ಅಂತರಂಗದ ಕತ್ತಲೆಗೆ ಬೆಳಕ ಶಬ್ದ ಬಿತ್ತುವ ದೇವಗುರು. ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ.
ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹದ ತಾಪ. ಪ್ರಕಾಶದ ಮಹಾ ಶರೀರ ಕಣ್ಣ ಬೆಳಕಿನ ಜ್ಯೋತಿರ್ಲಿಂಗ .
ಅನಂತದಲ್ಲಿನ ಆತ್ಮ, ಬಯಲ ಬೆಸುಗೆಗೆ ಜೋಗುಳ ಲಾಲಿ. ನಕ್ಷತ್ರ ಮಿಂಚು ತಂಗಾಳಿಗಳ ಹಸುಗು ಸಂತೆ. ಚಂದ್ರಮುಖಿಯ ರೋಧನ, ಬೆಳದಿಂಗಳ ಕಳೆಗುಂದಿದ ಕಾಂತಿ.
ಕರಗುವ ಹಿಮ, ದರ್ಶನದ ಮೇರು, ಮದ್ದಳೆಯ ನಾದವೇ ಗಟ್ಟಿಮೇಳ...
ತುಟಿಯ ಮೌನಕ್ಕೆ ಬಾಗಿದ ತಲೆ, ನನ್ನ ಹೃದಯಕ್ಕಿಗ ಸಾವಿರದ ಮಾತು.
ಕಣ್ಣ ಕಾಡಿಗೆಯ ಕಾರ್ಮೋಡ, ಸಿವುಡುಗಟ್ಟಿದ ಸಿಟ್ಟು .ಕಪ್ಪು ಕಳೆದುಕೊಂಡ ಮುಗಿಲು, ತಪಗುಟ್ಟಿ ಜಿನುಗುವ ಕಣ್ಣಾಲಿ. ಮಾಯೆಯ ವಿರಹಕ್ಕೀಗ ಮತ್ತೆ ಮರೆಯದ ಹರೆಯ..
ಬೆನ್ನಟ್ಟಿದ ಅದೇ ಕಂಗಳು, ತುಟಿಯಂಚಿನ ಕೋಲ್ಮಿಂಚು.ಮುಂಗುರುಳ ದುಂಬಿ' ಮಾದಕ ನಗೆ' ನೀ ಅರಸಿಬಂದ ಅನುರಾಗ.ಮಾತುಮೌನ ನಿಟ್ಟುಸಿರ ಕಥೆಯಾಗಿಸುವುದಾದರೆ, ಭೋರ್ಗರೆದು ಸುರಿದು ಬಿಡುವೆ ಯಾವ ಒಡಂಬಡಿಕೆಗಳಿಲ್ಲ...
ಸ್ವರ ಲಾವಣಿ ನೂರು ಪದ ಸರಣಿ, ಪೊಣಿಸಿದ ಮುತ್ತುಗಳೆಲ್ಲಾ ಎದೆಯ ಬಾರಕ್ಕೆ ಕಳೆಗುಂದದಿರಲಿ..ಒಲವ ಸರಕು ಬಿಕರಿಯಾಗಲು ಬದುಕು ವ್ಯಾಪಾರವಲ್ಲ.ನಿನ್ನ ಜಂಗಮನಾದಕ್ಕೆ ತಾಳ ತಪ್ಪಿದ ಕಾಲ್ಗೆಜ್ಜೆ ,ಮದ್ದಲೆಯ ಸುನಾದಕ್ಕೆ ಮಾತ್ರ ಸಾವಿಲ್ಲ...
ಕೈ ಬೆರಳುಗಳ ಬೆರಗು, ಮೋಹನ ಮುರಳಿ ಎದೆಯ ಮೀಟಿದ ತಂತಿ.ಭಾವ ಬಸಿರು ಬಗೆದು ಬಂದ ಒಲವಗಾನ ಘನಪ್ರೇಮದ ಸಂತಿ.
ನೀನೇ ಬರೆಯಬೇಕಿಗ, ಹೃದಯ ಶಾಹಿಯಿಂದ ಕಥೆಯೋ ಕವನವೋ.ದಿಕ್ಕು ತಪ್ಪಿದ ವರ್ಣಮಾಲೆ ಖಾಲಿಯಾದ ಪದ ಭಂಡಾರ ...
ಅಂಗಾಂಗಗಳ ವರ್ಣರಂಜಿತ ಹೊಗಳಿಕೆ ಬೇಕಿಲ್ಲ.ಯಾವ ಪ್ರಮೇಯಗಳಿಗೂ ಹೋಲಿಸಬೇಡ.
ಅರಸಿಬಂದ ಅರಸನ ಕನಸ ಕಂಗಳ ಚಲುವೆ . ನೀ ಕಟ್ಟುವ ಪದಬಂಧದ ಶಬ್ದ ಮಾಲೆಗೆ ಕೇವಲ ಪ್ರತಿಮೆ ಮಾತ್ರ..
ಸೋಬಾನೆಗೆ ಸೋನೆ ಮಳೆಯ ಉಯ್ಯಾಲೆ .ಅಮಾವಾಸ್ಯೆಯ ಚಂದ್ರನೀಗ ಹುಣ್ಣುಮೆಯ ಮದುವಣಿಗ. ನಾ ಬೆಳದಿಂಗಳ ಬಾಲೆ, ನಿತ್ಯವೂ ಮಲ್ಲಿಗೆ ದಂಡೆಯ ಮುಡಿಗೇರಿಸಿ ಕೊಂಡ ಮದುವಣಗಿತ್ತಿ .ಸುರಿವ ಮಳೆ ಕೊರೆವ ಚಳಿ ತುಟಿಯ ನಗು ನಿನ್ನ ಅಲ್ಲಮನಾಗಲೂ ಬಿಡೆನೂ ನಾ...
✍️ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ, ರಾಚವಿ ಬೆಳಗಾವಿ
*******************
"ಅಲ್ಲಮನಾಗುವುದಾದರೆ........"ಕವಿತೆಯ ವಿಮರ್ಶೆ ಪ್ರೊ. ಸುರೇಶ ಮುದ್ದಾರ
ಅಲೌಕಿಕತೆಯ ಮುಂದೆ ಲೌಕಿಕತೆಯ ತುಡಿತ, ಮಿಡಿತ ಮತ್ತು ತಲ್ಲಣಗಳು ಹೇಗೆ ಸೋತು ಗೆಲ್ಲುತ್ತವೆ ಎಂಬುದನ್ನು ಪ್ರಸ್ತುತ "ಅಲ್ಲಮನಾಗುವುದಾದರೆ" ಕವಿತೆ ಅತ್ಯಂತ ಸುಂದರವಾದ ಪ್ರತಿಮೆಗಳ ಮೂಲಕ ಓದುಗರನ್ನು ಬೆರಗುಗೊಳಿಸುತ್ತದೆ.
ಸಾತ್ವಿಕತೆ ಎಂಬುದು ದಿವ್ಯವಾದ ಮೇರು ಪರ್ವತ ಹಾಗೆಯೇ ತಾಮಸ ಎಂಬುದು ಭವ್ಯವಾದ ಆಳ ಕಣಿವೆ. ಇವೆರಡೂ ಒಂದಾಗುವುದು ಅಸಾಧ್ಯ. ಆದರೂ ಭವ್ಯತೆಯು ದಿವ್ಯತೆಯಲ್ಲಿ ಲೀನವಾದಾಗ ಲೌಕಿಕತೆಯನ್ನು ಮೀರಿದ ಜೀವನ ದರ್ಶನವಾಗುತ್ತದೆ.
ಅಲ್ಲಮ ಸಾತ್ವಿಕತೆಯ ಪ್ರತಿರೂಪ, ಮಾಯೆ ತಾಮಸ ಪ್ರತಿರೂಪ. ಮಾಯೆ ತನ್ನ ಮಾಯಾ ಪ್ರೇಮದ ಮೂಲಕ ಅಲ್ಲಮನನ್ನು ಪ್ರಚೋಧಿಸುವ,ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಕವಿತೆ ಸಾಲಿನಂತೆ, ' ಘನ ಪ್ರೇಮದ ಮಾಯೆಗೆ ಮರಿಚಿಕೆ ನಿತ್ಯ ಪ್ರೀತಿ' ಎನ್ನುವ ಹಾಗೆ ಅಂತರಂಗದ ಕತ್ತಲೆಗೆ ಬೆಳಕಾಗಿರುವ ಅಲ್ಲಮ ಮಧುರ ಪ್ರೇಮದ ಗರ್ಭದಲ್ಲಿ ಕಟು ವಿರಹವನ್ನೆ ತುಂಬುತ್ತಾನೆ. ಅವನ ಮದ್ದಳೆಯ ಧ್ವನಿ ಮಾಯೆಗೆ ಕಾರ್ಮೋಡಿನ ಘರ್ಜನೆಯಂತೆ ಕೇಳಿ ತನುವಿನಲ್ಲಿ ಪುಳಕಗೊಂಡು ತನ್ನ ವಿರಹಕ್ಕೆ ಮತ್ತೆ ಹರೆಯ ತುಂಬಿಕೊಂಡು ಸೋಗೆಯಂತೆ ನಲಿಯುತ್ತಾಳೆ. ಆದರೆ ಕರಗುವ ಹಿಮ ಅಲ್ಲಮನಲ್ಲ. ಅವನು ದರ್ಶನದ ಮೇರು ಪರ್ವತ.
ಆದರೂ ಸೋತು ಶರಣಾಗುವವಳಲ್ಲ ಮಾಯೆ. ಸಾತ್ವಿಕ ಪ್ರೀತಿಯ ಮೇಲೂ ತಾಮಸ ಪ್ರೇಮದ ಜ್ವಾಲೆಯ ಕೆಂಪು ನೆರಳು ಬೀಳುವಂತೆ, ಮಾಯೆಯ ಕೈ ಬೆರಳ ಬೆರಗು,ಮೋಹನ ಮುರಳಿ ಗಾನ, ಎದೆ ಮೀಟುವ ತಂತಿ ಒಲವ ಸರಕು ಬಿಕರಿಯಾಗಲು ಬಿಡುವುದಿಲ್ಲ. ' ನೀ ಎಷ್ಟೆ ದೂರ ಸರಿದರೂ ನಾನು, ಅರಸಿ ಬಂದ ಅರಸನ ಕನಸು ಕಂಗಳ ಚೆಲುವೆ. ನಾನು ಸುಗಂಧ ರಹಿತ ಪುಷ್ಪವಲ್ಲ. ದುಂಬಿ ಅರಸುವ ಹೂವು ನಾನು, ನಾನು ಬೆಳದಿಂಗಳ ಬಾಲೆ, ನಿತ್ಯ ಮಲ್ಲಿಗೆ ದಂಡೆ ಮುಡಿದುಕೊಳ್ಳುವ ಮದುವಣಗಿತ್ತಿ, ಮಳೆಯಂತೆ ಸುರಿಯುವ ರಸಭಾವಗಳು, ರೋಮಾಂಚನಗೊಳಿಸುವ ಮಧುರ ಚಳಿ. ನಾನು ನಿನ್ನ ಅಲ್ಲಮನಾಗಲು ಬಿಡಲಾರೆ.
ಪ್ರಸ್ತುತ ಕವಿತೆ ವರ್ತಮಾನದ ಸ್ತ್ರೀ ಸಂವೇದನೆಯ ಮೇಲೆ ಬೆಳಕು ಚಲ್ಲುತ್ತದೆ. ಅಲ್ಲಮನಾಗುವುದಾದರೆ, ಕಳೆಗುಂದಿದ ಬೆಳದಿಂಗಳಂತಾಗದೆ ಮಧುರ ಪ್ರೇಮದ ಬೆಳದಿಂಗಳಾಗು. ಮಾಯೆಯ(ಸ್ತ್ರೀ) ಒಲವಿಗೂ ಸಾತ್ವಿಕತೆ ಇದೆ. ಮಾಯೆಯ ಮಧುರ ಒಲವಿನಲ್ಲಿಯೂ ಜೀವನ ದರ್ಶನವಿದೆ. ಆದ್ದರಿಂದ ಅಲ್ಲಮನಾಗುವುದಾದರೆ , ಮಧುರ ಪ್ರೇಮದ ಅಲ್ಲಮನಾಗು ಘನ ಪ್ರೇಮದ ಮಾಯೆಗೆ ಮರಿಚಿಕೆಯಾಗಲು ನಾನು ಬಿಡುವುದಿಲ್ಲ.
ಹೆಣ್ಣು ಮಾಯೆಯಂಬ ಭ್ರಮೆಯಲ್ಲಿ ನೋಡದೆ , ಅದರಾಚೆಗೂ ದೃಷ್ಟಿ ಬೀರುವ ಅಲ್ಲಮ ಬೇಕು. ಎಂಬ ವರ್ತಮಾನದ ಸ್ತ್ರೀ ಭಾವ ಇಲ್ಲಿದೆ. ಕವಿತೆ ಅಲ್ಲಮನ ಮೇರು ವ್ಯಕ್ತಿತ್ವವನ್ನು ಅತ್ಯಂತ ಘನವಾಗಿ ಚಿತ್ರಿಸಿದಂತೆ, ಮಾಯೆಯ ಮಧುರ ಪ್ರೇಮದ ಅಗಾಧತೆಯನ್ನು ಅಷ್ಟೆ ಮಾಧುರ್ಯವಾಗಿ ಅನೇಕ ಸುಂದರವಾದ ವಿಶಿಷ್ಟ ಪ್ರತಿಮೆಗಳೊಂದಿಗೆ ಚಿತ್ರಿಸಿದ್ದಾರೆ. ಈ ಕವಿತೆಯನ್ನು ಓದುವಾಗ ಭಾಷೆ ಹಿಂದೆ ಸರಿದು ಭಾವ ಮುಂದೆ ಬರುವ ಅನುಭವವಾಗುತ್ತದೆ. ಒಟ್ಟಾರೆಯಾಗಿ ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ ಅವರ "ಅಲ್ಲಮನಾಗುವುದಾದರೆ" ಕವಿತೆ ಪ್ರಸ್ತುತ ಸ್ತ್ರೀಪರ ನಿಲುವಿನ ಒಳನೋಟಗಳ ಭಾವಪೂರ್ಣ ಕವಿತೆಯಾಗಿದೆ.
- ಸುರೇಶ ಮುದ್ದಾರ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ