ವಿಷಯಕ್ಕೆ ಹೋಗಿ

ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರ ಕವಿತೆ "ಅಲ್ಲಮನಾಗುವುದಾದರೆ..." ಮತ್ತು ವಿಮರ್ಶೆ ಸುರೇಶ ಮುದ್ದಾರ


ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ.
ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ .

ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ ಜೋಗುಳ ಲಾಲಿ. ನಕ್ಷತ್ರ ಮಿಂಚು ತಂಗಾಳಿಗಳ ಹಸುಗು ಸಂತೆ. ಚಂದ್ರಮುಖಿಯ ರೋಧನ, ಬೆಳದಿಂಗಳ ಕಳೆಗುಂದಿದ ಕಾಂತಿ.
ಕರಗುವ ಹಿಮ, ದರ್ಶನದ ಮೇರು, ಮದ್ದಳೆಯ ನಾದವೇ ಗಟ್ಟಿಮೇಳ...

ತುಟಿಯ ಮೌನಕ್ಕೆ ಬಾಗಿದ ತಲೆ, ನನ್ನ ಹೃದಯಕ್ಕಿಗ ಸಾವಿರದ ಮಾತು.
ಕಣ್ಣ ಕಾಡಿಗೆಯ ಕಾರ್ಮೋಡ, ಸಿವುಡುಗಟ್ಟಿದ ಸಿಟ್ಟು .ಕಪ್ಪು ಕಳೆದುಕೊಂಡ ಮುಗಿಲು, ತಪಗುಟ್ಟಿ ಜಿನುಗುವ ಕಣ್ಣಾಲಿ. ಮಾಯೆಯ ವಿರಹಕ್ಕೀಗ ಮತ್ತೆ ಮರೆಯದ ಹರೆಯ..

ಬೆನ್ನಟ್ಟಿದ ಅದೇ ಕಂಗಳು, ತುಟಿಯಂಚಿನ ಕೋಲ್ಮಿಂಚು.ಮುಂಗುರುಳ ದುಂಬಿ' ಮಾದಕ ನಗೆ' ನೀ ಅರಸಿಬಂದ ಅನುರಾಗ.ಮಾತುಮೌನ ನಿಟ್ಟುಸಿರ ಕಥೆಯಾಗಿಸುವುದಾದರೆ, ಭೋರ್ಗರೆದು ಸುರಿದು ಬಿಡುವೆ ಯಾವ ಒಡಂಬಡಿಕೆಗಳಿಲ್ಲ...

ಸ್ವರ ಲಾವಣಿ ನೂರು ಪದ ಸರಣಿ, ಪೊಣಿಸಿದ ಮುತ್ತುಗಳೆಲ್ಲಾ ಎದೆಯ ಬಾರಕ್ಕೆ ಕಳೆಗುಂದದಿರಲಿ..ಒಲವ ಸರಕು ಬಿಕರಿಯಾಗಲು ಬದುಕು ವ್ಯಾಪಾರವಲ್ಲ.ನಿನ್ನ ಜಂಗಮನಾದಕ್ಕೆ  ತಾಳ ತಪ್ಪಿದ ಕಾಲ್ಗೆಜ್ಜೆ ,ಮದ್ದಲೆಯ ಸುನಾದಕ್ಕೆ ಮಾತ್ರ ಸಾವಿಲ್ಲ...

ಕೈ ಬೆರಳುಗಳ ಬೆರಗು, ಮೋಹನ ಮುರಳಿ ಎದೆಯ ಮೀಟಿದ ತಂತಿ.ಭಾವ ಬಸಿರು ಬಗೆದು ಬಂದ ಒಲವಗಾನ ಘನಪ್ರೇಮದ ಸಂತಿ.
ನೀನೇ ಬರೆಯಬೇಕಿಗ, ಹೃದಯ ಶಾಹಿಯಿಂದ  ಕಥೆಯೋ  ಕವನವೋ.ದಿಕ್ಕು ತಪ್ಪಿದ ವರ್ಣಮಾಲೆ ಖಾಲಿಯಾದ ಪದ ಭಂಡಾರ ...

ಅಂಗಾಂಗಗಳ ವರ್ಣರಂಜಿತ ಹೊಗಳಿಕೆ ಬೇಕಿಲ್ಲ.ಯಾವ ಪ್ರಮೇಯಗಳಿಗೂ ಹೋಲಿಸಬೇಡ.
ಅರಸಿಬಂದ ಅರಸನ ಕನಸ ಕಂಗಳ ಚಲುವೆ . ನೀ ಕಟ್ಟುವ ಪದಬಂಧದ ಶಬ್ದ ಮಾಲೆಗೆ ಕೇವಲ ಪ್ರತಿಮೆ ಮಾತ್ರ..

ಸೋಬಾನೆಗೆ ಸೋನೆ ಮಳೆಯ ಉಯ್ಯಾಲೆ .ಅಮಾವಾಸ್ಯೆಯ ಚಂದ್ರನೀಗ ಹುಣ್ಣುಮೆಯ ಮದುವಣಿಗ. ನಾ ಬೆಳದಿಂಗಳ ಬಾಲೆ, ನಿತ್ಯವೂ ಮಲ್ಲಿಗೆ ದಂಡೆಯ ಮುಡಿಗೇರಿಸಿ ಕೊಂಡ ಮದುವಣಗಿತ್ತಿ .ಸುರಿವ ಮಳೆ ಕೊರೆವ ಚಳಿ ತುಟಿಯ ನಗು ನಿನ್ನ ಅಲ್ಲಮನಾಗಲೂ ಬಿಡೆನೂ ನಾ...

✍️ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ, ರಾಚವಿ ಬೆಳಗಾವಿ
                    *******************

"ಅಲ್ಲಮನಾಗುವುದಾದರೆ........"ಕವಿತೆಯ ವಿಮರ್ಶೆ ಪ್ರೊ. ಸುರೇಶ ಮುದ್ದಾರ

         ಅಲೌಕಿಕತೆಯ ಮುಂದೆ ಲೌಕಿಕತೆಯ ತುಡಿತ, ಮಿಡಿತ ಮತ್ತು ತಲ್ಲಣಗಳು ಹೇಗೆ ಸೋತು ಗೆಲ್ಲುತ್ತವೆ ಎಂಬುದನ್ನು ಪ್ರಸ್ತುತ  "ಅಲ್ಲಮನಾಗುವುದಾದರೆ" ಕವಿತೆ ಅತ್ಯಂತ ಸುಂದರವಾದ ಪ್ರತಿಮೆಗಳ ಮೂಲಕ ಓದುಗರನ್ನು ಬೆರಗುಗೊಳಿಸುತ್ತದೆ. 
        ಸಾತ್ವಿಕತೆ ಎಂಬುದು ದಿವ್ಯವಾದ ಮೇರು ಪರ್ವತ ಹಾಗೆಯೇ ತಾಮಸ ಎಂಬುದು ಭವ್ಯವಾದ ಆಳ ಕಣಿವೆ. ಇವೆರಡೂ ಒಂದಾಗುವುದು ಅಸಾಧ್ಯ.  ಆದರೂ ಭವ್ಯತೆಯು ದಿವ್ಯತೆಯಲ್ಲಿ ಲೀನವಾದಾಗ ಲೌಕಿಕತೆಯನ್ನು ಮೀರಿದ ಜೀವನ ದರ್ಶನವಾಗುತ್ತದೆ.
        ಅಲ್ಲಮ ಸಾತ್ವಿಕತೆಯ ಪ್ರತಿರೂಪ,  ಮಾಯೆ ತಾಮಸ ಪ್ರತಿರೂಪ. ಮಾಯೆ ತನ್ನ ಮಾಯಾ ಪ್ರೇಮದ ಮೂಲಕ ಅಲ್ಲಮನನ್ನು ಪ್ರಚೋಧಿಸುವ,ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಕವಿತೆ ಸಾಲಿನಂತೆ, ' ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ' ಎನ್ನುವ ಹಾಗೆ ಅಂತರಂಗದ ಕತ್ತಲೆಗೆ ಬೆಳಕಾಗಿರುವ ಅಲ್ಲಮ ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹವನ್ನೆ  ತುಂಬುತ್ತಾನೆ. ಅವನ ಮದ್ದಳೆಯ ಧ್ವನಿ ಮಾಯೆಗೆ ಕಾರ್ಮೋಡಿನ ಘರ್ಜನೆಯಂತೆ ಕೇಳಿ ತನುವಿನಲ್ಲಿ ಪುಳಕಗೊಂಡು ತನ್ನ ವಿರಹಕ್ಕೆ ಮತ್ತೆ ಹರೆಯ ತುಂಬಿಕೊಂಡು ಸೋಗೆಯಂತೆ ನಲಿಯುತ್ತಾಳೆ. ಆದರೆ ಕರಗುವ ಹಿಮ ಅಲ್ಲಮನಲ್ಲ. ಅವನು ದರ್ಶನದ ಮೇರು ಪರ್ವತ.  
              ಆದರೂ ಸೋತು ಶರಣಾಗುವವಳಲ್ಲ ಮಾಯೆ. ಸಾತ್ವಿಕ ಪ್ರೀತಿಯ ಮೇಲೂ ತಾಮಸ ಪ್ರೇಮದ ಜ್ವಾಲೆಯ ಕೆಂಪು ನೆರಳು ಬೀಳುವಂತೆ, ಮಾಯೆಯ ಕೈ ಬೆರಳ ಬೆರಗು,ಮೋಹನ ಮುರಳಿ ಗಾನ, ಎದೆ ಮೀಟುವ ತಂತಿ ಒಲವ ಸರಕು ಬಿಕರಿಯಾಗಲು ಬಿಡುವುದಿಲ್ಲ.  ' ನೀ ಎಷ್ಟೆ ದೂರ ಸರಿದರೂ ನಾನು, ಅರಸಿ ಬಂದ ಅರಸನ ಕನಸು ಕಂಗಳ ಚೆಲುವೆ. ನಾನು ಸುಗಂಧ ರಹಿತ ಪುಷ್ಪವಲ್ಲ. ದುಂಬಿ ಅರಸುವ ಹೂವು ನಾನು, ನಾನು ಬೆಳದಿಂಗಳ ಬಾಲೆ, ನಿತ್ಯ ಮಲ್ಲಿಗೆ ದಂಡೆ ಮುಡಿದುಕೊಳ್ಳುವ ಮದುವಣಗಿತ್ತಿ, ಮಳೆಯಂತೆ ಸುರಿಯುವ ರಸಭಾವಗಳು, ರೋಮಾಂಚನಗೊಳಿಸುವ ಮಧುರ ಚಳಿ. ನಾನು ನಿನ್ನ ಅಲ್ಲಮನಾಗಲು ಬಿಡಲಾರೆ. 
          ಪ್ರಸ್ತುತ ಕವಿತೆ ವರ್ತಮಾನದ ಸ್ತ್ರೀ ಸಂವೇದನೆಯ ಮೇಲೆ ಬೆಳಕು ಚಲ್ಲುತ್ತದೆ. ಅಲ್ಲಮನಾಗುವುದಾದರೆ, ಕಳೆಗುಂದಿದ ಬೆಳದಿಂಗಳಂತಾಗದೆ ಮಧುರ ಪ್ರೇಮದ ಬೆಳದಿಂಗಳಾಗು. ಮಾಯೆಯ(ಸ್ತ್ರೀ) ಒಲವಿಗೂ ಸಾತ್ವಿಕತೆ ಇದೆ. ಮಾಯೆಯ ಮಧುರ ಒಲವಿನಲ್ಲಿಯೂ ಜೀವನ ದರ್ಶನವಿದೆ. ಆದ್ದರಿಂದ ಅಲ್ಲಮನಾಗುವುದಾದರೆ , ಮಧುರ ಪ್ರೇಮದ ಅಲ್ಲಮನಾಗು ಘನ ಪ್ರೇಮದ ಮಾಯೆಗೆ ಮರಿಚಿಕೆಯಾಗಲು ನಾನು ಬಿಡುವುದಿಲ್ಲ. 
            ಹೆಣ್ಣು ಮಾಯೆಯಂಬ ಭ್ರಮೆಯಲ್ಲಿ ನೋಡದೆ , ಅದರಾಚೆಗೂ ದೃಷ್ಟಿ ಬೀರುವ ಅಲ್ಲಮ ಬೇಕು. ಎಂಬ ವರ್ತಮಾನದ ಸ್ತ್ರೀ ಭಾವ ಇಲ್ಲಿದೆ. ಕವಿತೆ ಅಲ್ಲಮನ ಮೇರು ವ್ಯಕ್ತಿತ್ವವನ್ನು ಅತ್ಯಂತ ಘನವಾಗಿ ಚಿತ್ರಿಸಿದಂತೆ,  ಮಾಯೆಯ ಮಧುರ ಪ್ರೇಮದ ಅಗಾಧತೆಯನ್ನು ಅಷ್ಟೆ ಮಾಧುರ್ಯವಾಗಿ ಅನೇಕ ಸುಂದರವಾದ ವಿಶಿಷ್ಟ  ಪ್ರತಿಮೆಗಳೊಂದಿಗೆ ಚಿತ್ರಿಸಿದ್ದಾರೆ. ಈ ಕವಿತೆಯನ್ನು ಓದುವಾಗ ಭಾಷೆ ಹಿಂದೆ ಸರಿದು ಭಾವ ಮುಂದೆ ಬರುವ ಅನುಭವವಾಗುತ್ತದೆ.   ಒಟ್ಟಾರೆಯಾಗಿ ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ ಅವರ "ಅಲ್ಲಮನಾಗುವುದಾದರೆ" ಕವಿತೆ ಪ್ರಸ್ತುತ ಸ್ತ್ರೀಪರ ನಿಲುವಿನ ಒಳನೋಟಗಳ  ಭಾವಪೂರ್ಣ ಕವಿತೆಯಾಗಿದೆ. 

 - ಸುರೇಶ ಮುದ್ದಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ

ಭಾರತದ ಪ್ರಮುಖ ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಪ್ರಭಾವ ಭೂಗೋಳವು ಇತಿಹಾಸದೊಡನೆ ನಿಕಟ ಸಂಬಂಧ ಹೊಂದಿದೆ. ಯಾವುದೇ ಪ್ರದೇಶದ ಮಾನವನ ಜೀವನಕ್ರಮ ಮತ್ತು ಇತಿಹಾಸ ಅಲ್ಲಿನ ಭೌಗೋಳಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ. ಪ್ರಕೃತಿ ಲಕ್ಷಣಗಳಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಾನವನ ಇತಿಹಾಸದ ಬೆಳವಣಿಗೆಯೂ ಮಾರ್ಪಡುತ್ತದೆ. ಏಕೆಂದರೆ ಪ್ರಕೃತಿಯ ಮೇಲ್ಬಾಗದ ಅವಯವಗಳಾದ ಗಾಳಿ, ನದಿ, ಪರ್ವತ, ಸಮುದ್ರ, ಭೂಗುಣ, ಖನಿಜ ಸಂಪತ್ತು ಇತ್ಯಾದಿಗಳ ಕೈವಾಡ ಆಯಾ ದೇಶದ ಇತಿಹಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ಒಂದು ದೇಶದ ಅಥವಾ ಜನಾಂಗದ ಇತಿಹಾಸ ಅರಿಯಲು ಭೂಗೋಳದ ತಿಳಿವಳಿಕೆ ಅತ್ಯವಶ್ಯ. ವಿದೇಶಿ ಪ್ರವಾಸಿಗರ ವರದಿಗಳು ಭೌಗೋಳಿಕ ಪರಿಜ್ಞಾನವಿಲ್ಲದ ಇತಿಹಾಸದ ಅಧ್ಯಯನ ಕೂಡ ವ್ಯರ್ಥ, ಉದಾಹರಣೆಗೆ ಅಶೋಕನ ಸಾಮ್ರಾಜ್ಯ ತುಂಬ ವಿಶಾಲವಾಗಿತ್ತು: ಅತಿ ದೊಡ್ಡದು ಎನ್ನುವಾಗ ಭೌಗೋಳಿಕ ಮೇರೆಗಳ ಚಿತ್ರ ಅತ್ಯವಶ್ಯ. ಅವನ ರಾಜ್ಯ ಪಶ್ಚಿಮದಲ್ಲಿ ಆಫ್ಘಾನಿಸ್ತಾನ, ಉತ್ತರದಲ್ಲಿ ನೇಪಾಳ, ಪೂರ್ವದಲ್ಲಿ ಕಾಮರೂಪ ಹಾಗೂ ದಕ್ಷಿಣದಲ್ಲಿ ನಲ್ಲೂರಿನವರೆಗೂ ವಿಸ್ತರಿಸಿದ್ದಿತು ಎಂದು ವಿವರಿಸಲು ಹಾಗೂ ಸುಲಭ ಗ್ರಹಿಕೆಗೂ ಭೌಗೋಳಿಕ ಅರಿವು ಅವಶ್ಯ. ಹಾಗೆಯೇ ಕಾಲಗಣನೆ (Chronology) ಕೂಡ. ಅದು ಯಾವ ಕಾಲದಲ್ಲಿ ಈ ಘಟನ ಸಂಭವಿಸಿತು: ಅಶೋಕ ಅಥವಾ ಮಹಾತ್ಮಾ ಗಾಂಧಿ ಜೀವಿಸಿದ್ದರು ಎಂಬುದನ್ನು ತಿಳಿಸುತ್ತದೆ, ರಿಚರ್ಡ್ ಹಕ್ಕೂಯತ್ ಹೇಳುವಂತೆ: ಭೂಗೋಳ...

ಕರ್ನಾಟಕದ ಪ್ರದರ್ಶನ ಕಲೆಗಳು OEC HISTORY

ಕರ್ನಾಟಕದ ಜಾನಪದ ಕಲೆಗಳು ಗ್ರಾಮೀಣ ಬದುಕಿನ ಅನಕ್ಷರಸ್ಥರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ' ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ. ಈ ಜಾನಪದ ಪ್ರಕಾರವನ್ನು ಸಂಸ್ಕೃತಿಯ ಒಂದು ಭಾಗವೆಂದು ಭಾವಿಸಬೇಕಾಗಿರುವುದರಿಂದ ಇದರ ಉಳಿವು ನಮ್ಮ ಕೈಲಿದೆ. ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗ್ರಾಮೀಣ ಪ್ರತಿಭೆಗಳನ್ನು ಹುಡುಕಿ ಈ ಪ್ರಕಾರದ ಜೀವಂತಿಕೆಗೆ ಶ್ರಮಿಸಬೇಕಾದ ಅಗತ್ಯವಿದೆ. ಅನೇಕ ಗ್ರಾಮೀಣ ಕಲೆ ಮತ್ತು ಆಚರಣೆಗಳು ಸಮಾಜದ ಮುಖ್ಯವಾಹಿನಿಗೆ ಬಾರದೆ ಎಲೆಮರೆಯ ಕಾಯಾಗಿ ಮರೆಯಲ್ಲಿಯೇ ಅಳಿದು ಹೋಗುತ್ತಿವೆ. ಅದರ ಸೊಗಡನ್ನು ಉಳಿಸುವ ಮತ್ತು ಮುಂದಿನ ತಲೆಮಾರಿಗೆ ಇದರ ಸವಿಯನ್ನು ಉಳಿಸಿ ಉಣಬಡಿಸುವ ಗುರುತರವಾದ ಜವಾಬ್ದಾರಿಯು ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ವೀರಗಾಸೆ ವೀರಗಾಸೆಯು ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್...

ಬಿ.ಎ. ಪ್ರಥಮ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳು

ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು, ಕಲ್ಲೋಳಿ ಕರ್ನಾಟಕದ  ಸಾಂಸ್ಕೃತಿಕ ಇತಿಹಾಸ(OCE) BA Ist Semester Model question Paper Total Marks : 60.    Total time: 2 hours Section A *Q.1 ಬೇಕಾದ ಎರಡು ಪ್ರಶ್ನೆಗಳಿಗೆ ಟಿಪ್ಪಣಿ ಬರೆಯಿರಿ.   ೨×೫=೧೦* ೧. ಕರ್ನಾಟಕದ ಪ್ರಾಚೀನತೆ ೨. ಶಿಕ್ಷಣ ಪದ್ಧತಿ ಮತ್ತು ಅಗ್ರಹಾರ ೩. ದಸರಾ ಮತ್ತು ಮಹಾಮಸ್ತಕಾಭಿಷೇಕ ೪. ಪ್ರದರ್ಶನ ಕಲೆಗಳು Section B *Q. 2. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ. 2×10=20* ೧. ಪ್ರಾಚೀನ ಕರ್ನಾಟಕ ಅಧ್ಯಯನದ ಶಾಸನಗಳು ತಿಳಿಸಿರಿ‌. ೨. ಪ್ರಾಚೀನ ಕರ್ನಾಟಕದ ಕೃಷಿ ಪದ್ಧತಿ ಹಾಗೂ ನಿರಾವರಿ ವ್ಯವಸ್ಥೆಯನ್ನು ವಿವರಿಸಿ. ೩. ಭೂದತ್ತಿ ಎಂದರೇನು? ಪ್ರಕಾರಗಳನ್ನು ವಿವರಿಸಿರಿ. ೪. ಕರ್ನಾಟಕ ಹಿಂದೂ ಧರ್ಮದ ವಿವಿಧ ಪಂಥಗಳಾದ ಶೈವ, ವೈಷ್ಣವ, ಭಾಗವತ ಪಂಥಗಳ ಕುರಿತು ಬರೆಯಿರಿ. Section C *Q.3. ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ. ನಕಾಶೆ ಪ್ರಶ್ನೆ ಕಡ್ಡಾಯ. 2×15=30* ೧. ೩ನೇ ಶತಮಾನದಿಂದ ೧೦ನೇ ಶತಮಾನದ ವರೆಗಿನ ಸಾಹಿತ್ಯದ ಬೆಳವಣಿಗೆಯನ್ನು ತಿಳಿಸಿರಿ. ೨. ಪ್ರಾಚೀನ ಕರ್ನಾಟಕದ ಸಾಮಾಜಿಕ ಜೀವನವನ್ನು ವಿವರಿಸಿರಿ. ೩. ಪ್ರಾಚೀನ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪವನ್ನು ತಿಳಿಸಿರಿ. ೪. ಕರ್ನಾಟಕದ ಜೈನ ಮತ್ತು ಬೌದ್ಧ ಕೇಂದ್ರಗಳ ಕುರಿತು ಬರೆಯಿರಿ. ----------------------- DSC 1: ಕರ್ನಾಟಕ ರಾಜಕೀಯ ಇತ...