂಬ ಕರ್ನಾಟಕದ ಈಗಿನ ಚಿತ್ರದುರ್ಗ ಜಿಲ್ಲೆ ಮತ್ತು ಅದರ ಸುತ್ತ ಮುತ್ತಣ ಪ್ರದೇಶವನ್ನೊಳಗೊಂಡಿದ್ದ ನೊಳಂಬಳಿಗೆ ಸಾಸಿರ ಎಂಬ ಪ್ರಾಂತ್ಯದ ಅಧಿಪತಿಗಳಾಗಿ 8ನೆಯ ಶತಮಾನದಲ್ಲಿ ಆಳ್ವಿಕೆಯನ್ನಾರಂಭಿಸಿ, ಮುಂದಿನ ಎರಡು ಶತಮಾನಗಳಲ್ಲಿ ಪ್ರಾಬಲ್ಯಗಳಿಸಿ, ಈಗಿನ ಚಿತ್ರದುರ್ಗ, ತುಮಕೂರು, ಕೋಲಾರ, ಬೆಂಗಳೂರು, ಜಿಲ್ಲೆಗಳನ್ನೂ ನೆರೆಯ ಅನಂತಪುರ, ಚಿತ್ತೂರು, ಧರ್ಮಪುರಿ ಜಿಲ್ಲೆಗಳನ್ನೂ ಒಳಗೊಂಡಿದ್ದ ನೊಳಂಬವಾಡಿ 32000 ಪ್ರಾಂತ್ಯದ ಪ್ರಭುಗಳಾಗಿ 11ನೆಯ ಶತಮಾನದ ಮಧ್ಯದವರೆಗೆ ಆಳ್ವಿಕೆ ನಡೆಸಿದ ಸಾಮಂತ ರಾಜರ ಮನೆತನ. ತಲಕಾಡಿನ ಗಂಗರೂ ರಾಷ್ಟ್ರಕೂಟರೂ ಕಲ್ಯಾಣ ಚಾಳುಕ್ಯರೂನೊಳಂಬರಿಗೆ ಸ್ವಲ್ಪಕಾಲ ಅಧೀನರಾಗಿದ್ದರು. ಕದಂಬ, ಗಂಗ ಮತ್ತು ಕಲ್ಯಾಣ ಚಾಳುಕ್ಯರೊಂದಿಗೆ ಇವರು ವಿವಾಹ ಸಂಬಂಧ ಬೆಳೆಸಿದ್ದರು. ಬಾಣರು, ವೈದುಂಬರು, ಚೋಳರು ಮುಂತಾದವರಿಗೂ ಇವರಿಗೂ ರಾಜಕೀಯ ಸಂಬಂಧವಿತ್ತು. ನದಿಯ ಲಾಂಛನ ಹೊಂದಿದ್ದ ಇವರ ರಾಜಧಾನಿ ಪೆಂಜೀರು ಅಥವಾ ಹೆಂಜೇರು. ಆಂಧ್ರ ಪದೇಶದ ಅನಂತಪುರ ಜಿಲ್ಲೆಯ ಹೇಮಾವತಿಯೇ ಇದೆಂದು ಗುರುತಿಸಲಾಗಿದೆ. ನೊಳಂಬ ಎಂಬ ಹೆಸರು ಹೇಗೆ ಬಂತೆಂಬುದು ಸ್ಪಷ್ಟವಾಗಿಲ್ಲ. ಈಶ್ವರ ವಂಶಜನಾದ ಕಂಚೀಪತಿ ಎಂದು ಶಾಸನವೊಂದರಲ್ಲಿ ವರ್ಣಿತನಾಗಿರುವ ತ್ರಿಣಯನ ಪಲ್ಲವ ಎಂಬುವನು ನೊಳಂಬರ ಮೂಲಪುರುಷ. ಇವನ ವಂಶದಲಿ ಹುಟ್ಟಿದವನು ಮಂಗಳ ನೊಳಂಬಾಧಿ ರಾಜ (ಸು. 730-ಸು. 775). ಹೇಮಾವತಿ ಶಾಸನದ ಪ್ರಕಾರ ಇವನು ಕಿರಾತ ನೃಪತಿಯನ್ನು ಜಯಿಸಿದ; ಕರ್ಣಾಟರಿಂ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...